ADVERTISEMENT

ಚುರುಮುರಿ: ಗೃಹಲಕ್ಷ್ಮಿ ವ್ರತ

ಮಣ್ಣೆ ರಾಜು
Published 5 ಆಗಸ್ಟ್ 2025, 23:21 IST
Last Updated 5 ಆಗಸ್ಟ್ 2025, 23:21 IST
.
.   

ಟಿ.ವಿ ಚಾನೆಲ್‌ನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಗುರೂಜಿ ಪ್ರತ್ಯಕ್ಷರಾದರು.

‘ಗುರೂಜಿ, ವರಮಹಾಲಕ್ಷ್ಮಿ ಹಬ್ಬ ಬಂದಿದೆ, ಗೃಹಲಕ್ಷ್ಮಿ ದುಡ್ಡು ಬಂದಿಲ್ಲ...’ ಸುಮಿ ಫೋನ್ ಮಾಡಿ ಕಷ್ಟ ಹೇಳಿಕೊಂಡಳು.

‘ಗೃಹಲಕ್ಷ್ಮಿ ವ್ರತ ಮಾಡು, ಸರ್ಕಾರಿ ಲಕ್ಷ್ಮಿ ಒಲಿದು ಬರ್ತಾಳೆ’ ಎಂದರು ಗುರೂಜಿ.

ADVERTISEMENT

‘ಮಾಡ್ತಿದ್ದೀನಿ ಗುರೂಜಿ, ಈ ಬಾರಿ ವರಮಹಾಲಕ್ಷ್ಮಿ ಜೊತೆ ಗೃಹಲಕ್ಷ್ಮಿಯನ್ನೂ ಕೂರಿಸಿ ಪೂಜೆ ಮಾಡ್ತೀನಿ’.

‘ಇಬ್ಬರೂ ಲಕ್ಷ್ಮಿಯರಿಗೆ ಉಡಿಸಲು ಎರಡು ಹೊಸ ಸೀರೆ ತಂದಿದ್ದಿಯೇನಮ್ಮಾ?’

‘ಮೂರು ಸೀರೆ ತಂದಿದ್ದೀನಿ ಗುರೂಜಿ, ಮನೆಯ ಮಹಾಲಕ್ಷ್ಮಿಯಾದ ನಾನು ಹಬ್ಬದ ದಿನ ಹೊಸ ಸೀರೆ ಉಡಬೇಕಲ್ವಾ?’

‘ಹೌದೌದು. ದೇವರು ಒಳ್ಳೆಯದು ಮಾಡಲಿ’.

‘ಮಹಾಲಕ್ಷ್ಮಿ ಪೂಜಾ ಪದ್ಧತಿ ಗೊತ್ತು. ಗೃಹಲಕ್ಷ್ಮಿಯ ಪೂಜಾ ವಿಧಾನಗಳು ಏನು ಗುರೂಜಿ?’

‘ನನಗೂ ಮಹಾಲಕ್ಷ್ಮಿ ಪೂಜೆ ಮಾತ್ರ ಗೊತ್ತು, ಗೃಹಲಕ್ಷ್ಮಿ ಪೂಜೆ ನನ್ನ ಸಿಲೆಬಸ್‌ನಲ್ಲಿ ಇಲ್ಲಾ ತಾಯಿ’.

‘ಹಬ್ಬದಲ್ಲಿ ಕೂರಿಸುವ ಇಬ್ಬರು ಲಕ್ಷ್ಮಿಯರಿಗೆ ಹೊಸ ಸೀರೆ ಉಡಿಸಿದರೆ ಸಾಕಾಗುವುದಿಲ್ಲ. ಅವರ ಕಿವಿಗೆ, ಮೂಗಿಗೆ, ಕೊರಳಿಗೆ, ಸೊಂಟಕ್ಕೆ ಒಡವೆ ತೊಡಿಸಬೇಕಲ್ವಾ? ಇಬ್ಬರ ಮುಂದೆ ಒಂದೊಂದು ತಟ್ಟೆ ತುಂಬಾ ನೋಟಿನ ಕಂತೆ ಇಡಬೇಕಲ್ವಾ ಗುರೂಜಿ?’

‘ಹೌದಮ್ಮ. ಹೀಗೆಲ್ಲಾ ಅಲಂಕಾರ ಮಾಡಿ ಪೂಜಿಸಿದರೆ ಲಕ್ಷ್ಮೀಕಟಾಕ್ಷವಾಗುತ್ತದೆ’.

‘ಗುರೂಜಿ, ನೀವು ಹತ್ತೂ ಬೆರಳಿಗೂ ತಲಾ ಎರಡೆರಡು ಉಂಗುರ ಹಾಕಿಕೊಂಡು, ಕೊರಳಲ್ಲಿ ದೊಡ್ಡ ಬಂಗಾರದ ಸರ ಧರಿಸಿ, ಜರತಾರಿ ಶಾಲು ಹೊದ್ದು ಲಕ್ಷಣವಾಗಿ ಕಾಣ್ತಿದ್ದೀರಿ! ಇನ್‌ಕಮ್‌ ಟ್ಯಾಕ್ಸ್‌ನವರ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳದಿರಲಿ!’

ಗುರೂಜಿಗೆ ಶಾಕ್ ಆಯ್ತು. ‘ಹಾಗೆಲ್ಲಾ ಮಾತನಾಡ ಬಾರದಮ್ಮ, ನಿಮ್ಮ ಸಮಸ್ಯೆ ಮಾತ್ರ ಹೇಳಬೇಕು’ ಎಂದು ಸಿಟ್ಟಾದರು. ಚಾನೆಲ್‌ನವರು ತಕ್ಷಣ ಸುಮಿಯ ಫೋನ್ ಕಟ್ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.