ADVERTISEMENT

ಲ್ಯಾಂಗ್ವೇಜ್ ಪ್ರಾಬ್ಲಂ

ಮಣ್ಣೆ ರಾಜು
Published 1 ಮಾರ್ಚ್ 2020, 19:45 IST
Last Updated 1 ಮಾರ್ಚ್ 2020, 19:45 IST
   

‘ಮಂತ್ರಿ, ಮುಖ್ಯಮಂತ್ರಿ ನಂತ್ರ ಮುಂದೇನು?’ ಅಂದ ಶಂಕ್ರಿ.

‘ಇದೇನೋ, ಎಸ್‍ಎಸ್‍ಎಲ್‍ಸಿ, ಪಿಯುಸಿ ನಂತರ ಮುಂದೇನು ಅಂತ ಸ್ಟೂಡೆಂಟ್ಸ್‌ಗೆ ಕೇಳಿದಂಗೆ ಕೇಳ್ತೀಯಾ. ಸಿ.ಎಂ ಆದವರು ಮುಂದೆ ರಾಷ್ಟ್ರ ರಾಜಕಾರಣದ ಕೋರ್ಸಿಗೆ ಸೇರಿ ಕೇಂದ್ರ ಮಂತ್ರಿ, ಪ್ರಧಾನ ಮಂತ್ರಿ ಹುದ್ದೆ ಪಡೆಯುವ ಅವಕಾಶವಿದೆ’.

‘ಪಿಯುಸಿ, ಡಿಗ್ರಿ ಮುಗಿಸಿದ ಈಗಿನ ಸ್ಟೂಡೆಂಟ್ಸ್, ಹೈಯರ್ ಸ್ಟಡೀಸ್‌ಗೆ ಫಾರಿನ್ನಿಗೆ ಹಾರ್ತಾರೆ, ನಮ್ಮ ಅನುಭವಿ ನಾಯಕರು ದಿಲ್ಲಿ ಹುದ್ದೆಗೆ ಹೌಹಾರ್ತಾರಲ್ಲ’.

ADVERTISEMENT

‘ನಾಯಕರ ಹಿಂಜರಿಕೆಗೆ ಲ್ಯಾಂಗ್ವೇಜ್ ಪ್ರಾಬ್ಲಂ ಕಾರಣವಂತೆ. ಕನ್ನಡ ಮೀಡಿಯಂನವರಿಗೆ ಹಿಂದಿ, ಇಂಗ್ಲಿಷ್ ಮೀಡಿಯಂ ಕಷ್ಟ ಅಲ್ವಾ?’

‘ಗ್ರಾಮೀಣ ಪ್ರತಿಭೆ ದೇವೇಗೌಡರು ಪ್ರಧಾನಿ ಆಗಿದ್ರಲ್ಲ. ಅವರೇನು ಹಿಂದಿ, ಇಂಗ್ಲಿಷ್
ಪಂಡಿತರಾಗಿದ್ದರೇ?’

‘ದೇವೇಗೌಡರು ಐದು ವರ್ಷದ ಪ್ರಧಾನಿ ಕೋರ್ಸನ್ನು ಕಂಪ್ಲೀಟ್ ಮಾಡಲಾಗಲಿಲ್ಲ. ಮತ್ತೊಂದು ಅಟೆಂಪ್ಟ್ ಅಟೆಂಡ್ ಮಾಡಲೂ ಸಾಧ್ಯವಾಗುತ್ತಿಲ್ಲ, ಕಾರಣ ಲ್ಯಾಂಗ್ವೇಜ್ ಪ್ರಾಬ್ಲಂ’.

‘ಸಿ.ಎಂ ಕೋರ್ಸ್ ಪಾಸಾಗಿರುವ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರ ಸ್ವಾಮಿ, ಜಗದೀಶ ಶೆಟ್ಟರ್ ರಾಷ್ಟ್ರ ರಾಜಕಾರಣದ ಹೈಯರ್ ಸ್ಟಡೀಸ್‌ಗೆ ಆಸಕ್ತಿ ತೋರಿಸುತ್ತಿಲ್ಲ. ಮಾಜಿ ಸಿ.ಎಂ ಸದಾನಂದಗೌಡರು ಸಣ್ಣಪುಟ್ಟ ಕೋರ್ಸ್ ಮಾಡ್ತಿದ್ದಾರೆ’.

‘ಎಸ್.ಎಂ.ಕೃಷ್ಣ ಮಾತ್ರ ಸಿ.ಎಂ ಕೋರ್ಸ್‌ ಮುಗಿಸಿ, ಸೆಂಟ್ರಲ್ ಸ್ಟಡಿ ಮಾಡಿ ಫಾರಿನ್ ಮಿನಿಸ್ಟರ್ ಆಗಿದ್ರು’.

‘ರಾಷ್ಟ್ರ ರಾಜಕಾರಣಕ್ಕೆ ಲ್ಯಾಂಗ್ವೇಜ್ ಪ್ರಾಬ್ಲಂ ಎದುರಾದರೆ ಹೇಗೆ, ಭಾಷಾ ಅಲ್ಪಸಂಖ್ಯಾತರಿಗೆ ರಾಷ್ಟ್ರ ಹುದ್ದೆಯಲ್ಲಿ ಮೀಸಲಾತಿ ತಂದು ನಮ್ಮ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ’.

‘ಜೊತೆಗೆ ನಾಯಕರಿಗೆ ರಾಜ್ಯ ಸರ್ಕಾರವು ಸ್ಪೋಕನ್ ಇಂಗ್ಲಿಷ್, ಹಿಂದಿ ತರಗತಿ ಆರಂಭಿಸಿ ಭಾಷೆ ಕಲಿಸಿ, ಆತ್ಮವಿಶ್ವಾಸ ತುಂಬಬೇಕು’.

‘ಹೌದೌದು, ಒಮ್ಮೆ ಸಿ.ಎಂ ಆದವರು ಮತ್ತೆ ಅದೇ ಕೋರ್ಸ್ ಮಾಡಬಾರದು, ದೆಹಲಿ ಹುದ್ದೆ ಕಡೆ ಹೋಗಬೇಕು. ಹೊಸ ನೀರಿಗೆ ಹಳೆ ನೀರು ಜಾಗ ಬಿಟ್ಟುಕೊಡಬೇಕಲ್ವಾ?’ ಅಂತ ಕಣ್ಣು ಹೊಡೆದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.