ADVERTISEMENT

ಚುರುಮುರಿ: ಕಲಬೆರಕೆ ಕಾಂಡ

​ಪ್ರಜಾವಾಣಿ ವಾರ್ತೆ
ಲಿಂಗರಾಜು ಡಿ.ಎಸ್
Published 7 ಏಪ್ರಿಲ್ 2025, 23:30 IST
Last Updated 7 ಏಪ್ರಿಲ್ 2025, 23:30 IST
   

‘ಇಂದು ನಾನು ಪೊಂದುವೆನಾನಂದವಾ, ಸಂದೇಹವಿಲ್ಲದೆ ಬಡ ನರರ ಹುರಿದು ಸಂಡಿಗೆಯ ಮಾಡಿ, ಕರುಳಕಿತ್ತು ಶಾವಿಗೆಯ ಪಾಯಸವ ಮಾಡಿ ಕುಡಿಯುವೆ...’ ತುರೇಮಣೆ ನಾಟಕದ ದಿರುಸಿಲ್ಲದೇ ಘೋರ ಶೂರ್ಪನಖಿಯ ಪದ್ಯ ಹಾಡಿಕ್ಯಬತ್ತಿದ್ದರು.

‘ಏನ್ಸಾ, ಏನು ವಿಶೇಷ? ಹೊತ್ನಂತೇ ಗ್ಯಾನಪದ ಗೀತೆ ಹಾಡಿಕ್ಯ ಬತ್ತಿದ್ದರಿ? ಅದ್ಯಾರು ನಿಮ್ಮ ಮೂಗು ಕೂದೋರು?’ ತುರೇಮಣೆಗೆ ಕೇಳಿದೆ.

‘ಯಾರಿಗೇಳನಪ್ಪಾ ನಮ್ಮ ಪ್ರಾಬ್ಲಮ್ಮು. ರಾಜಕೀಯದ ಕಲಬೆರಕೆಯ ಹೊಡೆತಕ್ಕೆ ನಮ್ಮ ಮೂಗು-ಬಾಯಿ, ನಾಲಿಗೆ, ಕಣ್ಣು ಕೆಟ್ಟು ಕೆರ ಹಿಡಿದೋಗ್ಯವೆ. ಬಾಯಲ್ಲಿ ಮಾತ್ರ ಜನದ ಆಶಯವೇ ಮುಖ್ಯ ಅಂತರೆ ಕನೋ. ಬರೀ ಗಾಳಿಗಂಟಲು, ಗಿಲೀಟು ಮಾತು, ಚಿತಾವಣೆ, ಬಂಡಾಟ’ ನಿಟ್ಟುಸಿರುಬುಟ್ಟರು.

ADVERTISEMENT

‘ಸರ್ಕಾರದ ಎಲ್ಲಾ ನಿಗಮ-ಮಂಡಳಿಗಳು ಕುಲಗೆಟ್ಟು ಹಗರಣ ಮಾಡಿಕ್ಯಂದವೆ. ನೇಮಕಾತಿಗಳಲ್ಲಿ ಭ್ರಷ್ಟಾಚಾರ ಬೇರುಬುಟ್ಟದೆ. ರಾಜಕಾರಣಿಗಳ ಹೆಸರು ಬರೆದು ನೇಣಾಕ್ಕ್ಯಂದರೂ ಕ್ರಮ ಇಲ್ಲ. ಬರೀ ಟ್ವಿಸ್ಟ್ ಮಾತ್ರ. ಹನಿಟ್ರಾಪ್ ಅಂತರೆ, ಸುಮ್ಮಗಾಯ್ತರೆ. ಸುಳ್ಳು ಮಾತಾಡಿ ಮಾತಾಡಿ ತಳ್ಳಾಯ್ತರೆ’ ಬೇಜಾರು ಮಾಡಿಕ್ಯಂದೆ.

‘ರಾಜಕೀಯದೋರ ತೆವಲಿಗೆ ಹಾಲು-ನೀರು, ಕರಂಟು, ಎಣ್ಣೆ, ಡೀಜೆಲ್ಲು, ಟೋಲು ರೇಟು ಮ್ಯಾಕ್ಕೋಗಿ ಅಟ್ಟ ಸೇರಿಕ್ಯಂಡವೆ. ಅಷ್ಟೇ ಯಾಕೆ ಮಂಜಮ್ಮನಂತಾ ಮಂಜಮ್ಮನೂ ಟೀ ರೇಟು ಏರಿಸ್ತಳಂತೆ. ಮೊನ್ನೆ ಮಲ್ಲೇಶಣ್ಣ ಹಂಗಂತಿದ್ದ’ ಯಂಟಪ್ಪಣ್ಣ ಸಾರಣೆ ಮಾಡಿತು.

‘ಅಧಿಕಾರ ಸಿಕ್ಕೂಗಂಟ ಆಕ್ರೋಶ. ಸಿಂಹಾಸನ ಸಿಕ್ಕಿದ ಮೇಲೆ ಗಡಿಬಿಡಿ. ಇಕ್ಕಡೆ ಮೈತ್ರಿಯಲ್ಲಿ ಅಹಂ-ಖಾರ ಕಾಣ್ತಾ ಅದೆ’ ಅಂತಂದೆ.

‘ರಾಜಕಾರಣಿಗಳು ಅಧಿಕಾರ ಕೊಡ್ಲಿ ಅಂತ ಗುನ್ನಂಪಟ್ಟೆ ಇಕ್ಕ್ಯಂದು ದಿಲ್ಲಿಗೋಗಿ ‘ನಾನು ಯಾವುದೇ ಹೊಣೆ ಹೊರಲು ಸಿದ್ಧ’ ಅಂತ ನುಲಿಯದು ಕಂಡಿಲ್ಲವಾ?’ ತುರೇಮಣೆ ವಿವರಿಸಿದರು.

‘ದಿಟ ಕನೇಳಿ ಸಾ. ಕಾಸು ಮಾಡಕ್ಕೆ ಕೋಡ್‍ವರ್ಡ್ ಮಾಡಿಕ್ಯಂದವೆ. ಉಪ್ಪುಖಂಡ ಎಲ್ಲಾ ರಾಜಕೀಯದೋರಿಗೆ. ನಮಗೆ ಮಾತ್ರ ಉಪ್ಪೆಸರು-ರಾಗಿಮುದ್ದೇನೇ ಗತಿ. ಸಾಲಾಯ ತಸ್ಮೈ ನಮಃ’ ಅಂತ ನಗಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.