‘ಗುರೂ, ಈ ಸಲ ಹಾವೇರಿ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಏನೇನು ವಿಷಯ ಚರ್ಚೆಗೆ ಬರಬಹುದು?’
‘ಯಾವು ಬರ್ತವೋ ಬಿಡ್ತವೋ, ಕೊರೊನಾ ವಿಷಯ ಅಂತೂ ಬಂದೇ ಬರ್ತತಿ ಅಂತ ಪರಿಷತ್ ಅಧ್ಯಕ್ಷರೇ ಹೇಳಿದ್ದು ಪೇಪರ್ನಾಗೆ ಬಂದಿತ್ತಪ್ಪ’.
‘ಹಂಗಾದ್ರೆ ಆ ಗೋಷ್ಠೀಲಿ ಏನೇನ್ ಚರ್ಚೆಗೆ ಬರಬಹುದು ಅಂತೀಯ?’
‘ಜನಪದ ಸಾಹಿತ್ಯದಲ್ಲಿ ಕೊರೊನಾ, ಕೊರೊನಾ ಮತ್ತು ಹಳಗನ್ನಡ ಸಾಹಿತ್ಯ, ಪಂಪನ ಕಾಲದಲ್ಲಿ ಕೊರೊನಾ ಸಾಧ್ಯತೆಗಳು, ಆಧುನಿಕ ಕನ್ನಡ ಕಾವ್ಯದಲ್ಲಿ ಕೊರೊನಾ, ಮಾಸ್ಕ್ ಮತ್ತು ದನಗಳ ಬಾಯಿಕುಕ್ಕೆ ಒಂದು ಸಾಮ್ಯತೆ... ಇತ್ಯಾದಿ’.
‘ಅಷ್ಟೇ ಅಲ್ಲ... ಕಷಾಯ ಕಾವ್ಯ, ಲಾಕ್ಡೌನ್ ಲಲಿತ ಪ್ರಬಂಧಗಳು, ಕ್ವಾರಂಟೈನ್ ಕವಿತೆಗಳು, ಸ್ಯಾನಿಟೈಸರ್ ಸಾನೆಟ್ಗಳು ಇತ್ಯಾದಿನೂ ಬರುತ್ತವೆ ನೋಡ್ತಿರು...’
‘ಸಮ್ಮೇಳನದಲ್ಲಿ ಕೊರೊನಾ ಕವಿಗೋಷ್ಠಿ ಅಂತಾನೇ ಒಂದು ಮಾಡಿದ್ರೆ ಹೆಂಗೆ?’
‘ಮಾಡಬಹುದು, ಒಳ್ಳೆ ಐಡಿಯಾ... ಅಧ್ಯಕ್ಷರಿಗೆ ಹೇಳಿದ್ರೆ ಖಂಡಿತ ಮಾಡ್ತಾರೆ.’
‘ಈಗ ಸಾಹಿತ್ಯ ಸಮ್ಮೇಳನ ಅಂದ್ರೆ ಮುಖ್ಯ ಆಕರ್ಷಣೆ ಊಟ. ಕೊರೊನಾ ಇನ್ನೂ ಇರೋದ್ರಿಂದ ಏನು ಊಟ ಕೊಡಬಹುದು?’
‘ಊಟ ಏನಾದ್ರು ಕೊಡ್ಲಿ, ವೆರೈಟಿ ವೆರೈಟಿ ಕಷಾಯ ಅಂತೂ ಕೊಡ್ಲೇಬೇಕು ಅಲ್ವ?’
‘ಹೌದು, ಸಮ್ಮೇಳನಕ್ಕೆ ಬರೋ ಹೆಣ್ಣುಮಕ್ಕಳಿಗೆ ಕಷಾಯ ಮಾಡೋ ಜವಾಬ್ದಾರಿ ವಹಿಸ್ತಾರಂತೆ. ಕಷಾಯ ಮಾಡೋದ್ರಲ್ಲಿ ಈಗ ಅವರು ಎಕ್ಸ್ಪರ್ಟ್ ಆಗಿದಾರಲ್ಲ ಅದ್ಕೆ...’
‘ಹೌದಾ? ಮತ್ತೆ ಪುರುಷರಿಗೆ ಏನು ಜವಾಬ್ದಾರಿ ವಹಿಸ್ತಾರಂತೆ?’
‘ಕೊರೊನಾ ಟೈಮಲ್ಲಿ ಪುರುಷರು ಯಾವುದರಲ್ಲಿ ಎಕ್ಸ್ಪರ್ಟ್ ಆಗಿದಾರೆ ಅದನ್ನ ವಹಿಸ್ತಾರಂತೆ...’
‘ಅಂದ್ರೆ ಯಾವುದು?’
‘ಪಾತ್ರೆ ತೊಳೆಯೋ ಕೆಲ್ಸ!’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.