ಭಾನುವಾರ ಬೆಳಗ್ಗೆ ಈ ವಾರವಿಡೀ ಮಾಡಬೇಕಾದ ಕೆಲಸ ಕಾರ್ಯಗಳ ಪಟ್ಟಿಯನ್ನು ಚರ್ಚಿಸುತ್ತಿದ್ದೆ. ಬೆಕ್ಕಣ್ಣ ಕ್ಯಾರೇ ಎನ್ನದೇ ವಿಡಿಯೊ ನೋಡುತ್ತ, ‘ಭಲೇ… ಭಲೇ...’ ಎಂದು ಉದ್ಗರಿಸುತ್ತಿತ್ತು.
ನಾನು ‘ಗಂಭೀರವಾಗಿ ಕೂರಲೇ, ಚರ್ಚೆ ನಡಸೀನಿ’ ಅಂತ ಬೈದೆ.
‘ಕೆಡಿಪಿ ಸಭೆವಳಗೆ ಅಧಿಕಾರಿಗಳೇ ರಮ್ಮಿ ಆಡತಾರೆ. ಸಿದ್ದು ಅಂಕಲ್ಲಿನ ಸಾಧನಾ ಸಮಾವೇಶದ ವಿಡಿಯೊ ನಾ ನೋಡುತಿದ್ದರೆ ತಪ್ಪೇನು?’ ಎಂದು ವಾಪಸು ಗುರುಗುಟ್ಟಿತು. ಅದೂ ನಿಜವೆನ್ನಿಸಿ ತೆಪ್ಪಗಾದೆ.
‘ನೋಡು… ನಮ್ ಸಿದ್ದು ಅಂಕಲ್ಲು ಹೆಂಗೆ ಮಾರಾಜನಂಗೆ ರ್ಯಾಂಪು ಮೇಲೆ ನಡೆದು ಬಂದಾರೆ’ ಎಂದು ತೋರಿಸಿತು.
‘ಡಿಕೇಶಂಕಲ್ಲು ಕಾಟಾಚಾರಕ್ಕೆ ಮುಖ ತೋರಿಸಿ, ಗಪ್ಪನೆ ಮತ್ತೆ ದಿಲ್ಲಿಗೆ ಹಾರ್ಯಾರಂತೆ… ಮತ್ತೇನು ಕರಾಮತ್ತು ನಡೆಸ್ಯಾರೋ ಯಾರಿಗೆ ಗೊತ್ತು’ ಎಂದೆ.
‘ಎಷ್ಟೊಂದು ಮಂದಿ ಮುಂದಿನ ಸಲ ಕುರ್ಚಿ ನಂದೇ ಅಂತ ಟುವಾಲು ಹಿಡಕಂಡು ನಿಂತಾರೆ… ಡಿಕೇಶಂಕಲ್ಲು ಈಗಿಂದನೇ ಆ ಎಲ್ಲ ಟುವಾಲಿಗಿಂತ ಬ್ಯಾರೆ ಜಬರದಸ್ತ್ ಟುವಾಲು ರೆಡಿ ಮಾಡ್ಕಂಬಕು’ ಎಂದು ಬೆಕ್ಕಣ್ಣ ನಕ್ಕಿತು.
‘ವಿಧಾನಸೌಧದ ಸುತ್ತ ರನ್ನಿಂಗ್ ರೇಸ್ ಸ್ಪರ್ಧೆ ಏರ್ಪಡಿಸಿ, ಇಂತಿಷ್ಟು ಸೆಕಂಡ್ವಳಗೆ ಒಳಗೆ ಓಡಿ ಹೋಗಿ ಸಿ.ಎಂ ಕುರ್ಚಿ ಮ್ಯಾಲೆ ಟುವಾಲು ಹಾಕಿದವ್ರೇ ಸಿ.ಎಂ ಅಂತ ಮಾಡಬಕು’ ಎಂದೆ.
‘ಸಿ.ಎಂ ಕುರ್ಚಿ ರನ್ನಿಂಗ್ ರೇಸಿನ ಮಾನದಂಡ, ಅರ್ಹತೆ ಎಲ್ಲ ಬ್ಯಾರೇನೆ ಇರತೈತಿ. ಅದಿರಲಿ… ಈ ಶಾಸಕರು, ಮಂತ್ರಿಗಳನ್ನ ಆರಿಸಿ ಕಳಿಸಿದ ಶ್ರೀಸಾಮಾನ್ಯ ಮತದಾರರು ನೀವೂ ಒಂದು ಸಾಧನಾ ಸಮಾವೇಶ ಮಾಡಬಕು’ ಎಂದು ಬೆಕ್ಕಣ್ಣ ಮುಗುಮ್ಮಾಗಿ ಹೇಳಿತು.
‘ಈ ಎಲ್ಲಾ ಗೋಟಾವಳಿವಳಗೆ ಶ್ರೀಸಾಮಾನ್ಯರು ಬದುಕಿರೂದೆ ದೊಡ್ಡದು!’
‘ಜಿರಲೆಗಳು ಎಂಥಾ ಪರಿಸ್ಥಿತಿವಳಗೂ ಬದುಕುಳಿತಾವಂತೆ. ಶ್ರೀಸಾಮಾನ್ಯರೂ ಒಂಥರದ ಜಿರಲೆಗಳೇ! ನೀವೂ ಒಂದ್ ಸಮಾವೇಶ ಮಾಡಿರಿ’ ಎಂದು ಬೆಕ್ಕಣ್ಣ ಮಾತಿನ ಬಾಣವನ್ನು ಬಿಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.