ಚುರುಮುರಿ
ಎಲ್ಲಾ ಮಾದರಿಯ ಕ್ರಿಕೆಟ್ಗೆ ಶಂಕ್ರಿ ವಿದಾಯ ಹೇಳಿದ್ದ.
‘ಕ್ರಿಕೆಟ್ ಬಗ್ಗೆ ನಿನಗಿನ್ನೂ ಏಜು, ಕ್ರೇಜು ಉಳಿದಿದೆ. ನಿರ್ಧಾರ ವಾಪಸ್ ತಗೊ...’ ಗೆಳೆಯ ಗೋಪಾಲಿ ಮನವೊಲಿಸಲೆತ್ನಿಸಿದ.
‘ಆರ್ಸಿಬಿ ಕಪ್ ಗೆದ್ದ ನಂತರದ ಬೆಳವಣಿಗೆ ಕ್ರಿಕೆಟ್ ಬಗ್ಗೆ ಜಿಗುಪ್ಸೆ ಮೂಡಿಸಿದೆ’ ಶಂಕ್ರಿಗೆ ಬೇಸರ.
‘ನೀನು ಆಟಗಾರನಲ್ಲ, ಕ್ರಿಕೆಟ್ ನೋಟಗಾರ. ನಿನ್ನಂಥವರೇ ವಿದಾಯ ಹೇಳಿಬಿಟ್ಟರೆ ಕ್ರಿಕೆಟ್ ಉಳಿಯುತ್ತಾ?’
‘11 ಜನ ಗೆದ್ದ ಕಪ್ಗೆ 11 ಅಭಿಮಾನಿಗಳು ಬಲಿಯಾದರು. ಗೆದ್ದವರಿಗೂ ಆನಂದ ಕೊಡಲಿಲ್ಲ, ನಾವೂ ಸಂಭ್ರಮಪಡಲಿಲ್ಲ, ಛೇ...’
‘ಕಪ್ ನಮ್ದೆ, ಕಪ್ ನಮ್ದೆ ಅಂತ ನಾವೇ ಆತುರಪಟ್ವಿ, ತಪ್ ನಮ್ದೇ...’ ಸುಮಿ ಕಾಫಿ ತಂದುಕೊಟ್ಟಳು.
‘ನಮಗೇನೋ ಆತುರವಿತ್ತು. ಆರ್ಸಿಬಿಗೆ ಕಪ್ ಗೆಲ್ಲುವ ಅವಸರವೇನಿತ್ತು? 18 ವರ್ಷದ ಜೊತೆಗೆ ಇನ್ನಷ್ಟು ವರ್ಷ ತೆಪ್ಪಗಿರಬೇಕಾಗಿತ್ತು, ತಪ್ ಅವರ್ದೇ...’ ಅಂದ ಗೋಪಾಲಿ.
‘ಮುಂದಿನ ವರ್ಷ ಆರ್ಸಿಬಿ ಕಪ್ ಗೆದ್ದಾಗ ಸಂಭ್ರಮಿಸೋಣ ಬಿಡು’.
‘ಇಷ್ಟೆಲ್ಲಾ ಅವಾಂತರ ಆಗಿರುವಾಗ ಆರ್ಸಿಬಿಗೆ ಕಪ್ ಗೆಲ್ಲೋ ಹುಮ್ಮಸ್ಸು ಬರುತ್ತಾ?’
‘ಕಪ್ ಗೆಲ್ಲೋದಿರಲಿ, ಅಭಿಮಾನಿಗಳ ಉನ್ಮಾದಕ್ಕೆ ಹೆದರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಆಡೋದಿಲ್ಲ, ಇಲ್ಲಿ ಆಡಬೇಕಾದ ಮ್ಯಾಚ್ಗಳನ್ನು ತಟಸ್ಥ ಸ್ಥಳದಲ್ಲಿ ಆಡ್ತೀವಿ ಅಂತ ಆರ್ಸಿಬಿ ತಂಡ ಹಟ ಮಾಡಬಹುದು’.
‘ಅಭಿಮಾನಿ ಪ್ರೇಕ್ಷಕರನ್ನು ಸ್ಟೇಡಿಯಂನಿಂದ ಹೊರಗಿಟ್ಟು, ಸಿ.ಸಿ.ಟಿ.ವಿ. ಕ್ಯಾಮೆರಾ, ಟಿ.ವಿ. ಕ್ಯಾಮೆರಾ ಕಾವಲಿನಲ್ಲಿ ಆಟವಾಡಲು ಅವಕಾಶ ಮಾಡಿಕೊಡಬಹುದು’.
‘ಶಿಳ್ಳೆ, ಚಪ್ಪಾಳೆ ಹೊಡೆಯೊ ಪ್ರೇಕ್ಷಕರಿಲ್ಲದಿದ್ದರೆ ಆಟಗಾರರಿಗೆ ಬೌಂಡರಿ, ಸಿಕ್ಸರ್ ಬಾರಿಸಲು ಮೂಡ್ ಬರೊಲ್ಲ, ಸಿಂಗಲ್ಸ್ ಆಡಿಕೊಂಡು ಮ್ಯಾಚ್ ಮುಗುಸ್ತಾರೆ’.
‘ಇನ್ನು ಮುಂದೆ ಆರ್ಸಿಬಿ ಕಪ್ ಗೆದ್ದರೆ ಸಾರ್ವಜನಿಕ ಸೆಲೆಬ್ರೇಷನ್ ನಿರ್ಬಂಧಿಸಿ ಮನೆಗಳಲ್ಲೇ ಸಂಭ್ರಮ ಆಚರಿಸಿಕೊಳ್ಳುವಂತೆ ಸರ್ಕಾರ ಎಚ್ಚರಿಕೆ ವಹಿಸುತ್ತದೆ’ ಎಂದು ಹೇಳಿ ಗೋಪಾಲಿ ಹೊರಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.