ADVERTISEMENT

ಚುರುಮುರಿ: ಭ್ರಾತೃ ಭಾಷೆ

ಮಣ್ಣೆ ರಾಜು
Published 4 ನವೆಂಬರ್ 2025, 22:28 IST
Last Updated 4 ನವೆಂಬರ್ 2025, 22:28 IST
<div class="paragraphs"><p>.ಚುರುಮುರಿ</p></div>

.ಚುರುಮುರಿ

   

‘ನಿಮ್ಮ ನೆರೆಹೊರೆಯವರ ಕಲಬೆರಕಿ ಕನ್ನಡ ಕೇಳಲಾಗ್ತಿಲ್ಲ, ನಾನು ಊರಿಗೆ ಹೋಗಿಬಿಡ್ತೀನಿ...’ ಚಟ್ನಿಹಳ್ಳಿ ನಿಂಗತ್ತೆ ಬೇಸರಗೊಂಡರು.

‘ನಮ್ಮ ಅಕ್ಕ–ಪಕ್ಕ, ಹಿಂದೆ–ಮುಂದಿನ ಮನೆಗಳಲ್ಲಿ ‘ಪಂಜಾಬ ಸಿಂಧು ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ...’ ಪ್ರದೇಶದವರು ವಾಸಿಸುತ್ತಿದ್ದಾರೆ. ಅವರು ತಮ್ಮ ಭಾಷೆ ಮಿಕ್ಸ್ ಮಾಡಿ ಕನ್ನಡ ಮಾತನಾಡ್ತಾರೆ, ಹಾಗಾಗಿ ನಿಮಗೆ ಅರ್ಥವಾಗೊಲ್ಲ’ ಅಂದಳು ಸುಮಿ.

ADVERTISEMENT

‘ಪರಭಾಷಿಗರೊಂದಿಗೆ ನಾವು ಭ್ರಾತೃತ್ವದಿಂದ ಬಾಳ್ತಿದ್ದೀವಿ. ನಮ್ಮ ಮಾತೃಭಾಷೆಗಿಂಥ ಭ್ರಾತೃಭಾಷೆಯ ಪ್ರಭಾವ ಹೆಚ್ಚಾಗಿದೆ’ ಶಂಕ್ರಿ ಹೇಳಿದ.

‘ಪರಭಾಷೆಗಳ ಪದಗಳು ಕನ್ನಡದಲ್ಲಿ ವಿಲೀನವಾಗಿ ಬೃಹತ್ ಬೆಂಗಳೂರಿನ ಕನ್ನಡ ನಿಘಂಟಿನ ಗಾತ್ರವೂ ಬೃಹತ್ ಆಗ್ತಿದೆ!’

‘ಹೀಗಾದರೆ ಶುದ್ಧ ಕನ್ನಡ ಕಾಣೆಯಾಗೋದಿಲ್ವೆ?’

‘ಬೋರ್ಡ್‌ಗಳಲ್ಲಿ 60 ಪರ್ಸೆಂಟ್ ಕನ್ನಡ ಅಕ್ಷರವನ್ನು ಸರ್ಕಾರ ಕಡ್ಡಾಯ ಮಾಡಿದೆ’.

‘ಬೆಳಿಗ್ಗೆ ತರಕಾರಿ ಅಂಗಡಿಯಲ್ಲಿ ಹೆಂಗಸೊಬ್ಬಳು ‘ಒನ್ ಕಿಲೊ ಬ್ರಿಂಜಾಲ್, ಆಫ್ ಕಿಲೋ ಟೊಮೆಟೊ ಕೊಡಿ’ ಎಂದು ವ್ಯಾಪಾರ ಮಾಡಿದಳು. ಅವಳ ಮಾತಿನಲ್ಲಿ ಎಷ್ಟು ಪರ್ಸೆಂಟ್ ಕನ್ನಡ ಇದೆ ಕ್ಯಾಲುಕುಲೇಟ್ ಮಾಡು’.

‘ಬೆಂಗಳೂರು ಕನ್ನಡವನ್ನು ಕ್ಯಾಲುಕುಲೇಟ್ ಮಾಡಬಾರದು, ಆತಂಕ ಆಗಿಬಿಡುತ್ತದೆ. ಬೆಂಗಳೂರಿನಲ್ಲಿ 35 ಪರ್ಸೆಂಟ್‌ನಷ್ಟಾದರೂ ಕನ್ನಡ ಬಳಕೆಯಾದರೆ ಸಾಕು, ನಮ್ಮ ಕನ್ನಡ ಪಾಸಾಗಿ ಬಿಡುತ್ತದೆ!’

‘ಹೌದೌದು. ಕನ್ನಡ ಫೇಲಾಗಬಾರದು. ಸರ್ಕಾರ ಕೃಪಾಂಕ ಕೊಟ್ಟಾದರೂ ಬೆಂಗಳೂರು ಕನ್ನಡವನ್ನು ಪಾಸ್ ಮಾಡಬೇಕು’ ಅಂದ ಶಂಕ್ರಿ.

‘ಪರಭಾಷಿಗರ ವಿಚಾರ ಬಿಡು. ನಿನ್ನ ಮಕ್ಕಳೇ ಮನೆಯಲ್ಲಿ ಕನ್ನಡ ಮಾತನಾಡ್ತಿಲ್ಲವಲ್ಲೇ ಸುಮಿ’ ನಿಂಗತ್ತೆಗೆ ಸಿಟ್ಟು.

‘ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿದ್ದಾರೆ. ಕನ್ನಡ ಮಾತನಾಡಿಕೊಂಡು ಇಂಗ್ಲಿಷ್ ಕಡೆಗಣಿಸಿದರೆ ಅವರ ಭವಿಷ್ಯಕ್ಕೆ ಧಕ್ಕೆಯಾಗೋದಿಲ್ವೆ ಅತ್ತೆ?’ ಅಂದಳು ಸುಮಿ.

‘ಬೆಂಗಳೂರಿನ ಸಹವಾಸ ಸಾಕು ನಮ್ಮೂರಿಗೆ ಹೋಗ್ತೀನಿ...’ ಸಿಡುಕುತ್ತಾ ನಿಂಗತ್ತೆ ಬ್ಯಾಗ್ ರೆಡಿ ಮಾಡಿಕೊಳ್ಳಲು ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.