
‘ಬಂಡೆ ಕೊರೆದರೆ ಮೊದ್ಲು ಹಿಟ್ ಸಿಗುತ್ತೆ ಅಲ್ವಾ? ಅದ್ರಲ್ಲಿ ಏನೇನ್ ಮಾಡ್ಬಹುದು?’ ಕೇಳಿದ ಗುದ್ಲಿಂಗ.
‘ಹಿಟ್ಟು ಸ್ಮೂತ್ ಆಗಿರುತ್ತೆ. ಟಾಲ್ಕಂ ಪೌಡ್ರು ಮಾಡಿ ಜನ್ರ ಮುಖಕ್ಕೆ ಮೆತ್ತಬಹುದು. ಸೂಪರ್ ಹಿಟ್ ಅನಿಸ್ಕೊಬಹುದು’.
‘ಸ್ವಲ್ಪ ಕೆಳಕ್ಕೆ ಇಳುದ್ರೆ?’
‘ಗಟ್ಟಿ ಕಲ್ಲು ಸಿಗುತ್ತೆ. ಚೂರು ಚೂರಾಗಿ ಈಚೆ ಬರುತ್ತೆ. ಕೈ ಪಕ್ಷದ ಭವನದ ಬಿರುಕಲ್ಲಿ ಫಿಲ್ ಮಾಡ್ಕೊಬಹುದು’ ಎಂದ ಕಲ್ಲೇಶಿ.
‘ಇನ್ನೂ ಸ್ವಲ್ಪ ಆಳಕ್ಕೆ ತೋಡುದ್ರೆ?’
‘ಸ್ವೀಟ್ ವಾಟರ್ ಬರುತ್ತೆ. ಗ್ರೇಟರ್ ಬೆಂಗ್ಳೂರು ಪೂರಾ ಖುಷಿಯಾಗಿ ಕುಡೀಬಹುದು. ನಮ್ ಬಂಡೆ, ನಮ್ ಬೋರು ಅನ್ನೋ ಹೆಮ್ಮೆ ಇರುತ್ತೆ’.
‘ಇನ್ನೂ ಒಂದು ಪದರ ಕೆಳಕ್ಕೆ ಹೋಯ್ತು ಅಂತ ಇಟ್ಕೊ... ಆಗ?’
‘ಸಿಹಿ ನೀರು ಕಮ್ಮಿ ಆಗುತ್ತೆ. ಅಕ್ಕಪಕ್ಕದ ಆನೆಕಲ್ಲು, ಕುದುರೆಗಲ್ಲು ಪದರಗಳಿಂದ ಸೋಸ್ಕೊಳೋ ಕಲ್ಮಶ, ಉಪ್ಪುಪ್ಪು ಅನಿಸಕ್ಕೆ ಶುರುವಾಗುತ್ತೆ. ಕುಡಿಯೋ ಹಾಗೂ ಇಲ್ಲ, ತೊಳೆಯೋ ಹಾಗೂ ಇಲ್ಲ, ಹಳೇ ಗುಟ್ಟು, ಹೈಕಮಾಂಡ್ ಜುಟ್ಟು ಅಂತ ಸಹಿಸ್ಕೊಬೇಕು’.
‘ಸಾವಿರಾರು ಅಡಿ ಆಳಕ್ಕೆ ಹೋಯ್ತು ಅಂದ್ಕೊ. ಅವಾಗ ಏನಾಗ್ಬಹುದು?’
‘ಲಾವಾರಸ ಧಗಧಗ ಕುದೀತಿರುತ್ತೆ. ಅದರ ಮಧ್ಯೆ ಜ್ವಾಲಾಮುಖಿಯಾಗಿ ಸಿಡಿಯೋ ಒಳಒಪ್ಪಂದಗಳು ನಿಗೂಢವಾಗಿರುತ್ವೆ’.
‘ನೀನು ಹೇಳ್ತಿರೋದು ಸ್ಲೋ ರಿಗ್ಗಾ? ಫಾಸ್ಟ್ ರಿಗ್ಗಾ?’
‘ಸ್ಲೋ ರಿಗ್ಗೇ! ಎರಡೂವರೆ ವರ್ಷ ಆದ್ರೂ ಸಹಿಸ್ಕೊಂಡೇ ಇದೆ. ಕೊರಸ್ಕೊಂಡಿದ್ದು ಸಾಕಾಗಿ, ಕೆತ್ತಿಸ್ಕೊಂಡು ಸಿಎಂ ಶಿಲ್ಪ ಆಗ್ಬೇಕು ಅನ್ನೋ ಯೋಚನೇಲಿದೆ’.
‘ಅದಾಗಲ್ಲ, ಇನ್ನೊಂದು ಬೇರೆ ಬಿಟ್ ಹಾಕಿ ಮತ್ತೆ ಕೊರೀತೀವಿ ಅಂದ್ರೆ?’
‘ಅವಾಗ ಬಂಡೆ ಸುಮ್ನಿರುತ್ತಾ? ಕಲ್ಲು ಕರಗುವ ಸಮಯ ಹೋಗಿ ಬಂಡೆ ಸಿಡಿವ ಸಮಯ ಬರುತ್ತೆ. ಆತುಕೊಂಡು ಆಡಳಿತದ ಚಕ್ಕಡಿ ಹೂಡಿದ್ದು ತಲೆ ಹತ್ಕಂಡು ಚಪ್ಪಡಿ ಆಗುತ್ತೆ’ ಎಂದ ಪರ್ಮೇಶಿ. ಎಲ್ಲಾ ಗಹಿಗಹಿಸಿ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.