ರಾಜಕೀಯದಲ್ಲಿ ಯಾರು ಏನು ಮಾಡ್ತಾವರೆ ಅನ್ನದು ತಿಳಕಳದು ಹ್ಯಂಗೆ ಅಂತ ಗೊತ್ತಾಗ್ದೆ ಕೊನೆಗೆ ತನ್ನ ಖಾಸಾ ಗೆಳೆಯ, ಗುರು, ಮಾರ್ಗದರ್ಶಕ ನಂದನ ಬಳಿಗೆ ಬಂದ ಕಿಶ್ನಪ್ಪ, ಅವನಿಗೇ ಆ ಪ್ರಶ್ನೆ ಎಸೆದ.
‘ನೋಡ್ಲಾ ಕಿಶ್ನಪ್ಪಾ, ಕೊಶ್ಚನ್ ಪೇಪರ್ ಲೀಕ್ ಮಾಡಿದ್ದನಲ್ಲಾ ಅದ್ಯಾರೋ ಕುಮಾರ, ಅವನಿಗೆ ಸುಪಾರಿ ಕೊಟ್ರೆ ಏಳೇಳು ಸಮುದ್ರದಾಚೆಗೂ ಇರೋ ರಹಸ್ಯನೇಲ್ಲಾ ತಂದು ಸುರೀತನೆ. ಐಟಿಯೋರಿಗೆ ಸಹಿತ ಬೇಕಾಯ್ತದೆ! ಏನಂತೀಯ?’ ಕಿಶ್ನಪ್ಪನ ಸಮಸ್ಯೆ ಅಲ್ಲಿಗೆ ಪ್ರಾಬ್ಲಂ ಆಗಿ ಬದಲಾಯ್ತು!
‘ರಾಜಕೀಯದಲ್ಲಿ ತೆನೆಯೋರು ಮೈತ್ರಿ ಧರ್ಮ ಪಾಲಿಸ್ತಾ ಇಲ್ಲ. ಅದೇ ತಪ್ಪಾಯ್ತಾ ಅದೆ’ ಅಂತ ಇನ್ನೊಂದು ಸಮಸ್ಯೆ ತೆಗೆದ ಕಿಶ್ನಪ್ಪ. ನಂದ ಅದುನ್ನ ಒಪ್ಪಲಿಲ್ಲ.
‘ಮೈತ್ರಿ ಧರ್ಮವಾ ಕೈನೋರು, ಹೂವಿನೋರು ತಪ್ಪದೇ ಪಾಲಿಸ್ತಾ ಅವರೆ. ಜನಕ್ಕೆ ತಿಳಿತಾ ಇಲ್ಲ ಕಣೋ ಕಿಶ್ನಪ್ಪಾ’ ಅಂದ ನಂದ.
ಕಿಶ್ನಪ್ಪನಿಗೆ ತಿರಗಾ ತಲೆ ಕೆಟ್ಟೋಯ್ತು. ‘ನನ್ನ ಮಕ್ಕಳು, ಮೊಮ್ಮಕ್ಕಳು, ನನ್ನೆಂಡರಿಗೇ ಸೀಟು ಬೇಕು ಅಂದ್ರೆ ಮೈತ್ರಿ ಎಲ್ಲದೆ?’ ಅನ್ನೋದು ಕಿಶ್ನಪ್ಪನ ವಾದ.
‘ಥೂ ಇಂಗ್ಲಿಷ್ ರ್ಯಾಸ್ಕಲ್ಸ್. ನಿಮಗೆ ಕನ್ನಡವೂ ಬರದಿಲ್ಲ ಇಂಗ್ಲೀಷು ಬರದಿಲ್ಲ. ಮೈತ್ರಿ ಅಂದ್ರೇನ್ಲಾ?’ ನಂದ ಕೇಳಿದ.
‘ಅಷ್ಟೂ ಗೊತ್ತಿಲ್ಲವಾ? ಕೂತು ಮಾತು-ಕತೆ ಆಡಿ ಸೀಟು ಫೈನಲ್ ಮಾಡಿಕಳೊ ವಿಧಾನ’ ಅಂದ ಕಿಶ್ನಪ್ಪ.
‘ಮೈತ್ರಿ ಅಂದ್ರೆ ಕನ್ನಡದ ಮೈತ್ರಿ ಅಲ್ಲ ಕಣೋ. ಅದು ಇಂಗ್ಲೀಷಿನ ಪದ. ಮೈ ಅಂದ್ರೆ ನಾನು, ತ್ರೀ ಅಂದ್ರೆ ಮೂರು! ನಾನು ನನ್ನಿಬ್ಬರು ಮೊಮ್ಮಕ್ಕಳು ಮೈ ತ್ರೀ, ನಾನು ನನ್ನಿಬ್ಬರು ಮಕ್ಕಳು ಹೂವು ಹಿಡಕಾ ಬಂದ್ರೆ ಮೈ ತ್ರೀ, ನಾನು ನಮ್ಮವ್ವ, ನನ್ನ ತಂಗೆ ಸೇರಿದರೆ ಮೈ ತ್ರೀ!’ ನಂದನ ಮಾತು ಕೇಳಿ ತಲೆ ತಿರುಗಿ ಬಿದ್ದ ಕಿಶ್ನಪ್ಪ ಇನ್ನೂ ಎದ್ದಿಲ್ಲವಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.