
‘ಮೀನಿನ ಹೆಜ್ಜೆ ಗುರುತಿಸಬಹುದು, ಆದರೆ ನೀರಿನ ಹೆಜ್ಜೆ ಅಂದಾಜಿಸಲಾಗದು. ನಾನು ಈ ಮಾತನ್ನು ಬೈಟು ಕಾಫಿ ಮುಂದೆ ನಿಂತು ಹೇಳುತ್ತಿದ್ದೇನೆ’ ಎಂದು ಥೇಟ್ ಜಮೀರ್ ಶೈಲಿಯಲ್ಲಿ ಘೋಷಿಸಿದ ಬದ್ರಿ.
‘ಮೂರನೇ ಮಹಾಯುದ್ಧ ಅಂತ ಆದ್ರೆ ಅದು ನೀರಿಗಾಗಿಯೇ ಅಂತಾರೆ...’ ಎಂದು ಕೊಟ್ರಿ ತನ್ನ ಮಾತನ್ನು ಸೇರಿಸಿದ.
‘ಅದೇನೋ ಗೊತ್ತಿಲ್ಲ, ವಿಧಾನಸೌಧದ ಬ್ಯಾಂಕ್ವೆಟ್ ‘ಹಾಲಿನಲ್ಲಿ ನೀರಿನ ಹೆಜ್ಜೆ’ ಮೂಡಿರುವುದಂತೂ ನಿಜ’.
‘ಅಂದ್ರೆ ಹಾಲುಮತ ನೀರುಮತ ಬೆರೆತಂತೆ, ಭಿನ್ನಮತ ತಣ್ಣಗಾದಂತೆ, ರಾಜಣ್ಣ ಕ್ರಾಂತಿ ಮರೆತಂತೆ...’
‘ಅದೇನೇ ಇರಲಿ, ನೀರಿನ ಹೆಜ್ಜೆ ಪುಸ್ತಕದ ಕಿಕ್ಕರ್ ಸಾಲಿನ ಸೀಕ್ವೆನ್ಸ್ ತಪ್ಪೇ ತಪ್ಪು. ‘ವಿವಾದ ಒಪ್ಪಂದ ತೀರ್ಪು’ ಹೇಗಾಗುತ್ತದೆ? ಮೊದಲು ಅಂತಃಪುರದಲ್ಲಾದ ಹಸ್ತಾಂತರ ಒಪ್ಪಂದ, ನಂತರ ಬೆಂಬಲಿಗರ ಬಹಿರಂಗ ವಿವಾದ, ಕೊನೆಗೆ ಕಾಯ್ದಿರಿಸಿರುವ ಹೈಕಮಾಂಡ್ ತೀರ್ಪು ಬರಬೇಕು’ ತಿಂಗಳೇಶನ ವಿವರಣೆ.
‘ಅಬ್ಬಬ್ಬಾ... ಅಧಿಕಾರಕ್ಕೆ ಎಷ್ಟೊಂದು ಮಾರ್ಗಗಳು! ಸುರಂಗ ಮಾರ್ಗದ ನಂತರ ಈಗ ಜಲಮಾರ್ಗ ಹಿಡಿದಿರುವ ನಮ್ಮ ಬಂಡೆ ಸಾಹೇಬರು ಬಲ ಮಾರ್ಗವನ್ನೂ ಕಾಯ್ದಿರಿಸಿದ್ದಾರಂತೆ’.
‘ರಾಜಕಾರಣಿಗಳಿಗೆ ಅಧಿಕಾರ ತಲುಪಲು ಅಗಣಿತ ಮಾರ್ಗಗಳೇನೋ ಸರಿ, ಜನರಿಗೆ ಸ್ವರ್ಗ ತಲುಪಲು ಮಾತ್ರ ಏಕೈಕ ಮಾರ್ಗ. ಅದರ ನಿರ್ಮಾತೃ ಕೂಡ ಅಧಿಕಾರಸ್ಥರೇ...’
‘ವೀರಮಾರ್ಗ ಧೀರಮಾರ್ಗ ಗೊತ್ತಿತ್ತು, ಇದೀಗ ನೀರಮಾರ್ಗ ಕ್ಷೀರಮಾರ್ಗ ಗೊತ್ತಾಯ್ತು. ಇನ್ಯಾವುದಪ್ಪಾ ಸ್ವರ್ಗದ ಮಾರ್ಗ?’
‘ಅದೇ… ಗುಂಡಿಗಳು ತುಂಬಿದ ನರಕ ರಸ್ತೆ ಮೂಲಕ ಸ್ವರ್ಗ ತಲಪುವ ಸುಲಭ ಮಾರ್ಗ’.
‘ಹಾಗಾದರೆ ‘ನೀರಿನ ಹೆಜ್ಜೆ’ ಕೃತಿಕಾರರಿಂದ ಆಧುನಿಕ ‘ಕವಿರಾಜಮಾರ್ಗ’ ರಚನೆಯೂ ಆಗಲಿ’ ತಿಂಗಳೇಶ ಆಶಾವಾದದ ಹೆಜ್ಜೆ ಇರಿಸಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.