
‘ಸಾ, ನಮ್ಮ ದೇಸದ ಮಾರಾಜ್ರು ಡಿಕಾವಾಗಿ ಶಾಂಘೈಗೆ ಹೋಗ್ಯವರೆ. ಪಿಂಗಣ್ಣ ಅರುಣಾಚಲದ ತಾವು ಬದ ಒತ್ತರಿಸಿಕ್ಯ ಬತ್ತಾವ್ನಲ್ಲ. ಖಾತೆ, ಕಂದಾಯ ಏನೋ ಅದೆ. ಜಮೀನು ಹದ್ದುಬಸ್ತು ಮಾಡಿಕ್ಯಂದು ಬರಬೇಕಾಗ್ಯದೆ’ ಅಂತ ಆತಂಕ ವ್ಯಕ್ತಪಡಿಸಿದೆ.
‘ಭಾರತ–ಚೀನಾ ಇಬ್ಬರೂವೆ ದಾಯಾದಿಗಳಲ್ಲವುಲಾ. ಹೋದಸಾರಿ ಟ್ರಂಪಣ್ಣ ‘ಹೌ ಡಿ ಮೋಡಿ?’ ಅಂದು ಕುಲುಕಾಡಿದ್ನಲ್ಲ, ಹಂಗೇ ಪಿಂಗಣ್ಣ ‘ನೀ ಹಾವೋ ಮೋದಿ?’ ಅಂದಿರತನೆ ಬುಡ್ಲಾ’ ಅಂದ್ರು ತುರೇಮಣೆ.
‘ಸಾ, ಮೋದಿ ಮಾರಾಜ್ರು ಶಾಲು–ಮುಗುಟ ತಕ್ಕೋಗಿ ಕೊಟ್ರೂವೆ, ‘ಮನ್ನೆ ಪಾಕಿನೋರಿಗೆ ಆಟಾಡಿಕ್ಯಳಕ್ಕೆ ಅಂತ ಕೊಟ್ಟಿದ್ದ ನಮ್ಮ ಇಮಾನವೆಲ್ಲಾ ಮುರಿದಾಕಿದ್ದೀರಂತಲ್ರೀ?’ ಅಂತ ಪಿಂಗಣ್ಣ ಅಡ್ಡ ಮಾತಾಡಿದ್ನಂತೆ’.
‘ಮೋದಿ ಜೊತೆಗೆ ಒಂದಡಕೆ ಎರಡೆಲೆ ಇದ್ದಂಗೆ ಜಪಾನಣ್ಣ, ಪುಟಿನಣ್ಣ ನ್ಯಾಯ ಪಂಚಾತ್ಕೆಗೆ ಓಗ್ಯವ್ರಲ್ಲೋ. ಜಪಾನಣ್ಣ ‘ನೀವು ನೀವು ಅಕ್ಕಪಕ್ಕದೋರು ಒಂದು ತಾಯಿ ಮಕ್ಕಳಿದ್ದಂಗಿರಬೇಕು ಕನ್ರಯ್ಯಾ’ ಅಂತ ಬುದ್ಧಿ ಹೇಳಿ ಖಾಜಿ ನ್ಯಾಯ ಮಾಡಿರತನೆ. ಹದ್ದುಬಸ್ತು, ಪಾಲುಪಾರಿಕತ್ತು ಮಾಡಿ ನ್ಯಾಯ ಪೈಸಲ್ ಮಾಡಿಕ್ಯಬತ್ತರೆ ಬುಡು’ ಎಂದು ತುರೇಮಣೆ ಸಮಾಧಾನಿಸಿದರು.
‘ಅಲ್ಲ ಕಣ್ರಿ ಸಾ, ಪಕ್ಕಸಾಲಿಗರ ಥರ ಟರ್ಕಿ, ಪಾಕು ಹೋಗ್ಯವಲ್ಲಾ... ಅವು ಅಲ್ಲಿ ಏನೇನಾತು, ಈಥರಕೀತರ ಅಂತ ಟ್ರಂಪಣ್ಣನ ಕಿವಿ ಊದ್ತವೇನೋ’ ಅಂತಂದೆ.
‘ಅರೆಪಾವಿನೋರ ಅಬ್ಬರ ಜಾಸ್ತಿಯಾದ್ರೆ ಎಂಥೋರಿಗೂ ಒಂದೊಂದು ಸಾರಿ ಅಸಂದರ್ಪಾಯ್ತದೆ ಕಲಾ. ಹಂಗೇ ಚೀನಾದೋರು ವಿಶ್ವಗುರುಗಳ ಹೆಗಲ ಮ್ಯಾಲೆ ಬಂದೂಕಿಟ್ಟು ಟ್ರಂಪಿಗೆ ಗುಂಡು ಹಾರಿಸಬೈದು. ನೋಡಮು’
‘ಸಾ ಅದೇನಾತದೋ ನಾ ಕಾಣೆ. ವತ್ತರೆಗೆ ಒಂದು ಮದುವ್ಯಾಗಿ, ಸಂದೆಗೆ ಸೋಬನಾಗಿ, ಮುಂಜಾವಕ್ಕೆ ಮಗಾ ಹುಟ್ತಂತೆ ಅಂದಂಗೆ ಭಾರತದ ಕತೆ ಆಗಬಾರದು’ ಅಂದೆ.
‘ವಾಪಾಸ್ ಬರುವಾಗ ಪಿಂಗಣ್ಣ ‘ಎಣ್ಣೆ ಥಣ್ಣಗಾದರೆ ಬೆಣ್ಣೆಯಾತದೇನ್ರೀ’ ಅಂತ ಒಡಪು ಹಾಕಿ ಕಳಿಸಿರತನೆ ಬುಡ್ಲಾ’ ಅಂದು ಮಾತು ಮುಗಿಸಿದರು ತುರೇಮಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.