ADVERTISEMENT

ಪವರ್ ಫಲಾಫಲ

ಲಿಂಗರಾಜು ಡಿ.ಎಸ್
Published 20 ಮೇ 2019, 18:30 IST
Last Updated 20 ಮೇ 2019, 18:30 IST
   

ಉತ್ತರಾಷಾಢದ ಇದೇ 23ರಂದು ದಿಲ್ಲಿಯನ್ನು ಪ್ರಧಾನಿಯೆಂಬ ಪವರ್ ಪುರುಷ ಪ್ರವೇಶಿಸಲಿದ್ದಾನೆ. ಆತನ ಲಕ್ಷಣಗಳ ಆಧಾರದ ಮೇಲೆ ದೇಶದ ಮುಂದಿನ ಶುಭಾಶುಭ ಗೋಚಾರ ಫಲಗಳು ಸಂಭವಿಸಲಿವೆ.

ಪವರ್ ಪುರುಷನು ಬಿಳೀ ಬಟ್ಟೆಯನ್ನು ಧರಿಸಿದ್ದು ಬಲಗೈಯ್ಯಲ್ಲಿ ಕಮಲವನ್ನು, ಎಡಗೈಯ್ಯಲ್ಲಿ ಅಭಯ ಹಸ್ತವನ್ನು ತೋರುತ್ತಾನೆ. ಮೂರನೇ ಕೈಯ್ಯಲ್ಲಿ ಎಕೆ 56 ಗನ್ ಇರುವುದರಿಂದ ಉಗ್ರ ನಾಶ. ನಾಲ್ಕನೇ ಕೈಯ್ಯಲ್ಲಿ ಚಮಚ ಇರುವುದರಿಂದ ಸಾಡೆಸಾತಿಗಳ ಕಾಟ ಅಪಾರ. ಪವರ್ ಪುರುಷನ ಪಕ್ಷದವರಿಗೆ ಗೌರವ-ಸಮ್ಮಾನಗಳು ಲಭ್ಯವು. ಹಣ, ಉಳ್ಳವರ ಕಡೆಗೇ ಹರಿಯುವುದರಿಂದ ಐ.ಟಿ ಕುಲದೇವತಾ ಪ್ರಾರ್ಥನೆ ಸೂಕ್ತ. ಅಪ್ರಜ್ಞಾ, ಬರಟ್ಟಿ, ಅಜಮೀರು, ಪಿಟೀಲು, ರಗಡೆಗಳ ಬಾಯಿಬೀಗ ಹರಕೆಯಿಂದ ಭವಿಷ್ಯದಲ್ಲಿ ಗುರುಬಲ ಸಿದ್ಧಿಯಾಗಲಿದೆ. ಚೋರ ಚೌಕೀದಾರ ಮತ್ತು ಭ್ರಷ್ಟಾಚಾರಿ ನಂ.1 ಆಪಾದನೆಗಳು ನಕಾರಾತ್ಮಕ ಪ್ರಭಾವ ಹೊಂದಿದ್ದು, ಭವಿಷ್ಯದಲ್ಲಿ ನಿಷ್ಠುರ ಮಾತು, ಜಗಳ ಸಲ್ಲದು. ರಾಮ ಜಪ, ಗಾಂಧಿ ಮಂತ್ರಗಳ ಪಾರಾಯಣ ಒಳ್ಳೆಯದು.

ಅಷ್ಟಮ ಶನಿಯ ಕಾರಣದಿಂದಾಗಿ ವಿರೋಧಿ ಗಣಕೂಟಗಳು ಪರಸ್ಪರ ಹೊಂದುವುದಿಲ್ಲ. ಇದರಿಂದ ಅಧಿಕಾರ ಅಲಭ್ಯ. ತೆನೆ, ತಮಿಳೆಲೆ, ಅಂಧ್ರದ ನೇಗಿಲು, ಪೊರಕೆ, ಕತ್ತಿ-ಕುಡುಗೋಲು, ಕಾರು, ಬಾಣಗಳು ಒಟ್ಟಾಗಿರದೆ ಪರಸ್ಪರ ಕೊಯ್ದಾಟದಲ್ಲಿ ಮಗ್ನವಾಗುವ ಕಾರಣ, ಭವಿಷ್ಯದಲ್ಲಿ ವಿಶ್ರಾಂತಿ ಲಭ್ಯವು. ಅಂತಿಮದಲ್ಲಿ ಶೂನ್ಯ ಸಂಪಾದನೆಯು.

ADVERTISEMENT

ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಭಿನ್ನ ಬಾಂಬನ್ನು ಇಡುವ ಪ್ರಯತ್ನ ಸದಾ ನಡೆಯುವುದು. ಕಮಲದ ಸುವಾಸನೆಗೆ ಮರುಳಾಗುವವರನ್ನು ಹಿಡಿದಿಡಲು ಆಗಾಗ ಪ್ರತಿಭಾ ಪುರಸ್ಕಾರ ನೀಡುತ್ತಾ, ರೆಸಾರ್ಟು ವಾಸ ಮತ್ತು ಎಣ್ಣೆ ಸ್ನಾನ ಮಾಡಿಸುವುದು ಒಳ್ಳೆಯದು.

ಬಕರ ರಾಶಿಯ ಜನರ, ರೈತರ ಸ್ಥಿತಿ ಅಧೋಗತಿಯು. ಮಳೆ ಬಾರದೇ ಗುಳೇ ಯೋಗವು. ಪವರ್ ಪುರುಷ ನಡೆಯುತ್ತಾ ಹೋಗುವುದರಿಂದ ಡೀಸೆಲ್, ಪೆಟ್ರೋಲ್ ಬೆಲೆ ತೇಜಿಯಾಗಲಿದೆ. ತರಕಾರಿ, ದಿನಸಿಗೆ ತತ್ವಾರವು.ಕೈ ಮತ್ತು ಕಮಲಗಳು ಅಕೌಂಟಿಗೆ ಹಣ ಹಾಕಲೆಂದು ಕುಬೇರ ಮಂತ್ರ ಜಪಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.