
ಚುರುಮುರಿ: ಅಗೋಚರ ಹೈಕಮಾಂಡ್!
‘ಯಾರು ತಾವು?’ ಆಕಾಶದಲ್ಲಿ ಮಾರ್ದನಿಸಿದ ಧ್ವನಿ ಕೇಳಿ ಬೆಚ್ಚಿದಂತೆ ಎದ್ದ ಮುದ್ದಣ್ಣ.
‘ನಾನು ಹೈಕಮಾಂಡ್’ ಆಕರ್ಷಕ ಧ್ವನಿ ಗರ್ಜಿಸಿತು.
‘ಧ್ವನಿ ಅಷ್ಟೇ ಕೇಳಿಸುತ್ತಿದೆ. ದೇಹವೆಲ್ಲಿ?’ ಕೇಳಿದ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಮುದ್ದಣ್ಣ.
‘ನನ್ನ ಧ್ವನಿ ಕೇಳುತ್ತದೆ. ನನಗೆ ಯಾವುದೇ ಆಕಾರವಿಲ್ಲ ಎಂಬುದು ನಿನಗೆ ಗೊತ್ತಿಲ್ಲವೇ?’ ನುಲಿಯಿತು ಹೈಕಮಾಂಡ್.
‘ಎರಡೂವರೆ ವರ್ಷಗಳಾಗಿ ಎಷ್ಟು ದಿನಗಳಾದವು, ಎಲ್ಲವನ್ನೂ ನಾನೇ ನೆನಪಿಸಬೇಕೇ?’ ಮುದ್ದಣ್ಣನ ಧ್ವನಿ ಗಡುಸಾಗತೊಡಗಿತು.
‘ಏಕೆ ಹೀಗೆ ವರ್ತಿಸುತ್ತಿದ್ದೀರಿ? ನಿಮ್ಮ ಮಾತು ಬಿರುಸಾಗುತ್ತಿದೆ…’
‘ನನ್ನ ಸೂಚನೆಯನ್ನು ನೀವು ಪಾಲಿಸುತ್ತಿಲ್ಲವಲ್ಲ’
‘ಎಲ್ಲರೆದುರು ನಾನು ಹೈಕಮಾಂಡ್ ಸೂಚನೆ ಪಾಲಿಸುತ್ತೇನೆ ಎಂದು ಹೇಳುತ್ತೀರಿ. ಇಲ್ಲಿ ನೋಡಿದರೆ ನನಗೇ ಸೂಚನೆ ಕೊಡುತ್ತಿದ್ದೀರಿ’ ಕೇಳಿತು ಹೈಕಮಾಂಡ್.
‘ನಾನು ಹಾಗೆ ಹೇಳುತ್ತೇನೆ. ಆದರೆ, ಸೂಚನೆ ಪಾಲಿಸಬೇಕಾದವರು ನೀವು’.
‘ನಾನು ಮೊದಲೇ ಹೇಳಿದೆನಲ್ಲ. ನಾನು ನಿರಾಕಾರ. ಆಕಾಶದಲ್ಲಷ್ಟೇ ನನ್ನ ಅಧಿಕಾರ’ ಅಸಹಾಯಕ ದನಿಯಲ್ಲಿ ಹೇಳಿತು ಹೈಕಮಾಂಡ್.
‘ಮತ್ತೆ ನಮ್ಮ ಸಿಎಂ ಹೇಳಿದರು. ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೇಳುತ್ತೇವೆ ಅಂತ. ಅವರಿಗೆ ಏನು ಭರವಸೆ ಕೊಟ್ಟಿದ್ದೀರಿ ನೀವು’ ಮುದ್ದಣ್ಣ ಕೆರಳಿದ.
‘ಇಲ್ಲ, ಇಲ್ಲ. ಅವರಿಗೂ ಭರವಸೆ ಕೊಟ್ಟಿಲ್ಲ. ಅವರು ನನ್ನ ಮಾತು ಕೇಳುವುದೂ ಇಲ್ಲ. ನಿಮ್ಮಂತೆ ಅವರೂ ನನ್ನ ಹೆಸರು ಬಳಸಿಕೊಂಡಿದ್ದಾರಷ್ಟೇ’.
‘ನಿಮಗಿಂತ ನಮ್ಮ ಎದುರಿನ ಪಕ್ಷದ ಹೈಕಮಾಂಡೇ ಬೆಟರ್ ಅನಿಸುತ್ತೆ’.
ಜೋರಾಗಿ ನಕ್ಕ ಹೈಕಮಾಂಡ್, ‘ನನಗಾದರೂ ಮುಖ್ಯಮಂತ್ರಿ ಹುದ್ದೆ ಯಾರಿಗೆ ನೀಡಬೇಕು ಅನ್ನೋ ಚಿಂತೆ. ಆದರೆ, ನಿಮ್ಮ ರಾಜ್ಯದಲ್ಲಿ ಅವರ ಪಕ್ಷದ ಅಧ್ಯಕ್ಷರ ಬಗ್ಗೆಯೇ ಅವರಿಗೆ ನಿರ್ಧಾರ ತೆಗೆದುಕೊಳ್ಳೋಕಾಗ್ತಿಲ್ಲ’ ಎಂದಿತು.
‘ನಮ್ಮ ಪಕ್ಷದ್ದಾದರೂ ಇನ್ನೇನು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ನಾನು ಹೈಕಮಾಂಡ್ಗೆ ಕೇಳಬೇಕು ಅಂತಾರಲ್ಲ’ ಎಂದು ನಕ್ಕ ಮುದ್ದಣ್ಣ.
‘ನಾನು ನಿರಾಕಾರ ಅಂತ ಅದಕ್ಕೇ ಹೇಳಿದ್ದು’ ಎಂದು ಮೌನವಾಯಿತು ಹೈಕಮಾಂಡ್ ಧ್ವನಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.