ADVERTISEMENT

ಚುರುಮುರಿ| ಯುಗಾದಿ ವರ್ಷ ಭವಿಷ್ಯ

ಲಿಂಗರಾಜು ಡಿ.ಎಸ್
Published 21 ಮಾರ್ಚ್ 2023, 22:04 IST
Last Updated 21 ಮಾರ್ಚ್ 2023, 22:04 IST

ಶನಿರೂಪದ ಕಾಲಪುರುಷನು ಶೋಭಕೃತನಾಗಿ ಅಸತ್ಯಯುಗಕ್ಕೆ ಪ್ರವೇಶ ಮಾಡಲಿದ್ದಾನೆ. ಕಾಗೆ ಆತನ ವಾಹನವಾದ ಕಾರಣ, ಕಾಗೆಯಂತಾಡುವ ಬ್ಯಾಡ್ ಬಾಯ್‍ಗಳು ಶೀಘ್ರ ಏಳ್ಗೆ ಹೊಂದಲಿದ್ದಾರೆ. ಕಾಲಪುರುಷನು ಬಿ ಫಾರಮ್ ಹಿಡಿದಿದ್ದು ದಕ್ಷಿಣ ದಿಕ್ಕಿಗೆ ತೆರಳುವುದರಿಂದ, ಆಯಾರಾಂ-ಗಯಾರಾಂಗಳಿಗೆ ಪ್ರವಾಸ ಭಾಗ್ಯ.

ರಾಜಕಾರಣಿಗಳ ಮಾತು-ಕೃತಿಗಳಲ್ಲಿ ಉರಿ, ನಂಜು ಹೆಚ್ಚುವುದರಿಂದ ಜನತೆಯ ಗೋಚಾರ ಫಲದಲ್ಲಿ ತಾಪ ಏರಲಿದೆ. ಗಂಟುಗಳ್ಳರ, ಲ್ಯಾಂಡುರೋಗಿಗಳ, ಲಾಂಗುಶೀಟರುಗಳ ಹಣದ ಹರಿವು ಹೆಚ್ಚಲಿದೆ. ಚುನಾವಣಾ ಟಿಕೇಟು ಆಕಾಂಕ್ಷಿಗಳಿಂದ ಪಕ್ಷಾಂತರದ ಬೆಚ್ಚರಿಕೆ, ಗ್ರಹ ಪಲ್ಲಟ.

ಹೈಕಮಾಂಡಿಗೆ ಪಕ್ಷವಾತ! ಆಣೆ-ಪ್ರಮಾಣ ಗಳ ಬಳಕೆ ಹೆಚ್ಚುವುದು. ಹಿರಿಯ ರಾಜಕಾರಣಿ ಗಳಿಗೆ ವಾನಪ್ರಸ್ಥದ ಕರ್ಮವ್ಯಾಧಿ ಕಾರಣ ವಿಶ್ರಾಂತಿ ಫಲ. ಚುನಾವಣೆ ನಂತರ ಎರಡು ಗ್ರಹಗಳು ಒಂದೇ ಸಾಲಿನಲ್ಲಿ ಬರುವುದರಿಂದ ಮಿಶ್ರ ಫಲ ಸಾಧ್ಯತೆ.

ADVERTISEMENT

ಮುಷ್ಕರ, ಮೀಸಲಾತಿ ಭೀತಿಗಳಿಂದ ಸರ್ಕಾರಕ್ಕೆ ಏದುಸಿರು. ಕೇಂದ್ರದ ಹಿರಿಯ ವೈದ್ಯರ ಉಸ್ತುವಾರಿಯಿಂದ ತಾತ್ಕಾಲಿಕ ಉಪಶಮನ. ಕೈ ಕಸುಬಿನಿಂದಾಗಿ ರಾಜಕಾರಣಿಗಳ ಆಸ್ತಿ ಮೌಲ್ಯ ನೂರಾರು ಪಟ್ಟು ಏರಿಕೆಯಾಗಲಿದೆ. ಸೋಪು ಮತ್ತು ಅಡಿಕೆಗಳಿಂದ ಮಾನಹಾನಿ, ವೃಥಾ ಖರ್ಚು. ಕುಟುಂಬ ರಾಜಕಾರಣದಿಂದ ಕಲುಷಿತ ನಾತಾವರಣ.

ಸಾಮಾನ್ಯ ಜನತೆಗೆ ದುರ್ಭಿಕ್ಷ, ನೀಚ ಬಲ ಅಧಿಕ. ಮಧ್ಯಮ ವರ್ಗಕ್ಕೆ ಸಾಡೇಸಾತಿ ಪ್ರಭಾವದಿಂದ ಐಟಿ, ಜಿಎಸ್‍ಟಿಗಳು ಹೊರೆ
ಯಾಗಲಿವೆ. ನಾಯಕರ ಮತಗಾನ ನಂಬುವ ಜನತೆಗೆ ರಾಜಕೀಯ ಮಧುಮೇಹ. ಮನಿಸಾಕ್ಷಿ ಮತದಿಂದ ಪ್ರೇತಃಕಾಲ ಆರಂಭ ಸಾಧ್ಯತೆ. ಜಾಲತಾಣಿಗರು ಕ್ರೀಂ ಇಲವೆನ್, ಮಮ್ಮಿ ಸರ್ಕಲ್ ಆಕರ್ಷಣೆಗೆ ಬಲಿಯಾಗದೆ ಅನುಮಾನದ ಚಾಳೀಸನ್ನು ಬಳಸುವುದು ಯೋಗ್ಯ. ಇಲಾಖೆಗಳ ಧೂರ್ತಾಂಡತನ ದರ್ಶನದಿಂದ ಜನ ಕಂಗಾಲು. ರೈತರು ಕಠಿಣ ಪರಿಶ್ರಮದಿಂದ ಉತ್ತಮ ಫಸಲು ಪಡೆದರೂ ಮಧ್ಯವರ್ತಿ ದೇವತೆಗಳ ಪ್ರಭಾವ ತಪ್ಪದು. ಜನಸಾಮಾನ್ಯರು ರಾಜಕಾರಣ ವಟುಗಳ ಕಷ್ಟೋತ್ತರ, ಚೀರ್ತನೆಗಳ ಪ್ರಭಾವಕ್ಕೆ ಬಲಿಯಾಗದಿರಲು ಜೋಡಶೋಪಚಾರ ಮಂತ್ರ ಪಠಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.