ಬೆಕ್ಕಣ್ಣ ಏನೋ ಓದುತ್ತ ಪಕಪಕನೆ ನಕ್ಕಿತು.
‘ಮೂವತ್ತು ವರ್ಷದ ಹಿಂದೆ ವಿಲೇಜ್ ಅಕೌಂಟೆಂಟ್ ಒಬ್ಬರು ಬರೇ 500 ರೂಪಾಯಿ ಲಂಚ ತಗಂಡಿದ್ದಕ್ಕೆ ಈಗ ಹಿಡಿದು ಜೈಲಿಗೆ ಹಾಕ್ಯಾರಂತೆ!’
‘ಲಂಚಾವತಾರಕ್ಕೆ ಶಿಕ್ಷೆ ಕೊಡೋದಕ್ಕೆ ಮೂವತ್ತು ವರ್ಷ ಬೇಕಾಯಿತಾ!’ ಎಂದು ನಾನೂ ಅಚ್ಚರಿಗೊಂಡೆ.
‘ಕೊನೆಗೂ ಕೇಸು ತೀರ್ಮಾನ ಆಗಿದ್ದು ಸುಪ್ರೀಂ ಕೋರ್ಟಿನಲ್ಲಿ! ಪಾಪದ ಆ ದೂರುದಾರ ಸತ್ತೇ ಐದು ವರ್ಷ ಆಗೈತಂತೆ’.
‘ನ್ಯಾಯ ದೇಗುಲದಲ್ಲಿ ತಡವಾದರೂ, ನ್ಯಾಯ ಸಿಕ್ಕೇ ಸಿಗತೈತೆ ಕಣಲೇ’ ಎಂದೆ.
‘ಜುಜುಬಿ 500 ರೂಪಾಯಿ ಲಂಚ ಪ್ರಕರಣದ ತೀರ್ಪು ಕೊಡಕ್ಕೂ ಸುಪ್ರೀಂ ಕೋರ್ಟ್ ಬೇಕು ಅಂದ್ರೆ ಜಿಲ್ಲಾ ಕೋರ್ಟ್ಗಳು, ಹೈಕೋರ್ಟ್ಗಳಿಗೆ ಬರೋ ಕೇಸುಗಳ ಗತಿ ಏನು…’ ಬೆಕ್ಕಣ್ಣ ರಾಗವೆಳೆಯಿತು.
‘ಹಂಗೆಲ್ಲ ಕೋರ್ಟ್ ಬಗ್ಗೆ ಹಗುರಾಗಿ ಮಾತನಾಡಬ್ಯಾಡಲೇ… ನ್ಯಾಯಾಂಗ ನಿಂದನೆಯಾಗತೈತೆ’ ಎಂದು ನಾನು ಎಚ್ಚರಿಸಿದೆ.
‘ಆ ವಿಚಾರ ಬಿಡೂಣು. 500 ರೂಪಾಯಿ ಲಂಚ ಪ್ರಕರಣದ ತೀರ್ಪು ಬರೋದಕ್ಕೆ ಮೂವತ್ತು ವರ್ಷವಾದರೆ, ಲಕ್ಷಗಟ್ಟಲೆ ರೂಪಾಯಿಯ ಲಂಚ ಪ್ರಕರಣಗಳ ತೀರ್ಮಾನಕ್ಕೆ ಎಷ್ಟು ವರ್ಷಬೇಕಾಗಬೌದು ಲೆಕ್ಕ ಹಾಕು’.
‘ಹಂಗೇ ವಿಜಯ್ ಮಲ್ಯ, ನೀರವ್ ಮೋದಿ ಇಂಥ ಹೈಪ್ರೋಫೈಲ್ ವಂಚನೆ ಪ್ರಕರಣಗಳಲ್ಲಿ, ತೀರ್ಪು ಕೊಡಕ್ಕೆ ಎಷ್ಟ್ ವರ್ಷ ಬೇಕಾಗಬೌದು?’
‘ನೀ ಬರೇ ನೀರವ್ ಅನ್ನು, ಅವನ ಅಡ್ಡಹೆಸರು ಮೋದಿ ಅಂತ ಉಲ್ಲೇಖ ಮಾಡೂ ಅಗತ್ಯವೇ ಇಲ್ಲ’. ಬೆಕ್ಕಣ್ಣ ಜೋರಾಗಿ ಗುರ್ರೆಂದಿತು.
‘ಹೆಸರಿನಾಗೆ ಏನೈತಿ ಅಂತ ಷೇಕ್ಸ್ಪಿಯರ್ ಹೇಳ್ಯಾನಲ್ಲ… ಅಡ್ಡಹೆಸರು ಬಿಟ್ಟಾಕಿ, ಬರೇ ನೀರವ್ ಅನ್ನೂಣು. ಇವರಿಬ್ಬರ ವಂಚನೆ ಪ್ರಕರಣದ ತೀರ್ಪಿಗೆ ಎಷ್ಟ್ ವರ್ಷ ಆಗತೈತೆ ಲೆಕ್ಕ ಹಾಕು’ ಬೆಕ್ಕಣ್ಣ ಲೆಕ್ಕದ ಮಾತು ಮುಂದುವರೆಸಿತು.
‘ನಮ್ಮ ರಾಜ್ಯದ ಕೋರ್ಟ್ಗಳಲ್ಲಿ ಸುಮಾರು ಇಪ್ಪತ್ತು ಲಕ್ಷ ಕೇಸುಗಳು ಬಾಕಿ ಅದಾವಂತೆ… ಅಲ್ಲದೇ ನ್ಯಾಯಾಂಗ ಸಿಬ್ಬಂದಿ ಕೊರತೆ ಬೇರೆ… ಹಿಂಗಾಗಿ ಕೇಸುಗಳು 20-30 ವರ್ಷ ಜಗ್ಗತಾವು’ ನಾನು ಸಮರ್ಥಿಸಿದೆ.
‘ಕೊನೆಗೂ ತೀರ್ಪು ಬರಕ್ಕೆ ಎಷ್ಟು ವರ್ಷ ಹಿಡೀಬೌದು ಅನ್ನೋ ಅಂದಾಜು ಕೇಸಿನ ಪರ, ವಿರೋಧ ವಾದ ಮಾಡೋ ವಕೀಲರಿಗಷ್ಟೇ ಗೊತ್ತಿರತೈತಿ’ ಎಂದು ಬೆಕ್ಕಣ್ಣ ಸತ್ಯ ನುಡಿಯಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.