ADVERTISEMENT

ಚುರುಮುರಿ | ನಂದೇನೂ ನಡೀತಿಲ್ಲ

ಲಿಂಗರಾಜು ಡಿ.ಎಸ್
Published 15 ಆಗಸ್ಟ್ 2022, 18:48 IST
Last Updated 15 ಆಗಸ್ಟ್ 2022, 18:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತುರೇಮಣೆ, ನಾನು ಕುಂತಿದ್ದಾಗ ಒಂದು ಗುಂಪಿನ ಮೆರವಣಿಗೆ ಬಂತು. ಅದರಲ್ಲೊಬ್ಬ ‘ಆಜಾತಿ ಆಜಾತಿ’ ಅಂತ ಕೂಗ್ತಿದ್ದ. ನಾನು ತುರೇಮಣೆ ಮುಖ ನೋಡಿದೆ.

ಅಲ್ಲಿ ಹೋಯ್ತಿದ್ದ ಇನ್ನೊಬ್ಬನ್ನ ಕರೆದು ‘ಇದೇನಲಾ ಅವನು ಆಜಾತಿ, ಆಜಾತಿ ಅಂತ ವರಲತಾವ್ನೆ’ ಅಂತ ಕೇಳಿದೋ.

ಅವನಂದ ‘ಸಾ ಅವುನಿಗೆ ನಾಲಿಗೆ ತಿರಗಕುಲ್ಲ. ಆಜಾದಿ ಅನ್ನೋ ಬದಲು ಆಜಾತಿ ಅಂತಾವ್ನೆ. ಮಿಸ್ಟೀಕ್ ಮಾಡಿಕ್ಯಬ್ಯಾಡಿ’ ಅಂತಂದ.

ADVERTISEMENT

‘ರಾಜಕಾರಣಿ ಆಗಕೆ ಲಗತ್ತಾಗವನೆ. ಅವುರಿಗು ಹಂಗೇ ಐನ್ ಟೈಮಲ್ಲಿ ನಾಲಗೆ ತಿರುಗಕಿಲ್ಲ’ ಅಂದ್ರು ತುರೇಮಣೆ.

‘ಜಾತಿ ನಮ್ಮ ರಾಜಕಾರಣಿಗಳಿಗೆ ಚಾಕಲೇಟಿದ್ದಂಗೆ! ಎಪ್ಪತ್ತೈದು ವರ್ಸದಿಂದ ಅವರೂ ಚೀಪಿ ನಮಗೂ ಚೀಪಿಸ್ತಾವರೆ?’ ಅಂತಂದೆ.

‘ಹ್ಞೂಂ ಕಪ್ಪ, ಮನೇ ಕೆಲಸದೋರ್ನ ನೇಮಿಸಿಗ್ಯಳಕ್ಕೆ ಅಕ್ರಮ, ದಿನಸಿ-ತರಕಾರಿ ಅಂಗಡಿಯೋರ ತವು ಕಮೀಶನ್ನು, ಮನೆಗೆ ಬರೋ ಪುಸ್ತಕ, ಪತ್ರಿಕೆಗಳ ಬದಲಾಯಿಸೋಕೆ ಹುನ್ನಾರ. ಮೊನ್ನೆ ಮನೆ ಮುಂದೆ ಗುಂಡೀಲಿ ಎಡವಿ ಬಿದ್ದು ಕಾಲು ಉಳುಕಿಸಿಕೊಂಡಿದ್ಕೆ ಎಲ್ಲಾರು ನನ್ನೇ ಬೋದ್ರು. ನಮ್ಮನೇಲೂ ಇದೇ ಥರ ಯವಸ್ಥೆನೇ ಕೆಟ್ಟೋಗ್ಯದೆ!’ ತುರೇಮಣೆ ತಮ್ಮ ದುಃಖ ತೋಡಿಕೊಂಡರು.

‘ನಿಮ್ಮವ್ವಾರನ್ನ ಕರೆಸಿ ಬುದ್ಧಿ ಹೇಳಿಸ್ಬೇಕಾಗಿತ್ತು ಸಾ!’ ಸಲಹೆ ಕೊಟ್ಟೆ.

‘ಮನೇಲಿ ಅವುರ ಮಾತು ಯಾರೂ ಕೇಳೋ ಪರಿಸ್ಥಿತಿಲೇ ಇಲ್ಲ ಕನೋ. ‘ಇನ್ನು 7-8 ತಿಂಗಳುಗಂಟಾ ನಡೆದಂಗೆ ನಡೀಲಿ ಮಾದಪ್ಪನ ಜಾತ್ರೆ!’ ಅಂದ್ರಂತೆ’ ಸಣ್ಣಗೆ ಕೊರಗಿದರು.

‘ಈಗ ಏನು ಮಾಡಬಕು ಅಂತಿದ್ದರಿ?’ ಅಂತ ವಿಚಾರಿಸಿದೆ.

‘ನಮ್ಮಪ್ಪ ಲೋಕಪ್ಪನಿಗೆ ಇಸ್ಟೊರ್ಸ ಹುಸಾರಿರಲಿಲ್ಲ. ಈಗ ಇದೆಲ್ಲಾ ನೋಡಿ ಕೆಂಗೆಂಡ ಆಗ್ಯವನೆ ‘ನಾನು ಬತ್ತೀನಿ ಇರು ಮಗ. ಹೇಳಿದ್ದು ಕೇಳದಿದ್ದರೆ ಬಲಿ ಹಾಕ್ತಿನಿ’ ಅಂದವುನೆ. ನಮ್ಮನೇಲೂ ನಂದೇನು ನಡಿತಿಲ್ಲ. ಯಂಗೋ ಮ್ಯಾನೇಜ್ ಮಾಡ್ತಾ ಇವ್ನಿ ಕಯ್ಯಾ!’ ಅಂತ ತಮ್ಮ ದುಃಖ ತೋಡಿಕೊಂಡರು. ಇದು ಎಲ್ಲಾರದ್ದೂ ದುಃಖ ಅನ್ನಿಸ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.