.ಚುರುಮುರಿ
ಗುದ್ಲಿಂಗ ಆ್ಯಂಡ್ ಕಂಪನಿ ವೀಕೆಂಡಲ್ಲಿ ಎಣ್ಣೆ ಹಾಕೋದು ಬಿಟ್ಟು ವಿಧಾನಸೌಧ ನೋಡೋ ಆಸೆಯಿಂದ ಬಂದಿದ್ರು. ಗೈಡ್ ಅವರಿಗೆ ಮಾರ್ಗದರ್ಶನ ಮಾಡ್ತಿದ್ದ.
‘ಇದೇನ್ಲಾ ಇಲ್ಲಿ ಈ ಪಾಟಿ ಮೆಟ್ಲು ಅವೆ...’ ಕೇಳಿದ ಭದ್ರ.
‘ಮತ್ತೆ ದೇವರ ದರ್ಶನ ಸುಮ್ನೆ ಆಯ್ತದಾ? ಬೆಟ್ಟ ಅತ್ತಿದಂಗೆ ಅತ್ತಿ ವೋಗ್ಬೇಕು ಕಣ್ಲಾ! ಮೇಲ್ ನೋಡ್ಲಾ, ಸರ್ಕಾರಿ ಕೆಲಸ ದೇವರ ಕೆಲಸ ಅಂತ ಬರ್ದವ್ರೆ’ ಅಂದ ಗುದ್ಲಿಂಗ.
‘ವೂ ಕಣ್ಲಾ, ಅಂದ್ರೆ ಏನೇ ಕೆಲಸ ಇದ್ರೂ ದೇವರೇ ಬಂದು ಮಾಡ್ಕೊಬೋದು, ನಾವ್ ಮಾಡಕಿಲ್ಲ ಅಂತ’.
‘ಬನ್ನಿ ಬನ್ನಿ, ಇದೇ ಮೊಗಸಾಲೆ...’ ಗೈಡ್ ಮುಂದೆ ಹೋದ.
‘ಊ... ಇಲ್ಲೇ ಶಾಸಕರು ಅದೂ ಇದೂ ಲಾಬಿ ಮಾಡ್ತಾರಲ್ವಾ? ರೆಕ್ಲೈನರ್ಸ್, ಮಸಾಜ್ ಚೇರು ಎಲ್ಲಾ ಮಸ್ತಾಗವೆ. ಒಳಗೆ ಜಗಳ ಆಡೋರ್ ಮಧ್ಯೆ ನಿದ್ದೆಗೆಟ್ಟೋರು ಇಲ್ ಬಂದು ತಾಚ್ಕಬಹುದು’ ಅಂದ ಕಲ್ಲೇಶಿ.
‘ಏನಪ್ಪಾ ಇಲ್ಲಿ ಬಕೇಟ್ ಹಾಲು ಎಲ್ಲದೆ?’ ಕೇಳಿದ ಮಾಲಿಂಗ.
‘ಅದು ಬಕೇಟ್ ಹಾಲ್ ಅಲ್ಲ, ಬ್ಯಾಂಕ್ವೆಟ್ ಹಾಲ್!’ ತಿದ್ದಿದ ಗೈಡ್ ಅತ್ತ ಕರೆದೊಯ್ದ.
‘ಅಂದಹಾಗೆ ಆ ಬಾವಿ ಎಲ್ಲೈತಪ್ಪ? ಅವಾಗವಾಗ ಓಗಿ ದಬಕ್ಕಂತ ಬೀಳ್ತಾರಲ್ಲ...’
‘ಇಲ್ ಯಾವುದೂ ಬೀಳೋ ಬಾವಿ ಇಲ್ವಲ್ಲ’ ಗೈಡ್ ಕನ್ಫ್ಯೂಸ್ ಆದ.
‘ಅದೇನಪ್ಪ... ಹಗಲು– ರಾತ್ರಿ ಧರಣಿ ಕುಂತ್ಕತರಲ್ಲ...’
‘ಓ ಅದ? ಅದು ಸದನದ ಬಾವಿ. ಇದೇ ನೋಡಿ’ ಎಂದು ಗೈಡ್ ತೋರಿಸಿದ.
‘ಬರ್ರಪ್ಪಾ, ಅಂಗೇ, ನಮ್ ಭುವನೇಶ್ವರಿ, ಗಾಂಧೀಜಿ, ಕೆಂಗಲ್ಲು, ಅಂಬೇಡ್ಕರ್, ಕೆಂಪೇಗೌಡ್ರು ಎಲ್ರಿಗೂ ಒಂದು ನಮಸ್ಕಾರ ಆಕ್ಬುಡಾಣ’ ಅಂತ ಎಲ್ಲರಿಗೂ ಅಡ್ಬಿದ್ದು ಈಚೆ ಹೊರಟ್ರು.
‘ಯಾರೋ ಏನೋ ಮಾತಾಡ್ದಂಗಾಯ್ತಲ್ವಾ?’ ಎಂದ ಮಾಲಿಂಗ. ‘ಊ ಕಣ್ಲಾ, ಇಲ್ಲಿ ಬರೋರ ದರ್ಬಾರು ನೋಡಕ್ಕಾಯ್ತಿಲ್ಲ, ನಮ್ಮನ್ನೂ ಕರ್ಕೊಂಡ್ ಓಗಿ ಅಂತ ಗಾಂಧೀಜಿ ಕೇಳ್ದಂಗಾಯ್ತು’ ಎಂದ ಪರ್ಮೇಶಿ. ಎಲ್ಲಾ ಗೊಳ್ಳನೆ ನಕ್ಕರು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.