ADVERTISEMENT

ಚುರುಮುರಿ: ವೈಟ್‌ಕಾಲರ್ ಕಿತಾಪತಿ

ಲಿಂಗರಾಜು ಡಿ.ಎಸ್
Published 18 ನವೆಂಬರ್ 2025, 0:09 IST
Last Updated 18 ನವೆಂಬರ್ 2025, 0:09 IST
   

ವತ್ತಾರೆ ಪಾರ್ಕಲ್ಲಿ ವಾಕಿಂಗ್ ಮಾಡ್ತಿದ್ದೆ. ಯಾರೋ ಹಿಂದ್ಲಿಂದ ಕರೆದಂಗಾತು, ‘ಹಲೋ, ರೀ ಸ್ವಾಮಿ. ನಿಮ್ಮನ್ನೇ ಕನ್ರೀ ಕರೀತಿರದು’ ಅಂದ್ರು. ತಿರುಗಿ ನೋಡಿದರೆ, ಯಾರೋ ಸಿಲ್ಕ್ ಪಂಚೆ ಉಟ್ಟುಕಂದು, ಕತ್ತಿಗೆ ಗಮಗುಡೋ ಹೂವಿನ ಹಾರ, ತಂಬೂರಿ ಅಡ್ಡಡ್ಡ ನ್ಯಾತಾಕ್ಕ್ಯಂದಿದ್ರು.

‘ಯಾರು ಸ್ವಾಮಿ ತಾವು? ಹಗಲುವೇಷದೋರೆ?’ ಅಂತಂದೆ.

‘ನಾರಾಯಣ, ನಾರಾಯಣ. ಲೇ ಬೊಡ್ಡಿಹೈದ್ನೆ, ನಾನು ನಾರದ ಕಲಾ. ನಿಮಗೆ ಟೆರರಿಷ್ಟುಗಳು ಗೊತ್ತಾತರೆ, ನಾರದ ಕಾಣಕ್ಕಿಲ್ಲವಾ?’ ಅಂತ ಬೇಸರದಿಂದ ಬೋದ್ರು.

ADVERTISEMENT

‘ತೆಪ್ಪಾತು ಕನ ನಾರದಣ್ಣ. ತಾವು ಇತ್ತಗೆ ಬಂದ ಕಾರಣವೇನು?’ ನಾಟಕದ ಶೈಲಿಯಲ್ಲಿ ಕೇಳಿದೆ.

‘ಭಾರತದಾಗೆ ಪರಿಸ್ಥಿತಿ ಹ್ಯಂಗದೆ ನೋಡಿಕ್ಯಂದು ಬರೋಗು ಅಂತ ಎಲ್ಲಾ ಧರ್ಮದ ದೇವರುಗಳೂ ನನ್ನ ಕಳಿಸ್ಯವ್ರೆ’ ನಾರದರು ಉತ್ತರಿಸಿದರು.

‘ಏನಣೈ ನೋಡದು. ಬುದುವಂತ್ರು, ವೈದ್ಯರೇ ಬದುಕಿಸದು ಬುಟ್ಟು, ಜಾತಿ–ಧರ್ಮ ಅಂತ ಗೆರೆ ಕೊರಕಂದು ಬಾಂಬು ಸಿಡಿಸ್ತಾವರೆ. ಹರಳೆಣ್ಣೆ ಬೀಜದ ಇಕ್‌ಮದ್ದಾಕಿ ನಮ್ಮುನ್ನೆಲ್ಲಾ ಮ್ಯಾಕೆ ಕಳುಗಿಸೋ ಪ್ಲಾನ್ ಮಾಡ್ತಾವ್ರೆ’ ಅಂದೆ.

‘ಅಲ್ಲ ಕನ್ರಯ್ಯಾ, ಓದಿದ್ದು ನಿಮ್ಮ ಸ್ಕೂಲೇಲಿ, ತಿಂದುದ್ದು ನಿಮ್ಮ ಅನ್ನ, ಕುಡಿದಿದ್ದು ನಿಮ್ಮ ನೀರು, ಉಸಿರಾಡಿದ್ದು ನಿಮ್ಮ ಗಾಳಿ. ವಿದ್ಯಾವಂತರು ಅಂದಾರೇನ್ಲಾ ಇವರ್ನಾ? ಈಗ ವೈಟ್ ಕಾಲರ್ ಭಯೋತ್ಪಾದನೆ ಕಲಿತುಗಂದು ಸೀದಾ ಸ್ವರ್ಗಕ್ಕೆ ಸೇರಿಕ್ಯಬೈದು ಅಂತ ತಿಳಕಂದವ್ರೆ’ ನಾರದರು ನೊಂದ್ಕಂದರು.

‘ನಾರದಣೈ ಅದಕ್ಕೇನು ಕಾರಣ ಅಂತ ನೀವೇ ಹೇಳಬಕು’ ಅಂತಂದೆ.

‘ಹೇಳದೇನ್ಲಾ ಬೊಡ್ಡಿಹೈದ್ನೇ, ಇದಕ್ಕೆಲ್ಲಾ ಅವಕಾಶವಾದಿ ರಾಜಕಾರಣವೇ ಕಾರಣ. ನಿಮ್ಮ ನಡಂತರಕ್ಕೆ ಕಿತಾಪತಿ ತಂದು ಮಡಗ್ಯವುರೆ. ಅನುಭೋಗಿಸಿ. ನಾನು ಈಗ ಹೋಗಿ ಎಲ್ಲಾ ದೇವರುಗಳಿಗೂ ಟೆರರಿಸ್ಟುಗಳನ್ನ ಸ್ವರ್ಗಕ್ಕೆ ಬುಟ್ಕಬ್ಯಾಡಿ ಅಂತ ರಿಪೋರ್ಟು ಕೊಡ್ತೀನಿ. ನಾರಾಯಣ, ನಾರಾಯಣ’ ಅಂತ ಹೊಂಟೋದರು.

ನಾನು ತೆಪರನಂತೆ ತಪ್ಪು ಯಾರದ್ದು ಅಂತ ಯೋಚ್ನೆ ಮಾಡ್ತಾ ಕುತುಗಂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.