ADVERTISEMENT

ಚರ್ಚೆ | ಆರ್‌ಎಸ್‌ಎಸ್‌ ಆಂತರ್ಯ ಅರಿಯದೆ ಟೀಕೆ: 'ದೇವನೂರರಿಗೊಂದು ದಾಳಿಂಬೆ ಕೊಡಿ'

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 0:10 IST
Last Updated 11 ಅಕ್ಟೋಬರ್ 2025, 0:10 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಆರ್‌ಎಸ್‌ಎಸ್‌ ಎಂಬ ಕಿರು ನಾಮಧೇಯದೊಂದಿಗೆ ಜಗವಿಡೀ ಪಸರಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸರಿದುಹೋದ ವಿಜಯದಶಮಿಯಂದು ನೂರು ವರ್ಷಕ್ಕೆ ದೃಢ ಹೆಜ್ಜೆ ಇಟ್ಟ ಅನುಭವ. ಆಡುಭಾಷೆಯಲ್ಲಿ ಸಂಘವೆಂದು ಕರೆಯಲಾಗುವ ಆರ್‌ಎಸ್‌ಎಸ್‌, ಹೊಗಳುವವರು– ತೆಗಳುವವರ ಮಟ್ಟಿಗೆ ನಿರ್ಲಿಪ್ತ. ವಿಚಿತ್ರವೆಂದರೆ, ಪ್ರಪಂಚದ ಒಳಿತು ಕೆಡುಕುಗಳನ್ನು ವಿಮರ್ಶಿಸುವ, ಆಗುಹೋಗುಗಳನ್ನು ತರ್ಕಿಸುವ, ಸರಿ ತಪ್ಪುಗಳನ್ನು ಅವಲೋಕಿಸುವ ಬುದ್ಧಿಜೀವಿಗಳೆಂದು ಸಾಹಿತ್ಯ ಲೋಕದ ಒಳಗೂ ಹೊರಗೂ ಗೌರವ ಹೊಂದಿರುವ ಅನೇಕ ಮಹನೀಯರು ಅದರಲ್ಲೂ ಕೆಲ ವಿಶ್ವ ಮಾನವತೆಗೆ ಅತಿ ಹತ್ತಿರದವರು ಆರ್‌ಎಸ್‌ಎಸ್‌ನ ಆಂತರ್ಯ ಅರಿಯದೆ ಮಾಡುವ ಟೀಕೆ ಟಿಪ್ಪಣಿಗಳು ಸಂಘದ ಬಗ್ಗೆ ಹೊರಪ್ರಪಂಚಕ್ಕೆ ಚಮತ್ಕಾರವೇ ಹೊರತು ತೆರೆದ ಮನಸ್ಸಿನ ಒಡಲಾಳದ ದನಿಯಲ್ಲ.

ಸಂಘದ ಸ್ಥಾಪಕ ಡಾಕ್ಟರ್ ಜೀ ಅವರನ್ನಾಗಲಿ, ಎರಡನೆಯ ಸರಸಂಚಾಲಕ ಗುರೂಜೀ ಅವರನ್ನಾಗಲಿ ತೆಗಳುವ ಮನಸ್ಸುಗಳಿಗೆ, ಇದೇ ಶಾಖೆಗೆ ಬಂದ ಸಂವಿಧಾನ ಸೃಷ್ಟಿಕರ್ತ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಜಾತೀಯತೆ ಹೋಗಲಾಡಿಸುವ ತನ್ನ ಪ್ರಯತ್ನಕ್ಕೆ ಸಂಘ ಶಕ್ತಿ ಕೊಡುತ್ತಿದೆ’ ಎಂದು ಉದ್ಗರಿಸಿದ್ದು ನೆನಪಾಗುವುದೇ ಇಲ್ಲ. ಎರಡು ವರ್ಷಗಳ ಹಿಂದೆ ಎಡಪಂಥೀಯ ವಿಚಾರಧಾರೆಯ ಹಿರಿಯ ಲೇಖಕರೊಬ್ಬರು ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ಎಂಬ ಕಿರುಪುಸ್ತಕವನ್ನು ಪ್ರಕಟಿಸಿದ್ದರು. ಅದಕ್ಕೆ ಪೂರಕ ಪ್ರಾಸ್ತಾವಿಕ ನುಡಿ ಬರೆದ ಗಣ್ಯರೊಬ್ಬರು ಈ ಕಿರು ಪುಸ್ತಕ ಆರ್‌ಎಸ್‌ಎಸ್‌ನ ನಿಜಸ್ವರೂಪವನ್ನು ತಿಳಿಸಿ, ಭಾರತ ಸಂವಿಧಾನದ ಮತ್ತು ದೇಶದ ಏಕತೆಯನ್ನು ಗಟ್ಟಿಗೊಳಿಸಲು ಶಕ್ತಿ ನೀಡುತ್ತದೆ ಎಂದು ಘೋಷಿಸಿದ್ದರು. ಆರ್‌ಎಸ್‌ಎಸ್ ವಿರೋಧಿ ಪುಟಾಣಿ ಪುಸ್ತಕ ಪ್ರಕಟವಾಗಿ ಒಂದೇ ವಾರದಲ್ಲಿ ಹತ್ತಾರು ಸಾವಿರ ಪ್ರತಿಗಳನ್ನು ಖರೀದಿ ಮಾಡಿ ಆ ಪುಸ್ತಕಗಳನ್ನು ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಲಾಗಿತ್ತು. ದೇಶಭಕ್ತ ಸಂಸ್ಥೆಯೊಂದರ ಬಗ್ಗೆ ಕೆಟ್ಟ ಅಭಿಪ್ರಾಯ ಕ್ರೋಡೀಕರಿಸಲು ನಗರ ನಕ್ಸಲರ ತಂತ್ರವಿದು ಎಂದು ಹೊರ ಸಮಾಜಕ್ಕೆ ಅರಿವಾಗುವ ಮೊದಲು ಸಂಘ ವಿರೋಧಿ ಸಂಚೊಂದು ಅಕ್ಷರದ ರೂಪದಲ್ಲಿ ಎಳೆಯ ಮಕ್ಕಳ ಉದರವನ್ನು ಸೇರಿಯಾಗಿತ್ತು.

ಮಹಾತ್ಮ ಗಾಂಧಿ ಅವರು 1925ರ ಮಾರ್ಚ್‌ನಲ್ಲಿ ಕೇರಳಕ್ಕೆ ಕಾಲಿಟ್ಟು ಅಸ್ಪೃಶ್ಯತೆ ಮತ್ತು ಶೂದ್ರತ್ವ ಕೆಟ್ಟ ಪದ್ಧತಿಗಳೆಂದು ನುಡಿದು ಈ ಬಗ್ಗೆ ವೈದಿಕರೊಂದಿಗೆ ಚರ್ಚೆಗಿಳಿದ ವರ್ಷವೇ ಅಸ್ತಿತ್ವಕ್ಕೆ ಬಂದ ಆರ್‌ಎಸ್‌ಎಸ್‌ ಹೇಗೆ ಅಸ್ಪೃಶ್ಯತೆಗೆ ಕಾರಣವಾಗುತ್ತದೆ? ಸಂಘದಲ್ಲಿ ಅಸ್ಪೃಶ್ಯತೆಯೂ ಇಲ್ಲ, ಜಾತೀಯತೆಯೂ ಇಲ್ಲ. ಸಂಘವನ್ನು ಶೂದ್ರ ವಿರೋಧಿ ಎಂದು ಹೇಳುವವರಿಗೆ ಸಂಘದ ಮೂಲಕವೇ ಪರಿಶಿಷ್ಟರೊಬ್ಬರು ದೇಶದ ರಾಷ್ಟ್ರಪತಿಯಾದಾಗ ಬಾಯಿ ಬಿಡಲಾಗದೆ ಚಡಪಡಿಸುವ ಪರಿಸ್ಥಿತಿ. ಬುಡಕಟ್ಟು ಜನಾಂಗದ ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಸ್ಥಾನವೇರಿದಾಗ ಕೆಲವರ ಒಳಮನಸ್ಸು ಕನಲಿ ಕೆಂಡವಾಗಿತ್ತು. ಸಂಘದಲ್ಲಿರುವ ವಿಭಜಿಸುವ, ತಾರತಮ್ಯದ ಮತ್ತು ಅಪಮೌಲ್ಯದ ಆಲೋಚನೆಗಳನ್ನು ವಿಸರ್ಜಸಿ ಎಂಬ ಗುಡುಗಿನ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಘ ಆವರಿಸಿಕೊಂಡ ಸಾಮಾಜಿಕ ನ್ಯಾಯದ ಕೆಲಸಗಳಿಂದ ಬಂದ ಕಣ್ಣುರಿಯ ನುಡಿ ಕಂಪನವಿರಬಹುದೇ?

ADVERTISEMENT

ಆರ್‌ಎಸ್‌ಎಸ್‌ನ ವಿರೋಧಿ ನಿಲುವಿನ ಗುಂಪಿನ ವಿಮರ್ಶೆಗೆ ಸಿಗದಿರುವ ಅಚ್ಚರಿಯೆಂದರೆ, 100 ವರ್ಷಗಳ ಹಿಂದೆ ಹುಟ್ಟಿದ ಸಂಘ ಇಂದು ಜಗತ್ತಿನ 47 ರಾಷ್ಟ್ರಗಳಲ್ಲಿ ಸಂಘ ಶಿಕ್ಷಣ ನೀಡುವ ಶಾಖೆಗಳನ್ನು ನಡೆಸುತ್ತಿದೆ. ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕೃತಿಯ ಮೌಲ್ಯ, ಜೀವನಶೈಲಿಗಳು ಸಂಘದ ಮೂಲಕ ಜಗದಗಲ ವಿಸ್ತರಣೆಯಾಗುತ್ತಿವೆ. ಉನ್ನತ ಶಿಕ್ಷಣ ಪಡೆದ ಲಕ್ಷಾಂತರ ಯುವ ಜನಾಂಗ ಸಂಘದ ಕಾರ್ಯಕ್ಕಾಗಿಯೇ ಜೀವನ ಮುಡಿಪಾಗಿ ಇಟ್ಟಿದ್ದಾರೆ. ಅದರೊಂದಿಗೆ ದಲಿತ, ಹಿಂದುಳಿದ ಜನಾಂಗದ ಯುವಕರು ಕೈಜೋಡಿಸಿದ್ದಾರೆ. ಇದಕ್ಕೆ ಪ್ರೇರಣೆಯೆಂದರೆ ಅವರಲ್ಲಿರುವ ರಾಷ್ಟ್ರಭಕ್ತಿ.

1948ರಲ್ಲಿ ಗಾಂಧೀಜಿಯವರು ಹತ್ಯೆಯಾದಾಗ ಅಂದಿನ ಪ್ರಧಾನಿ ನೆಹರೂ ಅವರು ಸಂಘವನ್ನು ನಿಷೇಧಿಸಿದ್ದರು. ನಂತರ 1962ರಲ್ಲಿ ಭಾರತ ಚೀನಾ ಯುದ್ಧದ ಸಂದರ್ಭ ಯುದ್ಧ ತಾರಕಕ್ಕೇರಿದಾಗ ಪ್ರಧಾನಿ ನೇತೃತ್ವದಲ್ಲಿ ಸರ್ವ ಪಕ್ಷಗಳ ದುಂಡು ಮೇಜಿನ ಚರ್ಚೆ ನಡೆದಿತ್ತು. ಅಂದಿನ ವಿಶೇಷವೆಂದರೆ, ಸಂಘದ ಎರಡನೇ ಸರಸಂಘಚಾಲಕ ಗೋಲ್ವಲ್ಕರ್ ಆಹ್ವಾನಿತರಾಗಿದ್ದರು. ಸರ್ಕಾರ ಮತ್ತು ವಿಪಕ್ಷಗಳ ಮಾತಿನ ಸಮರದ ನಡುವೆ ನೆಹರೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕರು, ‘ಚೀನಿ ಸರ್ಕಾರ ಇಷ್ಟೊಂದು ಭಾರತದ ಭೂಭಾಗ ಆವರಿಸಿಕೊಳ್ಳುವಾಗ ನಿಮ್ಮ ಸೇನೆ ಏನು ಮಾಡುತ್ತಿತ್ತು’ ಎಂದು ಪ್ರಧಾನಿಯನ್ನು ಪ್ರಶ್ನಿಸಿ ಟೀಕಿಸಿದ್ದರು. ಸಭೆ ಮೌನವಾಗುತ್ತಲೇ ಗುರೂಜಿ ಗೋಲ್ವಲ್ಕರ್ ‘ನಾನೊಂದು ಮಾತನಾಡಬಹದೇ’ ಎಂದು ಕೇಳಿದ್ದರು. ನೆಹರೂ, ‘ನೀವು ಮಾತಾಡಿ’ ಎನ್ನುತ್ತಲೇ ಗುರೂಜಿ ಹೇಳಿದ್ದು, ‘ನಿಮ್ಮ ಸೇನೆ, ನಿಮ್ಮ ಸೇನೆ ಎನ್ನುವ ಬದಲು ನಮ್ಮ ಸೇನೆ ಎಂಬ ಶಬ್ದ ಪ್ರಯೋಗ ಮಾಡಬಹುದೇ’ ಎಂದು ವಿಪಕ್ಷಗಳ ಶಬ್ದ ಬಳಕೆಯನ್ನು ತಿದ್ದಿ ಹೇಳಿದ್ದರು. ಸರಸಂಘಚಾಲಕರ ಮಾತಿಗೆ ಪ್ರಧಾನಿ ನೆಹರೂ ಕಣ್ಣಲ್ಲೇ ಕೃತಜ್ಞತೆ ಅರ್ಪಿಸಿದ್ದರು. ಇದನ್ನು ಹೇಳಿದರೂ ನಮ್ಮ ರಾಜ್ಯದ ಬಹಳ ಪ್ರಭಾವಿ ಬುದ್ಧಿಜೀವಿಗಳು ಇದು ಒಡೆದು ಆಳುವ ಸಂಘದ ನೀತಿ ಎನ್ನಬಹುದೇನೋ?

ರಾಜ್ಯದಲ್ಲಿರುವ ಸರ್ಕಾರಿ ಕೃಪಾಪೋಷಿತ ಬುದ್ಧಿಜೀವಿ ಲೇಖಕರ ನೇತಾರರು ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳಲು ಹೊರಟಿದ್ದಾರೆ. ಒಂದು ಶತಮಾನ ಪೂರೈಸಿರುವ ಸಂಘವಿಂದು ಅಸಲಿಗೆ ಇಡೀ ದೇಶ ಆವರಿಸಿರುವ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಅವರಿಗೆ ಉಗುಳಲೂ ಆಗದೆ, ನುಂಗಲೂ ಆಗದೆ ಗಂಟಲಿಗೆ ಸಿಕ್ಕಿಹಾಕಿಕೊಂಡಿರುವ ಅನುಭವ ಆಗುತ್ತಿದೆ.

ಅಂದು ಅಸಹಿಷ್ಣುತೆಯ ಹೆಸರಲ್ಲಿ ಸಮಾಜವನ್ನು ದಾರಿ ತಪ್ಪಿಸಿದವರೇ ಇಂದು, ‘ಸಂಘದೊಡಲಿನಲ್ಲಿ ವಿಷಕಾರಿ ಪದಾರ್ಥ ತುಂಬಿದೆ; ಅದನ್ನು ಹೊರಹಾಕಿದರೆ ಸ್ವಾಗತಾರ್ಹ’ ಎನ್ನುತ್ತಾರೆ. ನಿಜಕ್ಕೂ ಸಂಘದ ಹೃದಯದಲ್ಲಿ ವಿಷಕಾರಿ ಅಂಶ ಹಿಂದೆಯೂ ಇರಲಿಲ್ಲ, ಮುಂದೂ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡ ನೆಹರೂ, ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಅಂದಿನ ಕೇಂದ್ರ ಸರ್ಕಾರದ ಪರವಾಗಿ ಭಾರತದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸಮವಸ್ತ್ರದಲ್ಲಿ ಭಾಗವಹಿಸಲು ಸಂಘವನ್ನು ಆಹ್ವಾನಿಸುತ್ತಾರೆ. ಆದರೆ, ಸಂಘವನ್ನು ದೂಷಿಸುವುದನ್ನೇ ಉದ್ಯೋಗ ಮಾಡಿಕೊಂಡ ರಾಜ್ಯದ ಬರಹಗಾರರು ಆರ್‌ಎಸ್‌ಎಸ್‌ ವಿರುದ್ಧ ಕೆಂಡ ಕಾರುವುದರಲ್ಲೇ ಆಯುಷ್ಯ ಕಳೆಯುತ್ತಿದ್ದಾರೆ.

ಸಂಘದ ಬಗ್ಗೆ ನೂರು ಸುಳ್ಳನ್ನು ಹೇಳಿ ಕಂಠಪಾಠ ಮಾಡಿಸಿ ಸತ್ಯವೆಂಬಂತೆ ಬಿಂಬಿಸುವುದನ್ನು ಕಂಡಾಗ, ಹಿಂದೆ ಸಂತರೊಬ್ಬರ ಬಳಿ ಶಿಷ್ಯನೊಬ್ಬ ಬಂದು, ‘ನನ್ನನ್ನು ನೋಡಿದರೆ ನೆರೆಮನೆಯ ಗೆಳೆಯ ಉರಿದು ಬೀಳುತ್ತಾನೆ, ನಾನು ಕೆಟ್ಟವನೆಂದು ಬಿಂಬಿಸಲು ಯತ್ನಿಸುತ್ತಾನೆ, ನನ್ನ ಕಂಡರೆ ಕೋಪದಿಂದ ಕುದಿಯುತ್ತಾನೆ, ನನ್ನನ್ನು ಬದುಕಲೇ ಬಿಡಬಾರದೆಂದು ತೀರ್ಮಾನಿಸಿದಂತೆ ವರ್ತಿಸುತ್ತಾನೆ. ನನ್ನಿಂದ ಯಾವ ತಪ್ಪೂ ಅವನಿಗೆ ಆಗಿಲ್ಲ. ನಾನೇನು ಮಾಡಲಿ’ ಎಂದು ಪ್ರಶ್ನಿಸುತ್ತಾನೆ. ಸಂತರು ಮೌನ ಮುಂದುವರಿಸಿದಾಗ ಮತ್ತೆ ಮತ್ತೆ... ‘ನಾನು ಏನು ಮಾಡಬಹುದು ಹೇಳಿ’ ಎಂದು ಗೋಗರೆಯುತ್ತಾನೆ. ಸಂತರು ಮೌನ ಮುರಿದು, ‘ನಿನ್ನನ್ನು ದ್ವೇಷಿಸುವ ನೆರೆಮನೆಯ ಗೆಳೆಯನಿಗೆ ಸಿಹಿಯಾದ ದಾಳಿಂಬೆ ಹಣ್ಣನ್ನು ಕೊಡು’ ಎನ್ನುತ್ತಾರೆ. ಶಿಷ್ಯ ‘ನನ್ನನ್ನು ದ್ವೇಷಿಸುವವನಿಗೆ, ನನ್ನ ಬಗ್ಗೆ ಹೊಟ್ಟೆಕಿಚ್ಚು ಪಡುವವನಿಗೆ ಸಿಹಿ ದಾಳಿಂಬೆ ಯಾಕೆ ಕೊಡಬೇಕು’ ಎಂದು ಪ್ರಶ್ನಿಸುತ್ತಾನೆ. ಸಾವಧಾನದಿಂದ ಉತ್ತರಿಸಿದ ಸಂತರು ‘ನಿನ್ನನ್ನು ದ್ವೇಷಿಸುವ ನೆರೆಮನೆಯ ಗೆಳೆಯನ ಉದರದ ತುಂಬಾ ಹೊಟ್ಟೆಕಿಚ್ಚು ಉರಿಯುತ್ತಿದೆ, ನೀನು ಸಿಹಿಯಾದ ದಾಳಿಂಬೆ ಕೊಟ್ಟಾಗ ಅವನು ಅದನ್ನು ಜಗಿದು ತಿಂದಾಗ ದಾಳಿಂಬೆ ಒಳಗಿನ ಸಿಹಿ ಮತ್ತು ಒಗರಿನ ಅಂಶ ಅವನ ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ. ದ್ವೇಷ ಕಡಿಮೆ ಆಗುತ್ತದೆ. ಮೊದಲದನ್ನು ಮಾಡು’ ಎನ್ನುತ್ತಾರೆ. ಆರ್‌ಎಸ್‌ಎಸ್‌ ವಿರೋಧಿಸುವವರಿಗೆ ಸದ್ಯಕ್ಕಿರುವ ಏಕೈಕ ಔಷಧವೆಂದರೆ ಸಿಹಿಯಾದ ದಾಳಿಂಬೆ ನೀಡುವುದು.

ವೈಚಾರಿಕವಾಗಿ ಏನೇ ಅಭಿಪ್ರಾಯ ಭೇದಗಳಿದ್ದರೂ, ಹಿರಿಯ ಸಾಹಿತಿ ದೇವನೂರ ಮಹಾದೇವ ಒಂದು ಕಡೆ ಹೇಳುತ್ತಾರೆ. ‘ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ. ಇಂದಲ್ಲಾ ನಾಳೆ ಫಲ ಕೊಡುವುದು’ ಎಂದು. ಒಂದು ಶತಮಾನದ ಹಿಂದೆ ಸಂಘ ಬಿತ್ತಿದ ಬೀಜ ಇಂದು ಫಲ ಕೊಡುತ್ತಿದೆ.

ಲೇಖಕ: ಉಡುಪಿ-ಚಿಕ್ಕಮಗಳೂರು ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.