ADVERTISEMENT

ರಾಜಕೀಯ ದಿಕ್ಸೂಚಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಿಂದ ಹೊರಬಿದ್ದ ಕೂಡಲೇ ಎದುರಾದ ಮೊದಲ ಅಗ್ನಿ ಪರೀಕ್ಷೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆದ್ದಿದ್ದಾರೆ. ಬಿಜೆಪಿ ಜತೆಗಿನ ಸುದೀರ್ಘ ಸಂಬಂಧವನ್ನು ಕಳಚಿಕೊಂಡ ನಂತರ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತು ಪಡಿಸುವ  ವಿಷಯದಲ್ಲಿ ಅನುಮಾನಗಳೇನೂ ಇರಲಿಲ್ಲ. ಆದರೆ ಈ ಮೂಲಕ ಬದಲಾಗುವ ರಾಜಕೀಯ ಚಿತ್ರಣದ ಬಗ್ಗೆ ಕುತೂಹಲವಿತ್ತು.

ರಾಜಕೀಯ ಚದುರಂಗದಾಟದಲ್ಲಿ ಯಾರು ಯಾವಾಗ ಯಾರ ಪರ ಇರುತ್ತಾರೆ ಎನ್ನುವುದೇ ತಿಳಿದಿರುವುದಿಲ್ಲ. ಈಗ ಬಿಹಾರದಲ್ಲಿ ನಿತೀಶ್ ಅವರ ಬೆಂಬಲಕ್ಕೆ ಕಾಂಗ್ರೆಸ್ ಮುಂದಾಗಿರುವುದು ಮುಂದಿನ ದಿನಗಳ ರಾಜಕೀಯ ದಿಕ್ಸೂಚಿಯಂತೆಯೇ ಕಾಣುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್- ಜೆಡಿಯು ಮೈತ್ರಿಯನ್ನು ಯಾರಾದರೂ ಊಹಿಸಬಹುದು.

ಈ ಬೆಳವಣಿಗೆಯಿಂದ ಆರ್‌ಜೆಡಿ ಮತ್ತು ಎಲ್‌ಜೆಪಿಗಳು ಕಕ್ಕಾಬಿಕ್ಕಿಯಾಗಿವೆ. ಅಲ್ಲದೆ ಆರು ಬಿಜೆಪಿ ಶಾಸಕರು ಜೆಡಿಯುವನ್ನು ಬೆಂಬಲಿಸಲು ಮುಂದಾಗಿರುವುದು, ಮತ್ತಷ್ಟು ಶಾಸಕರು ಅದೇ ಹಾದಿಯಲ್ಲಿರುವುದು ಬಿಹಾರದ ರಾಜಕೀಯ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಇದು ಈ ಸಂದರ್ಭದ ಬಿಹಾರ ರಾಜಕೀಯದ ಮಹತ್ವದ ಬೆಳವಣಿಗೆ. ಇತ್ತೀಚೆಗೆ ಪ್ರಧಾನಿ ಮನಮೋಹನ ಸಿಂಗ್ ಅವರು ನಿತೀಶ್ ಅವರನ್ನು `ಜಾತ್ಯತೀತ ನಾಯಕ' ಎಂದು ಬಣ್ಣಿಸಿದ್ದಾರೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಗಳಿಗೆ ತಥಾಸ್ತು ಎಂದಿದ್ದಾರೆ. ಇದು ಪಕ್ಷಗಳು ನಿಕಟವಾಗುತ್ತಿರುವ ಸೂಚನೆ. ನರೇಂದ್ರ ಮೋದಿ ಅವರಿಗೆ ಎದುರಾಗಿ ಸೆಡ್ಡು ಹೊಡೆಯಲು ಹೀಗೆ ವೇದಿಕೆ ಸಜ್ಜಾಗುತ್ತಿದೆ. ನಿತೀಶ್ ಅವರು ಈಗ ಉರುಳಿಸಿರುವ ರಾಜಕೀಯದ ದಾಳ ಮುಂದಿನ ಚುನಾವಣೆಯಲ್ಲಿ  ಉತ್ತಮ ಫಲಿತಾಂಶವನ್ನೇ ಕೊಡಬಹುದು.

ADVERTISEMENT

ದೇಶವು ಜಾತ್ಯತೀತ ನೆಲೆಗಟ್ಟಿನ ಮೇಲೆ ನಿಂತಿದ್ದು, ಧರ್ಮಗಳ ಆಧಾರದಲ್ಲಿ ವಿಭಜನೆಯ ರಾಜಕಾರಣ ಅನುಸರಿಸುವುದನ್ನು ಸಹಿಸಲಾಗದು ಎಂದು ನೇರವಾಗಿ ಬಿಜೆಪಿ ವಿರುದ್ಧ ಸಿಡಿದೆದ್ದಿರುವ ನಿತೀಶ್‌ಕುಮಾರ್, ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದನ್ನು ವಿರೋಧಿಸಿ ಮೈತ್ರಿ ಮುರಿದುಕೊಂಡರು. ಬಿಜೆಪಿ ಅದಕ್ಕೆ ಪ್ರತಿಯಾಗಿ ಗುಜರಾತ್ ಮುಖ್ಯಮಂತ್ರಿಯನ್ನು ಪ್ರಶಂಸಿಸಿದ್ದ ನಿತೀಶ್ ಉವಾಚವನ್ನು ಸಿ.ಡಿ ರೂಪದಲ್ಲಿ ಬಿಡುಗಡೆ ಮಾಡುವ ಮೂಲಕ ಹಗೆ ಸಾಧನೆಗಿಳಿದಿತ್ತು. ಮೋದಿ ಕಾರ್ಪೊರೇಟ್ ವಲಯದ ನಾಯಕ ಎಂದು ಹೇಳುವ ಮೂಲಕ ನಿತೀಶ್ ನೇರವಾಗಿ ಮೋದಿ ವಿರುದ್ಧ ಸಮರಕ್ಕೆ ನಿಂತಿದ್ದಾರೆ.

ಭಾರತಕ್ಕೆ ಈಗ ಬೇಕಾಗಿರುವುದು ಎಂಥ ನಾಯಕತ್ವ ಎಂಬ ಚರ್ಚೆಯನ್ನು ತೇಲಿಬಿಟ್ಟಿದ್ದಾರೆ. ಇದು ರಾಹುಲ್ ಗಾಂಧಿ ಅವರ ಪರ ಒಲವು ಎಂದು ಬಿಜೆಪಿ ನಿತೀಶ್ ವಿರುದ್ಧ ಆಪಾದನೆ ಮಾಡಿದೆ. 2010ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ, ಸ್ಪರ್ಧಿಸಿದ್ದ 102 ಸ್ಥಾನಗಳ ಪೈಕಿ 91ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಜೊತೆ ಮೈತ್ರಿ ಬೆಳೆಸುವ ಮೂಲಕ, ಮುಸ್ಲಿಮರನ್ನು ಓಲೈಸುವ ಮೂಲಕ, ಅತಿ ಹಿಂದುಳಿದ ವರ್ಗಗಳ ಜನರನ್ನು ಓಲೈಸುವ ಮೂಲಕ ನಿತೀಶ್ ಬಿಜೆಪಿಯನ್ನು ಮುಂದಿನ ದಿನಗಳಲ್ಲಿ ನಿಯಂತ್ರಿಸುವ ಕೆಲಸ ಮಾಡಿದ್ದಾರೆ. ಆದರೂ ಕಾಂಗ್ರೆಸ್‌ನ ಮತಗಳಿಕೆ ಸಾಮರ್ಥ್ಯವನ್ನು ಅಳೆದರೆ, ಬಿಜೆಪಿಗೆ ಅದು ಪರ್ಯಾಯ ಪಕ್ಷವೆನಿಸಲಾರದು. ಬಿಹಾರದಲ್ಲಿ ನಡೆದ ವಿದ್ಯಮಾನ ಮುಂದಿನ ದಿನಗಳ ರಾಜಕೀಯ ಬೆಳವಣಿಗೆಯ ದಿಕ್ಸೂಚಿಯಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.