ADVERTISEMENT

ಚುರುಮುರಿ | ಸೋಬಾನ ಸೋಬಾನ

ಲಿಂಗರಾಜು ಡಿ.ಎಸ್
Published 14 ಜೂನ್ 2025, 1:16 IST
Last Updated 14 ಜೂನ್ 2025, 1:16 IST
<div class="paragraphs"><p>.ಚುರುಮುರಿ</p></div>

.ಚುರುಮುರಿ

   

‘ಶಾಸಕರ ಮನೆ ಮದುವೆಗೋಗಿದ್ದಲ್ಲ ಬೊಡ್ಡಿಹೈದ್ನೆ? ಚೆನ್ನಾಗಿ ಮೇದು ಬಂದಾ’ ಯಂಟಪ್ಪಣ್ಣ ನನ್ನನ್ನು ವಿಚಾರಿಸಿತು.

‘ಏನು ಮೇಯದೋ ಏನೋ. ನನ್ನ ಕರ್ಮ. ಗಂಡು- ಯೆಣ್ಣಿಗೆ ಮುಯ್ಯಿ ಕೊಟ್ಟು ಬರುಮಾ ಅಂತ ಹೋದ್ರೆ ದೊಡ್ಡ ಸರತಿಸಾಲು. ಸೂಟು– ಬೂಟು ಇಕ್ಕಿದೋರು ಮಾನ– ಮರ್ವಾದೆ ಬುಟ್ಟು ಅಡ್ಡದಾರೀಲಿ ಕಡೆದು ಬಂದು ಹೋಗದಾ?’

ADVERTISEMENT

‘ಏನುವಿಲ್ಲ ಎಂತುವಿಲ್ಲ ಅದ್ಯಾಕೆ ಹಂಗೆ ನುಗ್ತಿದ್ರೋ? ಆಮೇಲೆ?’

‘ಮೊದಲು ಉಂಡ್ಕಂದು ಬರುಮೆ ಅಂತ ಉಣ್ಣಕ್ಕೋದೆ. ಅಲ್ಲಿ ಉಣ್ಣೋರ ಬೆನ್ನಿಂದೆ ಜನ ನಿಂತುಕಂದು ‘ಎಷ್ಟೊತ್ತು ಉಣ್ಣುತೀರ ಎದ್ದೇಳ್ರಿ’ ಅಂತ ಸ್ವಾಟೆ ತಿವೀತಿದ್ರು ಕನಣೈ. ಈ ಊಟವೇ ಬ್ಯಾಡ ಕರೆನೆರೆಗೆ ಹೋಗಮು ಅಂತ ಬೇಜಾರಾಗಿ ಮನೆಗೆ ಬಂದು ಉಂಡು ಮಕ್ಕಂದೆ’

‘ಆಮೇಲೆ ಕರೆನೆರೆ ಹೆಂಗಾತು?’ ಯಂಟಪ್ಪಣ್ಣ ಸೋಜುಗಪಟ್ಟಿತು.

‘ಛತ್ರ ಸಣ್ಣದು. ಕರೆನೆರೆ ಊಟದೇಲಿ ಈಲಿ, ಗುಂಡಿಗೆ, ಬೋಟಿ, ಒಳಭಂಡಾರ ನೆನೆಸಿಕ್ಯಂದು ನುಗ್ತಿದ್ದ ಜನದ ನಡಂತರದೇಲಿ ಯಂಗೋ ಜಾಗ ಮಾಡಿಕ್ಯಂದು ಮುಂದ್ಕೋದೆ’.

‘ಚನ್ನಾಗಿ ಕಪ್ಪಡಿಸಿ ಬಂದೆ ಹಂಗಾರೆ’ ಯಂಟಪ್ಪಣ್ಣ ಜೊಲ್ಲು ಸುರಿಸಿತು.

‘ಅಲ್ಲೂ ಜನ ಮಗ್ಗುಲ ಗೇಟಿಂದ ನುಗ್ತಿದ್ರು. ಮುಂದಿದ್ದೋನು ಗೇಟಲ್ಲಿದ್ದೋನಿಗೆ ‘ಅವನ್ನ ಮಾತ್ರ ಅಕ್ಕಡಿಂದ ಒಳಾಕ್ಕೆ ಬುಟ್ಟಲ್ಲ, ಅವನೇನು ನಿನ್ನ ಅಣ್ತಮ್ಮನಾ, ಕಳ್ಳು- ಬಳ್ಳಿಯಾ? ನನ್ನೂ ಬುಡು’ ಅಂತ ಜಗಳ ಕತ್ತಿಕ್ಯತ್ತಲ್ಲ, ಜನ ವತ್ತಲಿಸ್ಕಂದು ದೂಕಾಡಿ ತುಳಕಂದು ಚೌಲ್ಟ್ರಿ ಗೇಟು ಮುರಿದಾಕಿ ಒಳಾಕೊಂಟೋದ್ರು. ಅಂಗಿ ಹರಿದೋಗಿ, ಚಪ್ಪಲಿ ಕಿತ್ತೋಗಿ ನನ್ನ ಕತೆ ಗೋವಿಂದಾಗಿತ್ತು’ ಅಂತಂದು ನಿಟ್ಟುಸಿರುಬುಟ್ಟೆ.

‘ಆಯೋಜನೆ ಮಾಡಿದೋರು ‘ಎಲ್ಲಾರೂ ಬಲ್ರಿ’ ಅಂತ ಕರೆದುಬುಟ್ಟು ಈಗ ‘ನಮ್ಮದೇನು ತಪ್ಪಿಲ್ಲ’ ಅನ್ನಕ್ಕಾದದೇನೋ. ಈಟೊಂಥರ ಜನ ಬಂದ್ರೆ ಕಾಲ್ತುಳಿತಾತದೆ ಅಂತ ವಸಿ ಗ್ಯಾನ ಇರಾಬೇಕಾಗಿತ್ತಲುವೆ? ಛತ್ರದೋನ್ನ, ಮಾಂಸ ಕೊಟ್ಟೋನ್ನ, ಅಡುಗೆಯೋನ್ನ ಅರೆಸ್ಟ್ ಮಾಡಿದ್ರೆ ಆತದಾ? ಪರಿಹಾರ ಕೊಟ್ರೆ ಮುರಿದೋದ ಕಾಲು, ಹೊಂಟೋದ ಪ್ರಾಣ ವಾಪಾಸ್ ಬಂದದೇ?’ ತುರೇಮಣೆ ರೂಲಿಂಗ್ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.