ADVERTISEMENT

‘ವಿಳಂಬವಾಗಿದ್ದಕ್ಕೆ ಬೇಸರವಿಲ್ಲ’

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯಡಕ ಗೋಪಾಲ ರಾವ್

ರಾಘವೇಂದ್ರ ಭಟ್ಟ
Published 30 ನವೆಂಬರ್ 2018, 20:00 IST
Last Updated 30 ನವೆಂಬರ್ 2018, 20:00 IST
ಹಿರಿಯಡಕ ಗೋಪಾಲ ರಾವ್
ಹಿರಿಯಡಕ ಗೋಪಾಲ ರಾವ್   

ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದಕ್ಕೆ ಸಂತಸವಾಗಿದೆಯೇ?

ಹೌದು, ಸಂತೋಷವಾಗಿದೆ. ಯಕ್ಷಗಾನ ರಂಗವನ್ನು ಗೌರವಿಸಿ ಸರ್ಕಾರ ಪ್ರಶಸ್ತಿ ಕೊಟ್ಟಿರುವುದಕ್ಕೆ ಖುಷಿಯಾಗಿದೆ. ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ತುಂಬಾ ಸಂತಸದ ವಿಷಯ.

ನೂರನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಿಮಗೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಬಂದಿದ್ದು ತಡವಾಯಿತು ಅನಿಸಿದೆಯೇ?

ADVERTISEMENT

ಇಲ್ಲಿಯವರೆಗೆ ನನಗೆ ಪ್ರಶಸ್ತಿ ಸಿಗದೇ ಹೋದುದಕ್ಕೆ ಖಂಡಿತ ಬೇಜಾರಿಲ್ಲ. ಯಕ್ಷಗಾನ ಕ್ಷೇತ್ರದಲ್ಲಿ ಇಷ್ಟು ಸಾಧನೆ ಮಾಡಿದವರನ್ನು ಇಷ್ಟೊಂದು ತಡವಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಪ್ರಶಸ್ತಿ ಕೊಡುವವರು ಬೇಸರಪಟ್ಟುಕೊಳ್ಳಬೇಕು.

ಯಕ್ಷಗಾನವೇ ನನ್ನ ಉಸಿರು. ಇದುವರೆಗೂ ನನಗೆ ದೊರೆತ ಪ್ರಶಸ್ತಿಗಳು ಯಕ್ಷಗಾನ ರಂಗದ ಸಾಧನೆಯನ್ನು ಗುರುತಿಸಿ ನೀಡಲಾಗಿದೆಯೇ ವಿನಾ, ನಾನಾಗಿಯೇ ಅವುಗಳ ಬೆನ್ನು ಬಿದ್ದಿಲ್ಲ.

ಹಿಂದಿನ ಯಕ್ಷಗಾನಕ್ಕೂ ಈಗಿನ ಯಕ್ಷಗಾನಕ್ಕೂ ಇರುವ ವ್ಯತ್ಯಾಸ?

ಯಕ್ಷಗಾನ ಎನ್ನುವುದು ಬಯಲಾಟ. ಇದು ಗ್ರಾಮೀಣ ಜನರ ಕಲೆ. ಇದು ಟೆಂಟ್ ಆಟ ಅಲ್ಲ, ಥಿಯೇಟರ್ ಆಟ ಅಲ್ಲ, ನಾಟಕೀಯವೂ ಅಲ್ಲ. ಯಕ್ಷಗಾನ ಎಂಬುದು ಭಕ್ತಿಗೆ, ನಂಬಿಕೆಗೆ ಸಂಬಂಧಪಟ್ಟದ್ದು. ಹಿಂದೆಲ್ಲ ಜನರು ದೇವಸ್ಥಾನದ ಹರಕೆಗಳನ್ನು ಯಕ್ಷಗಾನ ಬಯಲಾಟ ಆಡಿಸುವುದರ ಮೂಲಕ ತೀರಿಸುತ್ತಿದ್ದರು. ಆದರೆ, ಇಂದು ಯಕ್ಷಗಾನ ಎಂಬುದುವ್ಯಾಪಾರ ಎಂಬಂತೆ ಆಗಿಹೋಗಿದೆ. ಯಕ್ಷಗಾನದ ಮೂಲ ತತ್ವಗಳು ಮಾಯವಾಗುತ್ತಿವೆ.

ಯಕ್ಷಗಾನ ಕಲೆ ಹಿಂದಿನಂತೆ ತನ್ನ ಮೂಲ ತತ್ವವನ್ನು ಪಡೆಯಲು ಯಾವ ರೀತಿಯ ಬದಲಾವಣೆ ಅವಶ್ಯ?

ಮೊದಲು ಹಣದ ಮೋಹ ಬಿಡಬೇಕು. ಕಲೆಯನ್ನು ವ್ಯಾಪಾರಿ ದೃಷ್ಟಿಯಲ್ಲಿ ನೋಡಬಾರದು. ಕಲಾವಿದರು ಕಲೆಯನ್ನು ಗೌರವಿಸಿ ಅದನ್ನು ಉಳಿಸುವ ಬದ್ಧತೆ ಹೊಂದಿರಬೇಕು. ಹೀಗಾದಲ್ಲಿ ಯಕ್ಷಗಾನದ ಮೂಲ ತತ್ವ ಉಳಿಯಲು ಸಾಧ್ಯ.

ಯಕ್ಷಗಾನ ಕಲೆ ಉಳಿಸಿ ಬೆಳೆಸುವಲ್ಲಿ ಸಂಬಂಧಪಟ್ಟ ಇಲಾಖೆಗಳ ಪಾತ್ರ ಏನು?

ಧರ್ಮ, ಜಾತಿಗಳನ್ನು ನೋಡದೇ ಸಾಧನೆಯನ್ನು ಗುರುತಿಸುವ ಕೆಲಸ ಇಲಾಖೆಗಳಿಂದ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.