ADVERTISEMENT

ಸಂದರ್ಶನ: ಅಲ್ಪ ಸಂತಸ, ಅಲ್ಪ ನಿರಾಸೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 19:33 IST
Last Updated 8 ಮಾರ್ಚ್ 2019, 19:33 IST
ಪುಷ್ಪಲತಾ ಜಗನ್ನಾಥ್
ಪುಷ್ಪಲತಾ ಜಗನ್ನಾಥ್   

ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ವರ್ಷದ ‘ಅತ್ಯಂತ ಸ್ವಚ್ಛ ನಗರ’ ವಿಭಾಗದಲ್ಲಿ ಮೈಸೂರಿಗೆ ಮೂರನೇ ಸ್ಥಾನ ಲಭಿಸಿದೆ.ಮೊದಲ ಸ್ಥಾನ ಕೈತಪ್ಪಿದ್ದೇಕೆ?

‘ಸ್ವಚ್ಛ ಸರ್ವೇಕ್ಷಣ್‌–2019’ಕ್ಕೆ ಬೇಕಿದ್ದ ಎಲ್ಲ ಮಾನದಂಡಗಳನ್ನು ಪೂರೈಸಿದ್ದೆವು. ಆದರೆ ಸಾರ್ವಜನಿಕ ಶೌಚಾಲಯಗಳಲ್ಲಿ ‘ಸ್ಯಾನಿಟರಿ ಪ್ಯಾಡ್ ವೆಂಡಿಂಗ್‌ ಮಷೀನ್‌’ ಅಳವಡಿಸದೇ ಇದ್ದುದು ಮತ್ತು ತ್ಯಾಜ್ಯ ವಿಲೇವಾರಿ ಘಟಕದಲ್ಲಿರುವ ಕಸದ ರಾಶಿ ತೆರವುಗೊಳಿಸದ ಕಾರಣ ಒಂದಷ್ಟು ಅಂಕಗಳನ್ನು ಕಳೆದುಕೊಂಡೆವು. ಕಳೆದ ವರ್ಷ ಎಂಟನೇ ಸ್ಥಾನದಲ್ಲಿದ್ದೆವು. ಈ ಸಲ ಅಗ್ರಪಟ್ಟಕ್ಕೇರಲು ಪ್ರಯತ್ನ ನಡೆದಿತ್ತು. ಅದು ಸಾಧ್ಯವಾಗದ್ದಕ್ಕೆ ನಿರಾಸೆಯಿದೆ. ಎಂಟನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದದ್ದಕ್ಕೆ ಸಂತಸವೂ ಇದೆ.

ಸ್ವಚ್ಛತಾ ಸಮೀಕ್ಷೆ ಅವಧಿ (ಜ.4ರಿಂದ 31) ಕೊನೆಗೊಂಡ ಬಳಿಕ ಕಸ ಹೆಚ್ಚಿದೆ...

ADVERTISEMENT

ಪ್ರತಿವರ್ಷವೂ ಇಂತಹ ಟೀಕೆ ಸಾಮಾನ್ಯ. ಸಮೀಕ್ಷೆಯ ಅವಧಿಯಲ್ಲಿ ಪೌರಕಾರ್ಮಿಕರ ಜತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಸದಸ್ಯರು ಸಮರೋಪಾದಿಯಲ್ಲಿ ಸ್ವಚ್ಛತಾ ಕೆಲಸ ಕೈಗೊಳ್ಳುವರು. ಪಾಲಿಕೆ ಜಾಗೃತಿ ಮೂಡಿಸುವುದರಿಂದ ಎಲ್ಲರೂ ಎಚ್ಚರಿಕೆ ವಹಿಸುವರು. ಆದರೆ ಸಮೀಕ್ಷಾ ತಂಡ ಭೇಟಿ ನೀಡಿ ಮರಳಿದ ಬಳಿಕ ಯಾರೂ ಸ್ವಚ್ಛತೆಗೆ ಗಮನ ನೀಡುವುದಿಲ್ಲ. ಬರೀ ಪಾಲಿಕೆಯೊಂದರಿಂದ ಇಡೀ ನಗರ ಸ್ವಚ್ಛವಾಗಿಡುವುದು ಕಷ್ಟದ ಕೆಲಸ. ಜನರ ಸಹಕಾರ ಮುಖ್ಯ. ಪಾಲಿಕೆ ಇರುವುದು ಕಸ ತೆಗೆಯಲು ಎಂಬ ಮನೋಭಾವವನ್ನು ಬಿಡಬೇಕು.

ಮುಂದಿನ ಬಾರಿ ನಂ.1 ಪಟ್ಟ ನಿರೀಕ್ಷಿಸಬಹುದೇ?

ಖಂಡಿತವಾಗಿಯೂ. ಈಗಿನಿಂದಲೇ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತೇವೆ. ಸ್ವಚ್ಛತೆಯ ಮಾನದಂಡಗಳು ಪ್ರತಿವರ್ಷ ಬದಲಾಗುತ್ತಿರುತ್ತವೆ. ಅವನ್ನು ಪೂರೈಸಲು ಗಮನ ನೀಡುವೆವು. ಸತತ ಮೂರು ವರ್ಷ ‘ಸ್ವಚ್ಛ ನಗರಿ’ ಪಟ್ಟ ಅಲಂಕರಿಸಿರುವ ಇಂದೋರ್‌ಗೆ ಭೇಟಿ ನೀಡಿ, ಅಲ್ಲಿ ಕೈಗೊಂಡಿರುವ ಕ್ರಮಗಳನ್ನು ತಿಳಿದುಕೊಳ್ಳುತ್ತೇವೆ. ಮದುವೆ ಸಮಾರಂಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಕಡಿವಾಣ ಹಾಕಲು ‘ಪರಿಸರಸ್ನೇಹಿ’ ಮದುವೆ (ಗ್ರೀನ್‌ ವೆಡ್ಡಿಂಗ್), ‘ಹಸಿರು ಅಂಗಡಿ’ಗಳ ಸ್ಥಾಪನೆ ಮುಂತಾದ ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.

ಸಂದರ್ಶನ: ಮಹಮ್ಮದ್‌ ನೂಮಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.