ADVERTISEMENT

ನುಡಿ ಬೆಳಗು | ವಿವೇಕವೆಂದರೆ 

ಪಿ. ಚಂದ್ರಿಕಾ
Published 17 ಜುಲೈ 2025, 0:30 IST
Last Updated 17 ಜುಲೈ 2025, 0:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಗುರುವನ್ನು ಶಿಷ್ಯ ಕೇಳಿದ, ‘ನಿನ್ನೆ ನೀವು ವಿವೇಕದ ಬಗ್ಗೆ ದಿನವಿಡೀ ಉಪನ್ಯಾಸವನ್ನು ಕೊಟ್ಟಿರಿ. ಆದರೆ ಅದು ಹೇಗೆ ದಕ್ಕುತ್ತದೆ ಎನ್ನುವುದನ್ನು ಹೇಳಲೇ ಇಲ್ಲ’ ಎಂದನು. ಗುರು ಅವನ ಕಡೆಗೆ ನೋಡಿ, ‘ನಿನ್ನೆ ನನ್ನ ಮಾತುಗಳನ್ನು ಪೂರ್ಣ ಕೇಳಿಸಿಕೊಂಡೆಯಾ’ ಎಂದ. ಶಿಷ್ಯನು ಗುರು ಹೇಳಿದ ಕಥೆಯ ಸಮೇತ ವಿಷಯಗಳನ್ನು ಹೇಳತೊಡಗಿದ. ಗುರು, ‘ಇಷ್ಟೆಲ್ಲಾ ನೆನಪಿಟ್ಟುಕೊಳ್ಳುವ ನಿನಗೆ ಅದನ್ನು ಅರ್ಥ ಮಾಡಿಕೊಳ್ಳಲು ಆಗಲಿಲ್ಲವೇ? ಹಾಗಾದರೆ ಇಷ್ಟು ದಿನ ನಿನಗೆ ನಾನೇನು ಹೇಳಿದೆ ಎಂದು ಗೊತ್ತೇ ಆಗಲಿಲ್ಲವೇ’ ಎಂದ ವಿಷಾದದಿಂದ.

‘ಗಮನ ಇಟ್ಟು ಕೇಳಿದೆ, ಯೋಚಿಸಿದೆ ಆದರೆ ವಿವೇಕವನ್ನು ಪಡೆದುಕೊಳ್ಳುವುದು ಹೇಗೆಂದು ಗೊತ್ತೇ ಆಗಲಿಲ್ಲ’ ಎಂದು ಉತ್ತರಿಸಿದ. ಶಿಷ್ಯನ ಸಮಸ್ಯೆ ಏನೆಂದು  ಗುರುವಿಗೆ ಅರ್ಥವಾಯಿತು. ಮೊದಲಿಗೆ ತಾನು ಹೇಳಲಿ ಎಂದು ಬಯಸಿದ, ಈಗ ಗೊತ್ತಾಗಲಿಲ್ಲ ಎನ್ನುತ್ತಿದ್ದಾನೆ ಇವನಿಗೆ ಅರ್ಥ ಮಾಡಿಸಲಿಕ್ಕೆ ಬೇರೆಯದ್ದೇ ದಾರಿ ಬೇಕು ಎಂದು ನಿರ್ಧರಿಸಿದ. 

ADVERTISEMENT

ಗುರು, ರಸ್ತೆ ಬದಿಯಲ್ಲಿ ಬೆಳೆದಿದ್ದ ಆಲದ ಮರದ ಬಳಿಗೆ ಶಿಷ್ಯನನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ. ಅದು ಎಕರೆಗಟ್ಟಲೆ ಜಾಗದಲ್ಲಿ ಬೆಳೆದು ಬಿಳಲುಗಳನ್ನು ಬಿಟ್ಟು, ಬಿಟ್ಟ ಬಿಳಲುಗಳನ್ನೇ ಆಧಾರ ಮಾಡಿಕೊಂಡು ಬೆಳೆದು, ಬೇರು ಬಿಟ್ಟು ಮತ್ತೆ ಕೊಂಬೆಗಳಲ್ಲಿ ಕಣ್ಣಾಗಿ ಚಿಗುರುತ್ತಿತ್ತು. ಆದರೆ, ರಸ್ತೆಯ ಕಡೆ ಬಿಳಲುಗಳನ್ನು ಮೊಟಕು ಗೊಳಿಸಿ ಕೊಂಬೆಗಳನ್ನು ಚಾಚದೆ ಉಳಿದಿತ್ತು. ‘ಈ ಮರವನ್ನು ನೋಡಿದರೆ ಏನನ್ನಿಸುತ್ತದೆ’ ಎಂದು ಕೇಳಿದ ಗುರು. ಅದಕ್ಕೆ ಶಿಷ್ಯ ಮರವನ್ನು ಗಮನಿಸುತ್ತಾ ‘ಅರೆ ಇದೇಕೆ ಹಿಂದೆಲ್ಲಾ ಬೆಳೆದು ಮುಂದೆ ಮಾತ್ರ ಬಿಳಲನ್ನು ಬಿಡದೆ ಹೋಗಿದೆ? ರಸ್ತೆಯನ್ನು ದಾಟಿ ಮುಂದೆಯೂ ಬೇಕಾದಷ್ಟು ಜಾಗವಿದೆಯಲ್ಲವೇ’ ಎಂದ. ಗುರು ನಕ್ಕ, ‘ಅದು ಅದರ ವಿವೇಕ’. ಈಗ ಶಿಷ್ಯನಿಗೆ ನಿಜಕ್ಕೂ ಕೋಪ ಬಂತು, ‘ಗುರುವೇ ನನ್ನನ್ನು ಅಣಕಿಸುತ್ತಿರುವೆಯಾ? ಮರಕ್ಕೆಂಥಾ ವಿವೇಕ’ ಎಂದು ಪ್ರಶ್ನಿಸಿದ. ಗುರು ಶಿಷ್ಯನ ಕಡೆಗೆ ನೋಡಿ ನಗುತ್ತಾ, ‘ಮರಕ್ಕೆ ವಿವೇಕವಿಲ್ಲ ಅಂತಾ ನೀನು ಹೇಗೆ ತೀರ್ಮಾನಿಸುವೆ? ಅದು ತನಗೆ ಬೇಕಾದ ಸುರಕ್ಷಿತವಾದ ಜಾಗವನ್ನು ಹೇಗೆ ಹುಡುಕಿಕೊಂಡಿದೆ ನೋಡು.

ಜಾಗವಿದ್ದರೂ ರಸ್ತೆಯ ಬದಿಯನ್ನು ದಾಟಿ ತನ್ನ ಬಿಳಲನ್ನು ಬಿಟ್ಟರೆ ಓಡಾಡುವ ಜನ ಸುಮ್ಮನಿರುತ್ತಾರೆಯೇ? ಚಿವುಟುತ್ತಾರೆ, ಆಕಸ್ಮಾತ್ ಕಣ್ತಪ್ಪಿ ಸ್ವಲ್ಪ ಬೆಳೆದರೂ ಅದನ್ನು ಕೊಡಲಿಯಿಂದ ಕಡಿಯುತ್ತಾರೆ. ಇಷ್ಟಾಗಿಯೂ ಓಡಾಡುವ ಜನಕ್ಕೆ ತೊಂದರೆಯೂ ಆಗಬಾರದಲ್ಲವೇ?  ಹೀಗೆ ಯಾರಿಗೂ ಕೇಡನ್ನು ಮಾಡದೆ, ಜನ ಓಡಾಡದ ಜಾಗದಲ್ಲಿ ಬಿಳಲು ಬಿಟ್ಟು ದೊಡ್ಡದಾಗುತ್ತಾ ತಾನು ಬೆಳೆಯಬಹುದಾದ ವಿಸ್ತೀರ್ಣವನ್ನು ತಾನೇ ಗುರುತಿಸಿಕೊಳ್ಳುತ್ತಿದೆ. ತಾನು ಬೆಳೆದು ಪಶು ಪಕ್ಷಿಗಳಿಗೂ ಆಶ್ರಯ ಕೊಡುತ್ತದೆ. ನಮಗೆ ಮಾತ್ರ ಎಲ್ಲವೂ ಗೊತ್ತಾಗುತ್ತದೆಯೆಂದು ನಾವೆಂದುಕೊಳ್ಳುತ್ತೇವೆ’ ಎಂದು ಹೇಳಿದ.

‘ವಿವೇಕ ಎನ್ನುವುದು ಯಾರೋ ಹೇಳಿದರೆ ದಕ್ಕುವುದಲ್ಲ. ಅದು ನಾವು ಗಳಿಸಿಕೊಳ್ಳಬೇಕಾದ ಸಂಗತಿ. ಒಂದು ಮರಕ್ಕೆ ತಾನು ಹೇಗೆ ಇರಬೇಕೆಂದು ಯಾರೂ ತಿಳಿಸಿಕೊಡುವುದಿಲ್ಲ. ತಾನು ನಿಂತ ನೆಲದ ಒಳಿತನ್ನು ಕೆಡಿಸದ ಹಾಗೆ ಬೆಳೆಯುವುದು ಹೇಗೆ ಎಂದು ಅದಕ್ಕೆ ಗೊತ್ತಾಗುತ್ತದೆ ಎಂದ ಮೇಲೆ ಮನುಷ್ಯನಿಗೆ ಯಾಕೆ ಅರ್ಥವಾಗುವುದಿಲ್ಲ? ಮೊದಲು ನಿನ್ನ ಸುತ್ತ ಏನು ನಡೆಯುತ್ತಿದೆ ಎಂದು ಕಣ್ಣು ಮನಸ್ಸನ್ನು ಬಿಟ್ಟು ನೋಡು. ಯಾರಿಗೂ ಕೆಡುಕಾಗದ ಹಾಗೆ ಹೇಗೆ ನಡೆದುಕೊಳ್ಳಬೇಕು, ಪ್ರತಿಕ್ರಿಯಿಸಬೇಕು ಎಂದು ತೀರ್ಮಾನಿಸು. ಅದೇ ವಿವೇಕ’ ಎಂದ ಗುರು.

ನಿಜ. ಪ್ರಕೃತಿ ಒಂದು ಮರಕ್ಕೆ ಇಷ್ಟೆಲ್ಲಾ ವಿವೇಕ ವಿವೇಚನೆ ಕೊಟ್ಟಿರುವಾಗ, ಮನುಷ್ಯರಾದ ನಮಗೂ ಅಷ್ಟೇ ಕೊಟ್ಟಿರುತ್ತದೆ ಅಲ್ಲವೆ? ಜಗತ್ತನ್ನು ಕೇಡಿಲ್ಲದ ಸ್ಥಿತಿಯಲ್ಲಿ ಅರ್ಥ ಮಾಡಿಕೊಂಡರೆ ಅದೇ ವಿವೇಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.