ADVERTISEMENT

ನುಡಿ ಬೆಳಗು | ಕಾಲ ಕೆಟ್ಟಿಲ್ಲ, ಮನಸ್ಸು ಕೆಟ್ಟಿದೆ!

ನುಡಿ ಬೆಳಗು–180

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 23 ಏಪ್ರಿಲ್ 2025, 22:30 IST
Last Updated 23 ಏಪ್ರಿಲ್ 2025, 22:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಈ ಜಗತ್ತು ಸಂಪದ್ಭರಿತ. ನಾವು ಕಟ್ಟೆ ಮೇಲೆ ಕುಳಿತು ‘ಎಲ್ಲಾ ಕೆಟ್ಟೋಗಿದೆ’ ಎಂದು ಮಾತನಾಡುತ್ತೀವಿ. ಏನು ಕೆಟ್ಟಿದೆ; ಗಾಳಿ ಕೆಟ್ಟಿದೆಯಾ, ನೀರು ಕೆಟ್ಟಿದೆಯಾ, ಬೆಳಕು ಕೆಟ್ಟಿದೆಯಾ? ಇಲ್ಲ, ಯಾವುದೂ ಕೆಟ್ಟಿಲ್ಲ. ಎಲ್ಲವೂ ಸರಿಯಾಗಿಯೇ ಇದೆ. ಎಲ್ಲವೂ ಸರಿಯಾಗಿರಬೇಕು ಎಂದು ಹೇಳುವ ಮನುಷ್ಯನ ಮನಸ್ಸು ಮಾತ್ರ ಕೆಟ್ಟಿದೆ. ಉಳಿದವೆಲ್ಲಾ ಸರಿಯಾಗಿವೆ. ಮನುಷ್ಯ ಸ್ವಲ್ಪ ಈ ಪರಿಸರದ ಬಗ್ಗೆ, ಭೂಮಿಯ ಬಗ್ಗೆ ಆಲೋಚಿಸಬೇಕು. ಯಾವುದು ಸಂಪತ್ತು, ಯಾವುದು ನಮ್ಮನ್ನು ಬದುಕಿಸುತ್ತದೆ ಎನ್ನುವ ಪರಿಕಲ್ಪನೆ ಮನುಷ್ಯನಿಗೆ ಬೇಕು. ಒಬ್ಬ ಸಾಮಾನ್ಯ ಈ ಜಗತ್ತನ್ನು ನೋಡುವುದಕ್ಕೂ ಒಬ್ಬ ದಾರ್ಶನಿಕ ಜಗತ್ತನ್ನು ನೋಡುವುದಕ್ಕೂ ಬಹಳ ವ್ಯತ್ಯಾಸ ಇದೆ. ಬಂಗಾರ, ಬೆಳ್ಳಿ, ವಜ್ರ ವೈಢೂರ್ಯ ನಮಗೆ ಸಂಪತ್ತು. ಆದರೆ ದಾರ್ಶನಿಕ ಅನ್ನುತ್ತಾನೆ ‘ಮನುಷ್ಯನೇ ಇವೆಲ್ಲ ನಿಜವಾದ ಸಂಪತ್ತುಗಳಲ್ಲ. ಇವೆಲ್ಲ ಕಲ್ಲಿನ ತುಣುಕುಗಳು ಅಷ್ಟೆ’. ನೀನು ತಿಳಿದ ಸಂಪತ್ತು ಒಂದೇ ರೊಟ್ಟಿ ತಿಂದು ಒಂದೇ ತಾಯಿಯ ಹಾಲು ಕುಡಿದ ಮಕ್ಕಳನ್ನೇ ದೂರ ಮಾಡಿದೆ, ನಿಮಗೆ, ಮನೆ ಮಗ್ಗಲದವರಿಗೆ, ಸಂಬಂಧಿಕರಿಗೆ ಹೊಡೆದಾಟ ಹಚ್ಚಿದೆ; ಕೋರ್ಟ್ ಕಚೇರಿಗೆ ಕರೆದುಕೊಂಡು ಹೋಗಿದೆ, ಸಾಮ್ರಾಜ್ಯಗಳು ಉರುಳಿವೆ, ಎಷ್ಟೋ ಮಂದಿಯ ಪ್ರಾಣ ತೆಗೆದಿದೆ. ಪ್ರಾಣ ತೆಗೆಯುವ ಬಂಗಾರ ಬೆಳ್ಳಿ ಅದು ಸಂಪತ್ತಲ್ಲ; ಮನುಷ್ಯನನ್ನು ಬದುಕಿಸುವ ಅನ್ನ, ನೀರು, ಒಳ್ಳೆಯ ಮಾತುಗಳು ನಿಜವಾದ ಸಂಪತ್ತು.

ಒಬ್ಬ ಮಹಾರಾಜ ಮರಳುಗಾಡಿನಲ್ಲಿ ಹೋಗುತ್ತಿದ್ದ. ಅವನ ಸಹಚರರು ದೂರವಾದರು. ಅವನಿಗೆ ಬಾಯಾರಿಕೆಯಾಯಿತು. ಇನ್ನೇನು ಒಂದು ಕ್ಷಣ ನೀರು ಸಿಗದೇ ಇದ್ದರೆ ಸತ್ತು ಹೋಗುತ್ತಿದ್ದ. ಅಷ್ಟು ಬಾಯಾರಿಕೆಯಾಗಿತ್ತು. ಅಲ್ಲೊಬ್ಬ ಮನುಷ್ಯ ಕುಳಿತಿದ್ದ. ಅವನ ಹತ್ತಿರ ಹೋಗಿ ‘ನನಗೆ ಬಾಯಾರಿಕೆಯಾಗಿ ಪ್ರಾಣ ಹೋಗುತ್ತಿದೆ. ಒಂದು ಲೋಟ ನೀರು ಕೊಡು’ ಎಂದ. ಆಗ ಆತ ‘ನಾನು ನೀರು ಕೊಟ್ಟರೆ ನೀನು ನನಗೆ ಏನು ಕೊಡ್ತಿ’ ಎಂದು ಕೇಳಿದ. ‘ನಾನು ಮಹಾರಾಜ ಇದ್ದೇನೆ. ನನ್ನ ಅರ್ಧ ಸಂಪತ್ತು ನಿನಗೆ ಕೊಡುತ್ತೇನೆ’ ಎಂದ. ‘ಅರ್ಧ ಸಾಮ್ರಾಜ್ಯಕ್ಕೆ ನಾನು ನೀರು ಕೊಡಲ್ಲ’ ಎಂದ ಅವನು. ಅದಕ್ಕೆ ಮಹಾರಾಜ ‘ನೀರಿಲ್ಲದಿದ್ದರೆ ನಾನು ಸತ್ತೇ ಹೋಗುತ್ತೀನಿ. ಅದಕ್ಕಾಗಿ ಆ ಒಂದು ಲೋಟ ನೀರಿಗಾಗಿ ನಾನು ಈವರೆಗೆ ಕಷ್ಟಪಟ್ಟು ಗಳಿಸಿದ ಎಲ್ಲ ಸಾಮ್ರಾಜ್ಯವನ್ನೂ ಎಲ್ಲ ಸಂಪತ್ತನ್ನೂ ನಿನಗೆ ಕೊಡುತ್ತೇನೆ’ ಎಂದ ಮಹಾರಾಜ. ಅದಕ್ಕೆ ಆತ ‘ಒಂದು ವಿಷಯ ತಿಳಿದುಕೊ, ನೀನು ಇಷ್ಟು ವರ್ಷ ಅವರಿವರನ್ನು ಹೊಡೆದು ಬಡಿದು ಗಳಿಸಿದ ಸಂಪತ್ತು ಬರೇ ಒಂದು ಲೋಟ ನೀರಿಗೆ ಸಮ. ಅಂದರೆ ನೀನು ಗಳಿಸಿದ ಸಂಪತ್ತು ಸಂಪತ್ತಲ್ಲ. ನೀರೇ ಸಂಪತ್ತು’ ಎಂದ.

ADVERTISEMENT

ಯಾರಾದರೂ ಸಾಯುತ್ತಾ ಇರುವಾಗ ಒಂದು ತೊಲ ಬಂಗಾರ ಕೊಡ್ರಿ ಅಂತಾರೇನು? ಒಂದು ಗುಟುಕು ನೀರು ಕೊಡಿ ಎನ್ನುತ್ತಾರೆ. ಇಲ್ಲಾ ಕಿವಿಯಲ್ಲಿ ಶಿವನಾಮ ಹೇಳಿ ಅಂತಾರೆ. ಅಂದರೆ ಮಾತು ಸಂಪತ್ತು. ಈ ಭೂಮಿ ಇದು ಸ್ವರ್ಗ ಆಗಬೇಕು. ಶರಣರು ಹೇಳಿದರು, ಋಷಿಗಳು ಹೇಳಿದರು; ಈ ಭೂಮಿ ಹೇಗೆ ಸ್ವರ್ಗ ಆಗಬೇಕು ಅಂತ ಅವರೆಲ್ಲಾ ಹೇಳಿದರು. ನಾವು ಅದನ್ನು ಪಾಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.