ನುಡಿ ಬೆಳಗು
ಆ ನಿರ್ದೇಶಕ ಯಾವಾಗಲೂ ಹೊಸ ಪ್ರಯೋಗಗಳನ್ನು ಮಾಡುವುದರಲ್ಲೇ ನಿರತ. ಈ ಬಾರಿ ಅವರು ಆಯ್ದು
ಕೊಂಡದ್ದು ಕತ್ತಲು. ಕೇವಲ ಕತ್ತಲಿನ ಮೂಲಕವೇ ಒಂದು ಸಂದೇಶವನ್ನು ನೀಡಲು ಪ್ರಯತ್ನ
ಮಾಡಿದರು. ರಂಗದ ಮೇಲೆ ಕೇವಲ ಗಾಢವಾದ ಕತ್ತಲನ್ನು ತಂದು ಕಪ್ಪು ಬಟ್ಟೆಯನ್ನು ಉಟ್ಟ ಪಾತ್ರಧಾರಿಗಳ ಓಡಾಟ ಮತ್ತು ಮಾತು.
ಯಾವತ್ತಿನಂತೆ ಹೆಸರಾಂತ ನಿರ್ದೇಶನದ ನಾಟಕ ಪ್ರಯೋಗಗಳಿಗೆ ಧಾವಿಸಿ ತುಂಬುವ ಪ್ರೇಕ್ಷಕ ಗಣ. ನಾಟಕ ಆರಂಭವಾಯಿತು. ಜೀ ಎನ್ನುವ ಮಳೆಗಾಲದ ವಾತಾವರಣದ ನಿರ್ಮಾಣ ವೇದಿಕೆಯ ಮೇಲೆ. ಕಪ್ಪು ಕೊಡೆ ಮತ್ತು ಕಪ್ಪು ಬಟ್ಟೆಯನ್ನು ಉಟ್ಟ ಪಾತ್ರಧಾರಿಗಳ ಓಡಾಟ ಗೊಣಗಾಟ ಮಾತುಗಾರಿಕೆ ಹಿನ್ನೆಲೆಯಲ್ಲಿ ಕಚ ಪಿಚ ಕೆಸರಿನಲ್ಲಿ ಹೆಜ್ಜೆ ಊರುವ ಹೆಜ್ಜೆಗಳ ಸದ್ದು. ಯಾರ ಆಕೃತಿಯೂ ಸರಿಯಾಗಿ ಕಾಣದ ಅಸ್ಪಷ್ಟತೆ. ಹಣ, ಸಾಲ, ಕಷ್ಟ ಕಾರ್ಪಣ್ಯಗಳ ಮಾತು. ಮುಸು ಮುಸು ಅಳು ಮತ್ತದೇ ಮಂದ್ರವಾದ ರಾಗ ಪಿಸುಗುಡುವಿಕೆ. ಇಡೀ ಪ್ರೇಕ್ಷಕ ಗಣದ್ದು ಒಂದೇ ನಿರೀಕ್ಷೆ; ಬೆಳಕು ಯಾವಾಗ ಕಾಣಿಸುತ್ತದೆ? ಅಷ್ಟೊತ್ತಿಗೆ ನಾಟಕ ಮುಗಿದು ಜಗ್ಗನೆ ಎಲ್ಲ ಪಾತ್ರಗಳೂ ತಮ್ಮ ತಮ್ಮ ಪರಿಚಯ ಮಾಡಿಕೊಡುವ ಸಮಯ ಬಂದಿತ್ತು.
ಕಪ್ಪು ಕತ್ತಲೆ ಮಸುಕುಗಳ ಮೂಲಕ ಈ ನಿರ್ದೇಶಕ ಸಾಧಿಸಿದ್ದಾದರೂ ಏನೆಂಬ ಗುಸು ಗುಸು ಮಾತುಗಳು ಶುರುವಾದವು. ಇದು ನಿರ್ದೇಶಕನ ಮೊದಲ ವಿಫಲ ರಂಗ ಪ್ರಯೋಗ ಎಂಬ ನಿರ್ಧಾರಕ್ಕೆ ಅನೇಕರು ಬಂದರು. ಎಷ್ಟು ಹೊತ್ತು ಅಂತ ಈ ಕತ್ತಲೆಯದ್ದೇ ಕಾರುಬಾರು? ಬೆಳಕು ಯಾವಾಗ ಬರುತ್ತದೋ ಗೊತ್ತಿಲ್ಲ. ಇಡೀ ವೇದಿಕೆಯಲ್ಲಿ ಒಂದು ಹಾಡಿಲ್ಲ. ನಗೆಚಾಟಿಕೆ ಇಲ್ಲ. ಸರಸ ಇಲ್ಲ. ಕತ್ತಲು ಕತ್ತಲು ಕತ್ತಲು ಅಷ್ಟೇ. ಯಾರೋ ಒಬ್ಬರು ಕೂಗಿಯೂ ಬಿಟ್ಟರು ‘ಏ ಸಾಕು ನಿಲ್ಸಯ್ಯ ಈ ರಂಪ’ ಅಂತ. ಗೊತ್ತಿತ್ತು ಇದು ಹೀಗೇ ಆಗುತ್ತದೆ ಅಂತ.
ಇದ್ದಕ್ಕಿದ್ದಂತೆ ಎಲ್ಲಿಂದಲೋ ಹತ್ತಾರು ದೀಪದ ಹುಳುಗಳು ಹಾರಾಡಲು ಶುರು ಮಾಡಿದವು. ಪಾತ್ರಗಳೆಲ್ಲ ಅವುಗಳನ್ನು ಓಡಿಸಲು ಆರಂಭಿಸಿದವು... ಉಶ್ ಉಶ್ ಸದ್ದು ಸಪ್ಪಳ. ಆದರೂ ಅವು ಬಿಡಲಿಲ್ಲ ಮುಖ ಮೈ ಬಟ್ಟೆಗಳ ಮೇಲೆಲ್ಲ ಹಾರಿ ಕೂತು ಪುರ್ ಅಂತ ಬೆಳಕ ಬಿಟ್ಟವು. ಇನ್ನು ನಿರ್ದೇಶಕನಿಗೆ ಅನ್ಯ ದಾರಿ ಇಲ್ಲ. ಝಗ್ಗನೆ ಹೊತ್ತಿಕೊಂಡ ಪ್ರಖರವಾದ ದೀಪಗಳು ಸಾಲಾಗಿ ನಿಂತುಕೊಂಡ ಕಪ್ಪು ಪಾತ್ರಗಳು.
ಕತ್ತಲೆಯ ಇಂತಹ ಹತ್ತಾರು ಮೂತಿಗಳನ್ನು ತಿವಿಯಲು ಇಂತಹ ಬೆಳಕಿನ ರೆಕ್ಕೆಗಳು ಆಗಮಿಸಲೇಬೇಕಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.