ADVERTISEMENT

ಮೋದಿ ಸರ್ಕಾರ್: ಆಕಾಂಕ್ಷೆಗಳು ಮತ್ತು ಆತಂಕಗಳು

ಸಮೀರ ಸಿ ದಾಮ್ಲೆ
Published 21 ಮೇ 2014, 19:30 IST
Last Updated 21 ಮೇ 2014, 19:30 IST

ಸಾರ್ವತ್ರಿಕ ಚುನಾವಣೆ ಮುಗಿದಿದೆ. ಬಿಜೆಪಿ ಪೂರ್ಣ ಬಹುಮತ ಪಡೆದು ಕೇಂದ್ರದ ಗದ್ದುಗೆ ಏರಲು ಸಜ್ಜಾಗಿದೆ. ಆದರೆ ಬಿಜೆಪಿಯ ನಾಯಕರೆನಿಸಿಕೊಂಡವರು ಮರೆಯ­ಬಾರದ ವಿಷಯ: - ಇದು ಬಿಜೆಪಿಯ ಸಾಮೂ­ಹಿಕ ಗೆಲುವಲ್ಲ! ಮೋದಿ ಮಾಡಿದ ಮೋಡಿಯ ಗೆಲುವು ಇದು.

ಅಲ್ಲದೆ ಕಳೆದ ಹತ್ತು ವರ್ಷ­ಗಳಲ್ಲಿ ದೇಶ ಕಂಡ ಭ್ರಷ್ಟಾಚಾರ, ಹಗರಣಗಳು ಹಾಗೂ ಬೆಲೆಯೇರಿಕೆಯ ಸೋಲು. ಸುದ್ದಿ­ವಾಹಿನಿಯ ಸಂದರ್ಶನವೊಂದರಲ್ಲಿ ರಾಜ್ ಠಾಕ್ರೆ ಹೇಳಿದಂತೆ ಬಿಜೆಪಿ ಸೇರಿ ಎಲ್ಲರೂ ಬಯ­ಸಿದ್ದು ಮೋದಿ ಸರ್ಕಾರವನ್ನು, ಕಮಲ­ದ್ದಲ್ಲ. ಈಗ ಮೋದಿಯವರ ಬೆಂಬಲಿಗರು ತಮ್ಮ ಕನ­ಸಿನ ಭಾರತದ ನಿರ್ಮಾಣ ಪ್ರಾರಂಭವಾ­ಯಿತು ಎಂಬ ವಿಜಯೋತ್ಸಾಹದಲ್ಲಿದ್ದರೆ ವಿರೋಧಿ­­ಗ­ಳಲ್ಲಿ ಹಲವು ಆತಂಕಗಳು ಮನೆ­ಮಾಡಿವೆ.

ಪತ್ರಿಕೆ­ಗ­ಳಲ್ಲಿ, ಸುದ್ದಿವಾಹಿನಿ­ಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಜನರ ಆಕಾಂಕ್ಷೆ­ಗಳ, ಆಸೆ­ಗಳ, ಕನಸುಗಳ ಹಾಗೆಯೇ ಆತಂಕ­ಗಳ, ಚಿಂತೆ­ಗಳ ಚರ್ಚೆಗಳು ಭರದಿಂದ ಸಾಗಿವೆ. ‘ಪ್ರಬಲ ನಾಯಕನ ಸುತ್ತ ಆಸೆಗಳು ಮತ್ತು ಭಯಗಳು’ ಎಂಬ ಲೇಖನದಲ್ಲಿ (೧೭ ಮೇ, ಪ್ರಜಾವಾಣಿ) ಪತ್ರಕರ್ತ ವಿನೋದ್ ಮೆಹ್ತಾ ಭಯ­ಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ­ದರು. ಅಚ್ಚರಿ­ಯೆಂದರೆ ಆಸೆ ಆಕಾಂಕ್ಷೆಗಳ ಬಗ್ಗೆ ಚರ್ಚಿಸಲೇ ಇಲ್ಲ!

  ಮೋದಿಯವರ ಗೆಲುವಿಗೆ ಪ್ರಮುಖ ಕಾರಣ ಅವರು ಜನತೆಯಲ್ಲಿ ಬಿತ್ತಿದ ಅಭಿವೃದ್ಧಿಯ ಕನಸುಗಳು; ಎಲ್ಲರನ್ನೊಳಗೊಂಡ ಆಡಳಿತ, ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ (‘ಇಂಕ್ಲೂಸಿವ್ ಗವರ್ನೆನ್ಸ್’, ‘ಮಿನಿಮಮ್ ಗವರ್ನ್ ಮೆಂಟ್ ಮಾಕ್ಸಿ­ಮಮ್ ಗವರ್ನೆನ್ಸ್’) ಮುಂತಾದ ಹೊಸ ಕಲ್ಪನೆಗಳು, ತನ್ಮೂಲಕವಾಗಿ ಜನರಲ್ಲಿ ಹುಟ್ಟಿಕೊಂಡ ಹೊಸ ಆಸೆಗಳು, ಆಕಾಂಕ್ಷೆಗಳು. ಹಾಗಾಗಿ ಈಗ ಜನತೆಯಲ್ಲಿರುವ ಕೆಲವು ಮುಖ್ಯ ನಿರೀಕ್ಷೆಗಳು - ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣ. ಇದಕ್ಕೆ ಮೋದಿ­-ಯವರು ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿದ ಐಡಿಯಾ­ಗಳನ್ನು ಜಾರಿಗೊಳಿಸುತ್ತಾರೆಂಬ ಆಕಾಂಕ್ಷೆ ದೊಡ್ಡದಾಗಿದೆ.

ಭ್ರಷ್ಟಾಚಾರ ನಿರ್ಮೂಲನೆ: ಯಾವುದೇ ಒಳ್ಳೆಯ ಕೆಲಸ ಮನೆಯಿಂದ ಪ್ರಾರಂಭವಾಗ­ಬೇಕೆಂಬ ಮಾತಿದೆ. ಹಾಗಾಗಿ ಮೋದಿಯವರು ಮೊದಲು ಮಾಡಬೇಕಾದದ್ದು: ೧. ಕಳಂಕಿತರಿಗೆ ಸಂಪುಟದಲ್ಲಿ ಸ್ಥಾನ ಕೊಡದಿರುವುದು, ೨. ಟಿವಿ ಸಂದರ್ಶನವೊಂದರಲ್ಲಿ ಹೇಳಿದಂತೆ ಮೊದಲಿಗೆ ಚುನಾಯಿತ ಸಂಸದರ ವಿರುದ್ಧವಿರುವ ಪ್ರಕರಣ­ಗಳ ತ್ವರಿತಗತಿಯ ವಿಚಾರಣೆಗೆ ಪ್ರತ್ಯೇಕ ನ್ಯಾಯ­ಪೀಠ ಸ್ಥಾಪನೆ. ಹೀಗೆ ಮಾಡಿದಾಗ ಶಿಕ್ಷೆಗೆ ಒಳ­ಗಾ­ದ­ವರು ಸಂಸತ್ತಿನಿಂದ ಹೊರಹೋಗಲೇ ಬೇಕಾ­ಗುತ್ತದೆ. ಇದು ಇಡೀ ದೇಶಕ್ಕೆ ಒಂದು ಬಹುದೊಡ್ಡ ಸಂದೇಶವಾಗುತ್ತದೆ. ಮುಖ್ಯವಾಗಿ ಈ ನಡೆಯಿಂದ ಭ್ರಷ್ಟ ಅಧಿಕಾರಶಾಹಿ ವರ್ಗಕ್ಕೆ ಮರ್ಮಾಘಾತವಾಗುತ್ತದೆ.

ಅವರು ಹೇಳಿದ ಇನ್ನೊಂದು ವಿಷಯ - ಅಧಿಕಾರಿ ವರ್ಗದವರನ್ನು ದುಡಿಸಿಕೊಳ್ಳುವುದು. ನಮ್ಮ ಕಾರ್ಪೊರೇಟ್ ಕಂಪೆನಿಗಳಲ್ಲಿ ಅನುಸರಿ­ಸುವ ಗುರಿ,ಸಾಮರ್ಥ್ಯ ಆಧಾರಿತ ಮೌಲ್ಯ­ಮಾಪನ (ಟಾರ್ಗೆಟ್ ಹಾಗೂ ಪರ್ಫಾ­ರ್ಮೆನ್ಸ್ ಓರಿಯೆಂಟೆಡ್ ಇವ್ಯಾಲ್ಯುವೇಶನ್) ಅಧಿಕಾರಿ ವರ್ಗಕ್ಕೂ ತರಬೇಕು. ನೇಮಕಾತಿ­ಯಲ್ಲಿ ಬೇಕಾದರೆ ಮೀಸಲಾತಿ ಇರಲಿ.

ಆದರೆ ಬಡ್ತಿಗೆ ಸಾಮರ್ಥ್ಯ ಮಾನದಂಡವಾಗಲಿ! ಎಮ್.­ಎನ್.ಸಿ ಗಳಲ್ಲಿ ಕೆಲಸ ಮಾಡುವ ಯುವ­ಕ­ರನ್ನು ನೋಡಿ  ‘ಈ ಪ್ರಾಯಕ್ಕೇ ಸಾವಿರಗಳಲ್ಲಿ ಲಕ್ಷಗಳಲ್ಲಿ ದುಡಿಯುತ್ತೀರಿ’ ಎಂದು ಬುಸುಗು­ಡುವ (ಮತ್ತು ಅದನ್ನೇ ಲಂಚ ಕೇಳಲು ನೆಪವಾ­ಗಿ­ಸುವ) ಅಧಿಕಾರಶಾಹಿಗಳು ಸಮಯಕ್ಕೆ ಸರಿ­ಯಾಗಿ ಕೆಲಸ ಪೂರೈಸುವ ಅಗತ್ಯವನ್ನು ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ.

ಇನ್ನೊಂದು ಪ್ರಮುಖ ಅಂಶ, ಅಸ್ಪಷ್ಟವಾಗಿ­ರುವ ನೀತಿ ನಿಯಮಗಳನ್ನು ಸ್ಪಷ್ಟ ಪಡಿಸುವುದು. ನಿಯಮಗಳು ಸ್ಪಷ್ಟವಾದಾಗ ಲಂಚಕ್ಕೆ ಅವಕಾಶ­ಗಳು ತಾನಾಗಿಯೇ ಕಡಿಮೆಯಾಗುತ್ತದೆ. ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮ ದೇಶದ ಒಂದಷ್ಟು ಜನ (ಮಧ್ಯಮವರ್ಗದವರೂ ಸೇರಿ) ಪ್ರವಾಸಕ್ಕೆ ಹೋಗಿ ನೋಡಿ ಮೆಚ್ಚಿದ ಥಾಯ್ಲೆಂಡನ್ನು ಉದಾಹರಣೆಯಾಗಿ ಕೊಡಬ­ಯ­­ಸುತ್ತೇನೆ.

ಥಾಯ್ಲೆಂಡಿನಲ್ಲಿ ಸರ್ಕಾರದಿಂದ ಬಿಡು­ಗಡೆಯಾದ ಹಣದಲ್ಲಿ ಸುಮಾರು  ಶೇ ೪೦ ಭ್ರಷ್ಟಾ­ಚಾ­ರ­ದಿಂದಾಗಿ ಜನತೆಗೆ ತಲುಪುತ್ತಿಲ್ಲ­ವೆಂದು ಅಂದಾಜಿಸಲಾಗಿದೆ. ಅಷ್ಟಾಗಿಯೂ ಅಲ್ಲಿನ ಮೂಲಭೂತ ಸೌಕರ್ಯ ನಮಗಿಂತ ಎಷ್ಟೋ ಮುಂದಿದೆ. ನಮ್ಮಲ್ಲಿ ಭ್ರಷ್ಟಾಚಾರ  ಶೇ ೫೦ ರಷ್ಟು ಕಡಿಮೆಯಾದರೂ ನಾವು ಎಲ್ಲಿ ತಲುಪಬಹುದೆಂದು ಊಹಿಸಿ! ಹಾಗಾಗಿ ಭ್ರಷ್ಟಾಚಾರ ನಿರ್ಮೂಲನೆಯ ಒಳ್ಳೆಯ ಕೆಲಸ ಮೇಲ್ಮನೆಯಿಂದಲೇ ಪ್ರಾರಂಭವಾಗಲಿ.

ಆರ್ಥಿಕ ಸಬಲೀಕರಣ: ಇದಕ್ಕೆ ಮೋದಿಯವರು ಕೊಟ್ಟ ಭರವಸೆಗಳು ಮೂಲ ಸೌಕರ್ಯ ವರ್ಧನೆ, ಕೈಗಾರಿಕೋದ್ಯಮಕ್ಕೆ ಉತ್ತೇಜನ. ಇದು ಆದಾಗ ಸಹಜವಾಗಿಯೇ ನಿರುದ್ಯೋಗ ಕಡಿಮೆ­ಯಾಗುತ್ತದೆ, ಪೋಷಕ ವ್ಯವಹಾರಗಳು, ಸಣ್ಣ ವ್ಯಾಪಾರಗಳು ಹೆಚ್ಚುತ್ತವೆ. ರಫ್ತು ಹೆಚ್ಚಾ­ಗುತ್ತದೆ, ರೂಪಾಯಿ ಬಲವಾಗುತ್ತದೆ, ಬ್ಯಾಂಕು­ಗಳಿಗೆ ಸಾಲ ಮರುಪಾವತಿಯಾಗಿ ಬ್ಯಾಂಕುಗಳ ಆದಾಯ ವೃದ್ಧಿಯಾಗುತ್ತದೆ.

ಹಣದುಬ್ಬರ ಸಹಜವಾಗಿಯೇ ಹತೋಟಿಗೆ ಬರುತ್ತದೆ. ಹಾಗಾಗಿ ಮೋದಿಯವರು ಈ ಆಶ್ವಾಸನೆಯನ್ನು ನಿಜಗೊಳಿಸಲೇಬೇಕು.
ಇನ್ನು ಕೆಲ ವಿಷಯಗಳ ಬಗ್ಗೆ ಮೋದಿಯವರು ಮಾತ­ನಾಡಿದ್ದು ಬಹಳ ಕಡಿಮೆ. ಆದರೆ ಸಮ­ಷ್ಟಿಯ ಅಭಿವೃದ್ಧಿಗೆ ಇವು ಅತ್ಯವಶ್ಯ. ಅವುಗಳಲ್ಲಿ ಮುಖ್ಯವಾದವು ಶಿಕ್ಷಣ ಮತ್ತು ಆರೋಗ್ಯ.

ಶಿಕ್ಷಣ: ಮೋದಿಯವರು 'ಸ್ಕಿಲ್ ಡೆವಲಪ್ ಮೆಂಟ್’ ಬಗ್ಗೆ ಮಾತನಾಡಿದ್ದಾರಾದರೂ ಯಾವ ರೀತಿ ಶಿಕ್ಷಣದ ಸಮಸ್ಯೆಯನ್ನು ನಿಭಾಯಿ­ಸುತ್ತಾರೆಂಬುದು ಸ್ಪಷ್ಟವಾಗಿಲ್ಲ. ಸ್ಕಿಲ್ ಡೆವಲಪ್ ಮೆಂಟ್ ಶಿಕ್ಷಣ ವ್ಯವಸ್ಥೆಯೊಳಗಿನ ಒಂದು ಸಮಸ್ಯೆಯಾದರೆ, ಶಿಕ್ಷಣ ವ್ಯವಸ್ಥೆಯಲ್ಲೇ ಅನೇಕ ಸಮಸ್ಯೆಗಳಿವೆ.

ಒಂದೆಡೆ ಯುನೆಸ್ಕೊ ಹೇಳುತ್ತೆ:- ಭಾರತದ ಪಠ್ಯಕ್ರಮ ಅತೀ ಮಹತ್ವಾಕಾಂಕ್ಷೆಯಿಂದ ಕೂಡಿದೆ (ಟೂ ಆಂಬೀಷಿಯಸ್) ಅಂತ. ಇನ್ನೊಂದೆಡೆ ಶಿಕ್ಷಕರ ಗುಣಮಟ್ಟದಲ್ಲಿ ಕೊರತೆಯಿದೆ. ಮಕ್ಕಳಿಗೆ ಪ್ರೋತ್ಸಾಹ ಕೊಡುವ ಹೆಸರಲ್ಲಿ ನಮ್ಮ ಮೌಲ್ಯ­ಮಾಪನ ತನ್ನ ಮೌಲ್ಯವನ್ನೇ ಕಳೆದುಕೊಂಡಿದೆ. ಇದಲ್ಲದೆ ಜೀವನಮೌಲ್ಯಗಳ ಶಿಕ್ಷಣ ಶಾಲಾ ಪಠ್ಯಕ್ರಮದಿಂದ ದೂರವೇ ಉಳಿದು  ದೆಹಲಿ ವಿದ್ಯಾರ್ಥಿನಿಯ ಮೇಲಾದ ಅತ್ಯಾಚಾರದಂತಹ ಪ್ರಕರಣಗಳು  ನಡೆಯುತ್ತಲೇ ಇವೆ.

ಇವೆಲ್ಲದರ ಹೊರತಾಗಿ ರಾಜ್ಯಭಾಷೆಯ ಅಥವಾ ಪರಿಸರದ ಭಾಷೆಯ ಶಿಕ್ಷಣಕ್ಕೆ ಸರ್ಕಾರದ ಬೆಂಬಲದ ಅಗತ್ಯವಿದೆ. ರಘುರಾಮ ರಾಜನ್ ವರದಿಯಂತೆ ಗುಜರಾತ್ ರಾಜ್ಯ ಶಿಕ್ಷಣದ ವಿಚಾರದಲ್ಲಿ ಹಿಂದಿರುವುದರಿಂದ, ಈ ವಿಷಯಗಳ ಬಗ್ಗೆ ‘ಮೋದಿ ಸರ್ಕಾರ್’ ಯಾವ ರೀತಿಯ ನಿಲುವು ತಳೆಯುತ್ತದೆಯೆಂಬ ಆತಂಕ ಬಹುಜನರಲ್ಲಿದೆ.  ಮೋದಿ ಹಾಕಬಯಸಿರುವ ನವಭಾರತದ ಅಡಿಪಾಯನ್ನು ಗಟ್ಟಿಗೊಳಿಸುವಲ್ಲಿ, ಮುಂದಕ್ಕೆ ಭಾರತವನ್ನು ಎತ್ತರಕ್ಕೇರಿಸುವಲ್ಲಿ ಶಿಕ್ಷಣ ವ್ಯವಸ್ಥೆ ಮಹತ್ತರ ಪಾತ್ರವಹಿಸುತ್ತದೆನ್ನುವುದನ್ನು ಅವರು ಗಮನದಲ್ಲಿ ಟ್ಟುಕ್ಕೊಳ್ಳಬೇಕು.

ಆರೋಗ್ಯ: ಮೂಲಭೂತ ಸೌಕರ್ಯಗಳಲ್ಲಿ ಆಸ್ಪತ್ರೆಗಳು ಸೇರುತ್ತವಾದರೂ ಆರೋಗ್ಯ ಸಮಸ್ಯೆ ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗಿಲ್ಲ. ವರ್ಲ್ಡ್ ಬ್ಯಾಂಕ್ ನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ೫ ವರ್ಷದೊಳಗಿನ  ಶೇ ೭೫  ಮಕ್ಕಳು ಹಾಗೂ ಶೇ ೫೧ ಮಹಿಳೆಯರು ರಕ್ತಹೀನತೆ ಹೊಂದಿದ್ದಾರೆ.

ಇದು ಪೌಷ್ಟಿಕ ಆಹಾರದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಶುದ್ಧ ನೀರು, ಸಾಮಾಜಿಕ ನೈರ್ಮಲ್ಯ, ಶೌಚಾಲಯಗಳು ಮುಂತಾದವು ಆರೋಗ್ಯ ಸಮಸ್ಯೆಯಲ್ಲಿ ಅಡಕವಾಗಿದೆ. ಇದರ ಬಗ್ಗೆಯೂ ಮೋದಿಯವರು ಪ್ರಸ್ತಾಪ ಮಾಡಿದ್ದು ಕಡಿಮೆ. ಇದನ್ನು ಯಾವ ರೀತಿ ನಿಭಾಯಿಸುತ್ತಾರೆಂದು ಕಾದು ನೋಡಬೇಕಿದೆ.

ಮೋದಿಯವರಲ್ಲಿ ಭಾರತದ ಬಗ್ಗೆ ಒಂದು ಕನಸಿದೆ; ಹಾಗೆಯೇ ನಮ್ಮೆಲ್ಲರಲ್ಲೂ ಒಂದು ಕನಸಿದೆ, ದೇಶದ ಬಗ್ಗೆ ಹಲವಾರು ಕಲ್ಪನೆಗಳಿವೆ. ಎಲ್ಲರೂ ದೇಶದ ಪ್ರಗತಿಯನ್ನು ಬಯಸುತ್ತೇವೆ. ಒಂದಷ್ಟು ಜನ ಮೋದಿಯವರ ಕನಸಿನಲ್ಲೂ ತಮ್ಮ ಕನಸಿನಲ್ಲೂ ಸಾಮ್ಯತೆ ಕಂಡು ಬೆಂಬಲ ನೀಡಿದ್ದಾರೆ.

ಇನ್ನು ಕೆಲವರು ತಮ್ಮ ಕನಸನ್ನು ಸಾಕಾರಗೊಳಿಸಲು ‘ಮೋದಿ ಸರ್ಕಾರ್’ ಬೇಕೆಂದು ನಂಬಿ ಬೆಂಬಲಿಸಿದ್ದಾರೆ. ಇನ್ನು ಕೆಲ­ವರು ಬದಲಾವಣೆಗಾಗಿ ಮತ ಚಲಾಯಿಸಿ­ದ್ದಾರೆ. ಆದರೆ ನಾವೆಲ್ಲ ನೆನಪಿನಲ್ಲಿಡಬೇಕಾದ ಒಂದು ಮುಖ್ಯ ಅಂಶ ಅಂದರೆ ಬದಲಾವಣೆ ಇಂದಿನಿಂದ ನಾಳೆಗೆ ಆಗುವುದಿಲ್ಲ. ಅದು ಮೋದಿಯವರೇ ಇರಲಿ ಅಥವಾ ಬೇರೆ ಯಾರೇ ಇರಲಿ.

ಒಂದು ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕೆ ವ್ಯವಸ್ಥೆಯ ಭಾಗವಾದವ­ರೆಲ್ಲ­ರಲ್ಲೂ ಬದಲಾವಣೆಯ ಅಗತ್ಯತೆಯ ಅರಿವು ಮೂಡಿಸಬೇಕು. ಅಷ್ಟೇ ಅಲ್ಲ  ಭಾರತದಂತಹ ವೈವಿಧ್ಯಮಯ ದೇಶವನ್ನು ಒಂದು ಸೂತ್ರದಲ್ಲಿ ಕಟ್ಟುವುದು ಸಾಧ್ಯವಿಲ್ಲ. ಪ್ರಾದೇಶಿಕ ಅವಶ್ಯಕತೆ­ಗಳಿಗೆ ಸರಿಯಾಗಿ ಸೂತ್ರಗಳೂ ಬದಲಾಗಬೇಕು.

ನಮ್ಮ ಮನಸ್ಸಿನಲ್ಲಿರಬೇಕಾದ ಇನ್ನೊಂದು ವಿಚಾರ - ಸರ್ಕಾರದ ಕೆಲಸ ಒಬ್ಬೊಬ್ಬರ ವೈಯಕ್ತಿಕ ಕನಸುಗಳನ್ನು ಪೂರ್ಣಗೊಳಿಸುವು­ದಲ್ಲ; ನಮ್ಮ ನಮ್ಮ ಕನಸಿನ ಸೌಧವನ್ನು ಕಟ್ಟುವುದು ನಮ್ಮ ಕೆಲಸ. ದೇಶದ ಅಭಿವೃದ್ಧಿ, ಸಬಲೀಕರಣ, ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದ, ಸರ್ವಾಂಗೀಣ ಅಭಿವೃದ್ಧಿ ತನ್ಮೂಲಕ ಪ್ರಜೆಗಳ ಕನಸುಗಳನ್ನು ಸಾಕಾರಗೊಳಿಸಲು ಪೂರಕ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರದ ಕೆಲಸ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.