ಇಂದಿರಾ ಬಗ್ಗೆ ಎಸ್ಸೆನ್ ಆಪಾದನೆ
ನವದೆಹಲಿ, ಜೂನ್ 27–ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಜಾತ್ಯತೀತ ನೀತಿ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವುದಾಗಿ ವಿರೋಧಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಆಪಾದಿಸಿದರು.
ಮೂರು ದಿನಗಳ ಎಐಸಿಸಿ ಅಧಿವೇಶನದ ಆರಂಭದಲ್ಲಿ ಅವರು ಪಕ್ಷದ ಧ್ವಜಾರೋಹಣ ಮಾಡುತ್ತ, ಕೋಮು, ಕೋಮುಗಳ ನಡುವೆ ಒಡಕನ್ನುಂಟು ಮಾಡುವ ಆಡಳಿತ ಕಾಂಗ್ರೆಸ್ಸಿನ ಪ್ರಯತ್ನಕ್ಕೆ ಅಡ್ಡಿಯುಂಟು ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ವಿವೇಚನಾಪರರಿಗೆ ಮನವಿ ಮಾಡಿಕೊಂಡರು.
ಖಾಸಗಿ ಪ್ರೌಢಶಾಲೆ ಅಕ್ರಮಗಳ ತನಿಖೆಗೆ ಅಧಿಕಾರಿ ನೇಮಕ
ಬೆಂಗಳೂರು, ಜೂನ್ 27–ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಜಂಟಿ ಡೈರೆಕ್ಟರ್ ಅವರನ್ನು ಖಾಸಗಿ ಪ್ರೌಢಶಾಲೆಗಳಲ್ಲಿ ನಡೆಯುವ ‘ಅಕ್ರಮಗಳನ್ನು’ ತನಿಖೆ ಮಾಡಲು ವಿಶೇಷಾಧಿಕಾರಿಯನ್ನಾಗಿ ನೇಮಿಸಲಾಗಿದೆಯೆಂದು ಶಿಕ್ಷಣ ಸಚಿವ ಶ್ರೀಕೆ.ವಿ.ಶಂಕರಗೌಡ ಅವರು ಇಂದು ಇಲ್ಲಿ ಪ್ರಕಟಿಸಿದರು.
ಖಾಸಗಿ ಶಾಲೆಗಳಲ್ಲಿ ಅಕ್ರಮ ನಡೆಯುತ್ತಿರುವ ಕೆಲವು ದೂರುಗಳು ತಮಗೆ ಬಂದಿವೆಯೆಂದೂ ಅದನ್ನು ನಿವಾರಿಸಲು ಸಾರ್ವಜನಿಕರು, ಪೋಷಕರು ಮತ್ತು ಶಿಕ್ಷಕರು ಸಂಪೂರ್ಣ ಸಹಕಾರ ನೀಡಬೇಕೆಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಬಸವನಗುಡಿಯಲ್ಲಿ ಶೀಘ್ರವೇ ಮಹಾರಾಣಿ ಕಾಲೇಜ್ ಶಾಖೆ
ಬೆಂಗಳೂರು, ಜೂನ್ 27–ನಗರದ ಬಸವನಗುಡಿ ಪ್ರದೇಶದಲ್ಲಿ ಮಹಾರಾಣಿ ಕಾಲೇಜಿನ ಶಾಖೆಯೊಂದು ಸ್ಥಾಪಿತವಾಗಲಿದೆ.
ಮಹಾರಾಣಿ ಕಾಲೇಜಿನಲ್ಲಿ ಸ್ಥಳಾವಕಾಶ ಸಾಲದೆ ಸೀಟು ಬಯಸುವ ಅಭ್ಯರ್ಥಿಗಳ ಸಂಖ್ಯೆ ಪ್ರತಿವರ್ಷ ಏರುತ್ತಿರುವುದರಿಂದ ಈ ರೀತಿ ಅದರ ಶಾಖೆಯನ್ನು ತೆರೆಯುವುದು ಅನಿವಾರ್ಯವಾಗಿದೆಯೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ.ಶಂಕರಗೌಡ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
ಕಾಲೇಜಿನಲ್ಲಿ ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶವಿದ್ದರೆ ನಾಲ್ಕು ಸಾವಿರ ಅರ್ಜಿಗಳು ಬಂದಿವೆಯೆಂದು ಅವರು ಹೇಳಿದರು.
ಸೂಕ್ತವಾದ ಕಟ್ಟಡ ದೊರೆತಲ್ಲಿ ಈ ವರ್ಷವೇ ಶಾಖೆಯನ್ನು ಪ್ರಾರಂಭಿಸುವ ಉದ್ದೇಶವಿದೆಯೆಂದು ಸಚಿವರು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.