‘ಸಾರ್ವತ್ರಿಕ ಮತದಾನದ ಹಕ್ಕು’ ನಮ್ಮ ಸ್ವಾತಂತ್ರ್ಯ ಹೋರಾಟದ ಮುಖ್ಯ ತತ್ತ್ವಗಳಲ್ಲೊಂದು. 1928ರಲ್ಲಿ ಮೋತಿಲಾಲ್ ನೆಹರೂ ವರದಿಯನ್ವಯ ಅದು ರೂಪಿತವಾಗಿತ್ತು. 1929ರಲ್ಲಿ ‘ಪೂರ್ಣ ಸ್ವರಾಜ್’ ಘೋಷಣೆಯಾದಾಗಲೂ ಅದನ್ನೇ ಪುನರುಚ್ಚರಿಸಲಾಗಿತ್ತು. ಸಂವಿಧಾನವು ವಯಸ್ಕರ ಮತದಾನ ತತ್ತ್ವವನ್ನು 326ನೇ ವಿಧಿಯಲ್ಲಿ ಸೇರಿಸಿತು. 21 ವರ್ಷ ದಾಟಿದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮತದಾರನಾಗಿ ನೋಂದಾಯಿಸಿ ಕೊಳ್ಳುವ ಹಕ್ಕು ಇದೆ ಎನ್ನುವುದನ್ನು ಅದು ಪ್ರತಿಪಾದಿಸಿತು. ಭಾರತದ ಪೌರತ್ವವು ಜನನ ಹಾಗೂ ವಾಸಸ್ಥಾನದ ಆಧಾರದ ಮೇಲೆ (ವಂಶದ ಹಿನ್ನೆಲೆ ಅಥವಾ ಜನಾಂಗದ ಆಧಾರದ ಮೇಲೆ ಅಲ್ಲ) ನಿರ್ಧಾರವಾಗುತ್ತದೆ ಎಂದು ಸಂವಿಧಾನದ 5ನೇ ವಿಧಿ ಒತ್ತಿ ಹೇಳಿದೆ. ಪೌರತ್ವ ಮುಂದುವರಿಸಿಕೊಂಡು ಹೋಗುವ ಹಾಗೂ ಅದನ್ನು ರಕ್ಷಿಸುವ ಕಾರ್ಯವನ್ನು 10ನೇ ವಿಧಿ ಮಾಡುತ್ತದೆ.
ಸ್ವಾತಂತ್ರ್ಯಾನಂತರದ ಮೊದಲ 75 ವರ್ಷಗಳಲ್ಲಿ ಭಾರತೀಯ ಜನತಂತ್ರ ವ್ಯವಸ್ಥೆಯು ಸಾಂವಿಧಾನಿಕ ಭರವಸೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ಎಲ್ಲರನ್ನೂ ಒಳಗೊಳ್ಳುವ ತತ್ತ್ವ’ವನ್ನು ಅನುಸರಿಸಿತು. ಸಂವಿಧಾನದ ಆಶಯ ಈಡೇರಿಸುವುದೇ ಅದರ ಉದ್ದೇಶವಾಗಿತ್ತು. ‘ಮ್ಯಾಪಿಂಗ್ ಆಫ್ ಸಿಟಿಜನ್ಸ್ ಆಫ್ ಇಂಡಿಯಾ’ ಪುಸ್ತಕದಲ್ಲಿ ಅನುಪಮಾ ರಾಯ್ ಅವರು, ಎಲ್ಲರನ್ನೂ ಒಳಗೊಳ್ಳುವಿಕೆಯ ತರ್ಕ ಮತ್ತು ಮಹತ್ವದ ಕುರಿತು ಚರ್ಚಿಸಿದ್ದಾರೆ.
ಒಂದು ಭೌಗೋಳಿಕ ಪರಿಸರದಲ್ಲಿ ರುವ ಎಲ್ಲರನ್ನೂ ಒಳಗೊಳ್ಳುವುದು ವಿಶ್ವಮಾನವ ತತ್ತ್ವದೆಡೆಗಿನ ಹೆಜ್ಜೆಯಾಗಿದ್ದು, ಎಲ್ಲರಿಗೂ ಪೌರತ್ವ ವಿಸ್ತರಿಸುವ ಮೂಲಕ ಭಿನ್ನತೆಗಳನ್ನು ಗೌರವಿಸಿ ಪ್ರಜಾಪ್ರಭುತ್ವದ ಸತ್ವವನ್ನು ಗಟ್ಟಿಗೊಳಿಸಬೇಕೆಂದು ಅನುಪಮಾ ಹೇಳುತ್ತಾರೆ. ಇದಕ್ಕೆ ವಿರುದ್ಧವಾದ ರೀತಿಯಲ್ಲಿ ಪೌರತ್ವವನ್ನು ನಿರಾಕರಿಸುವುದು, ಪೌರತ್ವದ ಬಗ್ಗೆ ಶಂಕೆ ವ್ಯಕ್ತಪಡಿಸುವುದು ಮತ್ತು ಪೌರತ್ವವನ್ನು ಪ್ರತ್ಯೇಕಗೊಳಿಸಿ ನೋಡುವ ರೀತಿಯೂ ಜಾರಿಯಲ್ಲಿದೆ. ಹೀಗೆ ಇದ್ದ ಮಾತ್ರಕ್ಕೆ, ಈ ತರ್ಕವನ್ನು ಮತದಾನದ ಹಕ್ಕನ್ನು ಮೊಟಕುಗೊಳಿಸುವ ಮಟ್ಟಕ್ಕೆ ವಿಸ್ತರಿಸಲಾಗದು.
ಮಾನವಶಾಸ್ತ್ರಜ್ಞೆ ಮುಕುಲಿಕಾ ಬ್ಯಾನರ್ಜಿ ಅವರ, ‘ವೈ ಇಂಡಿಯಾ ವೋಟ್ಸ್?’ ಕೃತಿಯಲ್ಲಿ ಒಂದು ವಾದವಿದೆ: ಮತದಾನದ ಜಾತ್ಯತೀತ ರಿವಾಜು ಈಗ ಭಾರತದಲ್ಲಿ ಪರಮ ಪವಿತ್ರ ಸ್ಥಾನಮಾನವನ್ನು ಪಡೆದುಕೊಂಡಿದೆ. ಅದೀಗ ಸ್ವೀಕೃತ ಅಭಿಪ್ರಾಯವಾಗಿ ಬದಲಾಗಿದ್ದು, ಎಲ್ಲರಿಗೂ ಸಮಾನ ಮತದಾನದ ಹಕ್ಕು ಲಭಿಸಿದೆ ಎಂದವರು ಹೇಳುತ್ತಾರೆ.
ಎಲ್ಲರನ್ನೂ ಒಳಗೊಳ್ಳುವ ತತ್ತ್ವವು ಇಲ್ಲಿ ಆಕಸ್ಮಿಕವಾಗಿ ಘಟಿಸಿಲ್ಲ. ಬದಲಿಗೆ ಕಾನೂನು, ನಿಯಮ ಹಾಗೂ ಸಾಂಸ್ಥಿಕ ನಡಾವಳಿಗಳಲ್ಲಿ ಬೆರೆತುಹೋಗಿತ್ತು. ಯಾವ ಮತದಾರನನ್ನೂ ಮತದಾನದಿಂದ ಹೊರಗೆ ಇಡಬಾರದು ಎನ್ನುವುದೇ ಇವೆಲ್ಲವುಗಳ ಗುರಿಯಾಗಿತ್ತು. ಅಮೆರಿಕದಲ್ಲಿ ಹಾಗೂ ಇತರ ಕೆಲವು ದೇಶಗಳಲ್ಲಿ ಅರ್ಹ ವ್ಯಕ್ತಿಯು ಮತದಾರನಾಗಿ ನೋಂದಣಿ ಮಾಡಿಸಲು ಅರ್ಜಿ ಸಲ್ಲಿಸಬೇಕು. ಇದರಿಂದಾಗಿ, ಅಮೆರಿಕದಲ್ಲಿ ನೋಂದಾಯಿತ ಮತದಾರರು ಶೇ 74ರಷ್ಟು ಇದ್ದರೆ, ಭಾರತದಲ್ಲಿ ಶೇ 96ರಷ್ಟು ನಾಗರಿಕರಿಗೆ ಮತದಾನದ ಹಕ್ಕು ಇದೆ. ಮತದಾರರ ಪಟ್ಟಿಗೆ ಜನರು ತಾವೇ ಹೆಸರು ನೋಂದಾಯಿಸುವ ಅವಕಾಶ ನಮ್ಮಲ್ಲಿ ಇದೆಯಾದರೂ, ತಾತ್ವಿಕವಾಗಿ ಅದರ ಹೊಣೆಗಾರಿಕೆ ಚುನಾವಣಾ ಅಧಿಕಾರಿಗಳ ಮೇಲಿದೆ. ಪ್ರತಿ ವಯಸ್ಕ ನಿವಾಸಿ ಯನ್ನು ಸಂಪರ್ಕಿಸಿ, ಅರ್ಹರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ಮಾಡುವುದು ಅವರ ಹೊಣೆ.
ಪೌರತ್ವ ಕುರಿತು ಒಂದು ಸಾಮಾನ್ಯ ಭಾವನೆ ಇದೆ: ವಯಸ್ಕನಂತೆ ಕಾಣುವ ಯಾವುದೇ ನಿವಾಸಿಗೂ ದೇಶದ ಪೌರತ್ವ ಸಿಗುತ್ತದೆ ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರುತ್ತದೆ. ಯಾವುದೋ ದೂರು ಅಥವಾ ಶಂಕೆಯ ಕಾರಣದಿಂದ ಅದು ತಪ್ಪಬಹುದು ಅಷ್ಟೇ. ಒಂದು ಸಲ ಮತದಾರರ ಪಟ್ಟಿಗೆ ಹೆಸರು ಸೇರಿದರೆ, ಆಮೇಲೆ ಸಮರ್ಪಕ ಪ್ರಕ್ರಿಯೆ ಇಲ್ಲದೆ ಅದನ್ನು ತೆಗೆಯುವಂತಿಲ್ಲ. ಹೆಸರಾಂತ ಇತಿಹಾಸಕಾರ ಆರ್ನಿಟ್ ಶಾನಿ ಅವರ ಜನಪ್ರಿಯ ಕೃತಿ ‘ಹೌ ಇಂಡಿಯಾ ಬಿಕೇಮ್ ಡೆಮಾಕ್ರೆಟಿಕ್’ ಮತದಾರರ ಸಾರ್ವತ್ರೀಕರಣಕ್ಕೆ ಭಾರತೀಯ ಚುನಾವಣಾ ಆಯೋಗ ಏನೆಲ್ಲಾ ಅಸಾಮಾನ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಅಂಚಿನಲ್ಲಿ ಇರುವ ಜನರನ್ನು ಮತದಾರರ ಪಟ್ಟಿಗೆ ಸೇರಿಸಲು ಆಯೋಗ ಅನೇಕ ವರ್ಷಗಳಿಂದ ದಾರಿಗಳನ್ನು ಹುಡುಕುತ್ತಾ ಬಂದಿದೆ. ಅಲೆಮಾರಿ ಸಮುದಾಯಗಳು, ವಸತಿರಹಿತರು, ಲೈಂಗಿಕ ಕಾರ್ಯಕರ್ತರು, ಲಿಂಗತ್ವ ಅಲ್ಪಸಂಖ್ಯಾತರು, ಅನಾಥರು, ದಾಖಲೆಗಳಿಲ್ಲದ ನಾಗರಿಕರು ಹಾಗೂ ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ಒದಗಿಸುವ ಪ್ರಯತ್ನ ಗಳನ್ನು ನಡೆಸಿದೆ.
ಭಾರತದಲ್ಲಿ ‘ನನ್ನ ಮತ ನನ್ನ ಹಕ್ಕು’ ಎಂಬ ಘೋಷಣೆಯು ಮತದಾನದ ಹಕ್ಕಿನ ಜೊತೆಗೆ ಜನರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸ್ತಿತ್ವವನ್ನೂ ನಿರ್ಧರಿಸುತ್ತದೆ. ಧರ್ಮಾಂಧತೆ, ಮೌಢ್ಯ, ಏಕತೆಗೆ ವಿರುದ್ಧವಾದ ಸಂಗತಿಗಳು ಹಲವು ಕಾರಣಕ್ಕೆ ಹೆಚ್ಚಾಗಿ ಇರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನೈಜ ಉದ್ದೇಶ ಗಳನ್ನು ಜಾರಿಗೊಳಿಸಲು ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕರ್ತವ್ಯವನ್ನು ಮರೆತು ಕಷ್ಟಪಟ್ಟು ಪಡೆದ ಪ್ರಜಾಪ್ರಭುತ್ವ ವನ್ನು ಕಳೆದುಕೊಂಡರೆ, ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದಂತೆ ನಾವು ನಾಯಿ–ನರಿಗಳಂತೆ ಬದುಕಬೇಕಾಗುತ್ತದೆ.
ಈ ಬಾರಿಯ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು ನಾವೆಲ್ಲರೂ ನಮ್ಮ ಹಕ್ಕಿನ ಪ್ರಜ್ಞೆಯ ಜೊತೆ ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ಕಾಪಾಡುವ ಪ್ರತಿಜ್ಞೆ ಕೈಗೊಳ್ಳೋಣ.
ಲೇಖಕ: ಸಮಾಜ ಕಲ್ಯಾಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.