ADVERTISEMENT

ಸಂಗತ: ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ

ಸರಳ ಬದುಕನ್ನು ರೂಢಿಸಿಕೊಳ್ಳುವುದು ನಾವು ಮಾಡಬೇಕಾದ ಅತ್ಯಂತ ಅಗತ್ಯದ ಸಂಕಲ್ಪವಾಗಿದೆ

ರಾಜಕುಮಾರ ಕುಲಕರ್ಣಿ
Published 3 ಜನವರಿ 2023, 19:45 IST
Last Updated 3 ಜನವರಿ 2023, 19:45 IST
ಸಂಗತ
ಸಂಗತ   

ಹೊಸ ವರ್ಷದ ಅಂಗವಾಗಿ ಸಾರ್ವಜನಿಕರು ಅನೇಕ ಸಂಕಲ್ಪಗಳನ್ನು ತೊಡುತ್ತಾರೆ. ಕೆಟ್ಟ ಹವ್ಯಾಸಗಳನ್ನು ತ್ಯಜಿಸುವ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ವರ್ತನೆಯನ್ನು ತಿದ್ದಿಕೊಳ್ಳುವ, ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತರಹೇವಾರಿ ಸಂಕಲ್ಪಗಳನ್ನು ಮಾಡುತ್ತಾರೆ. ಆದರೆ ಜನರು ತಮ್ಮ ಈ ನಿರ್ಧಾರಗಳನ್ನು ಎಷ್ಟರಮಟ್ಟಿಗೆ ಕಾರ್ಯಗತಗೊಳಿಸುವರು ಎನ್ನುವುದು ಅವರವರ ಮನಸ್ಸಿನ ದೃಢತೆಯನ್ನು ಅವಲಂಬಿಸಿದೆ. ಹೆಚ್ಚಿನ ನಿರ್ಣಯಗಳು ಕೆಲವು ದಿನಗಳ ಕಾಲ ಕಾಟಾಚಾರಕ್ಕೆ ರೂಢಿಯಲ್ಲಿದ್ದು ಆನಂತರ ಮರೆತುಹೋಗುವುದು ಸಾಮಾನ್ಯ ಸಂಗತಿಯಾಗಿದೆ.

ಇತ್ತೀಚೆಗೆ ನನ್ನ ಮಿತ್ರರೊಬ್ಬರು ಮಗಳ ಮದುವೆಯನ್ನು ಅತ್ಯಂತ ಸರಳವಾಗಿ ನೆರವೇರಿಸಿದರು. ಮದುವೆ ಕಾರ್ಯಕ್ರಮ ಕೆಲವೇ ಗಂಟೆಗಳಲ್ಲಿ ಕೊನೆಗೊಂಡಿತು. ವಧು-ವರರ ಕುಟುಂಬ ಸದಸ್ಯರಷ್ಟೇ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಆಹಾರ ಕೂಡ ಮಿತವಾಗಿ ಬಳಕೆಯಾಗಿತ್ತು. ‘ಜಗತ್ತಿನಲ್ಲಿ ಆಹಾರ ಕೊರತೆಯ ಸಮಸ್ಯೆ ಉಲ್ಬಣಿಸುತ್ತಿರುವಾಗ ಅದ್ಧೂರಿ ಮದುವೆ ಸಮಾರಂಭವನ್ನು ಏರ್ಪಡಿಸುವುದಕ್ಕೆ ಮನಸ್ಸು ಒಪ್ಪಲಿಲ್ಲ. ಇನ್ನುಮುಂದೆ ಕುಟುಂಬದ ಎಲ್ಲ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸಬೇಕೆಂದು ಸಂಕಲ್ಪ ಮಾಡಿದ್ದೇನೆ. ಅದರ ಮೊದಲ ಹೆಜ್ಜೆಯಾಗಿ ಮಗಳ ಮದುವೆಯನ್ನು ಸರಳವಾಗಿ ನೆರವೇರಿಸಿದ್ದು ತೃಪ್ತಿ ನೀಡಿದೆ’ ಎಂದು ನುಡಿದ ಮಿತ್ರರ ಮಾತಿನಲ್ಲಿ ಹೆಮ್ಮೆ ಇತ್ತು.

ದೇಶದ ಆಹಾರ ಕೊರತೆಯನ್ನು ನೀಗಿಸಲು ಪ್ರತಿಯೊಬ್ಬ ಪ್ರಜೆ ವಾರಕ್ಕೊಮ್ಮೆ ಉಪವಾಸವಿರುವಂತೆ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರೆ ನೀಡಿದ್ದರು. ಈ ಸಂಕಲ್ಪವನ್ನು ಸ್ವತಃ ಶಾಸ್ತ್ರಿ ಅವರು ರೂಢಿಗೆ ತರುವುದರ ಮೂಲಕ ಜನರಿಗೆ ಆದರ್ಶವೂ ಮಾದರಿಯೂ ಆಗಿ ಉಳಿದರು.

ADVERTISEMENT

ಆಹಾರ ಕೊರತೆಯ ಸಮಸ್ಯೆಯನ್ನು ಪರಿಹರಿಸುವ ದಿಸೆಯಲ್ಲಿ ಅದ್ಧೂರಿ, ಆಡಂಬರವನ್ನು ತ್ಯಜಿಸಿ ಸರಳ ಬದುಕನ್ನು ರೂಢಿಸಿಕೊಳ್ಳುವುದು ನಾವು ಮಾಡಬೇಕಾದ ಅತ್ಯಂತ ಅಗತ್ಯದ ಸಂಕಲ್ಪವಾಗಿದೆ. ವೈಯಕ್ತಿಕ ಮತ್ತು ಕೌಟುಂಬಿಕ ಸಮಾರಂಭಗಳು ಸಮಾಜದಲ್ಲಿ ಸಾರ್ವಜನಿಕ ಸಮಾರಂಭಗಳಂತೆ ಆಚರಿಸಲ್ಪಡುತ್ತಿವೆ. ಸಾವಿರಾರು ಜನರನ್ನು ಆಮಂತ್ರಿಸಿ ಭೂರಿ ಭೋಜನ ಉಣಬಡಿಸುವ ಖಯಾಲಿ ಸೋಂಕಿನಂತೆ ಆವರಿಸಿಕೊಂಡಿದೆ. ಹಿತಮಿತವಾಗಿ ಬಳಕೆಯಾಗಬೇಕಾದ ಆಹಾರವು ಸಮಾರಂಭಗಳಲ್ಲಿ ಹಳಸಿ ಹಾಳಾಗಿ ತಿಪ್ಪೆಗುಂಡಿಗಳನ್ನು ಸೇರುತ್ತಿದೆ. ಆಹಾರದ ಜೊತೆಗೆ ನೀರು ಮತ್ತು ವಿದ್ಯುತ್ ಕೂಡ ದುರ್ಬಳಕೆಯಾಗುತ್ತಿವೆ.

ವರ್ಷದಿಂದ ವರ್ಷಕ್ಕೆ ಕೃಷಿಭೂಮಿ ಕ್ಷೀಣಿಸುತ್ತಿರುವುದು ಮುಂದೊಂದು ದಿನ ತೀವ್ರ ಆಹಾರ ಕ್ಷಾಮವನ್ನು ಸೃಷ್ಟಿಸಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ತಮ್ಮ ನಂತರದ ಪೀಳಿಗೆಗೆ ಸಕಲ ಐಶ್ವರ್ಯಗಳನ್ನೂ ಕೊಟ್ಟು ಹೋಗುವ ಧಾವಂತದಲ್ಲಿ ಮನುಷ್ಯರು ಬದುಕಿಗೆ ಮೂಲ ಸೆಲೆಯಾದ ಆಹಾರದಂಥ ಅತಿಮುಖ್ಯವಾದ ಅವಶ್ಯಕತೆಯನ್ನೇ ಮರೆತಿದ್ದಾರೆ. ಶಿವರಾಮ ಕಾರಂತರು ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ: ‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದುದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನದು. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ಅಲ್ಲಿಗೆ ನಾವು ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೇ ಹೋದರೆ ಹೇಗೆ?’.

ತನ್ನ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಮನುಷ್ಯ ತಾನು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಮರೆಯುತ್ತಿದ್ದಾನೆ. ಆಹಾರ, ನೀರು, ವಿದ್ಯುತ್ ಇವುಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾಗಿದೆ. ಖರೀದಿಸುವ ಸಾಮರ್ಥ್ಯವಿದೆ ಎಂದ ಮಾತ್ರಕ್ಕೆ ರಾಷ್ಟ್ರೀಯ ಸಂಪತ್ತನ್ನು ದುರ್ಬಳಕೆ ಮಾಡುವ ಅಧಿಕಾರ ಮನುಷ್ಯನಿಗಿಲ್ಲ.

ಎಚ್.ಎಸ್.ವೆಂಕಟೇಶಮೂರ್ತಿ ತಮ್ಮ ‘ಇರಬೇಕು ಇರುವಂತೆ’ ಕವಿತೆಯಲ್ಲಿ, ಮನುಷ್ಯ ಕೂಡ ಪ್ರಕೃತಿಯಂತೆ ಬಾಳಬೇಕು ಎನ್ನುವ ಸದಾಶಯವನ್ನು ವ್ಯಕ್ತಪಡಿಸುತ್ತಾರೆ. ಕವಿತೆಯ ಒಂದು ಸಾಲು ಹೀಗಿದೆ- ‘ತಾನು ಬಿಸಿಲಲಿ ನಿಂತು/ತನ್ನ ಬಳಿ ಬರುವವಗೆ/ತಣ್ಣಗಿನ ಆಸರೆಯ ನೆರಳ ಕೊಟ್ಟು/ ಹೇಗೆ ಗೆಲುವಾಗುವುದೊ/ ಹಸಿರೆಲೆಯ ಹೊಂಗೆಮರ/ ಹಾಗೆ ಬಾಳಿಸು ಗುರುವೇ ಪ್ರೀತಿಯಿಟ್ಟು’.

ಬದುಕನ್ನು ಸರಳತೆಯ ನೆಲೆಯಲ್ಲಿ ಜೀವಿಸುವ ಮನುಷ್ಯನಿಗೆ ಸಮಾಜ ಗುರುತಿಸಿ ಗೌರವಿಸುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸಮಾಜಕ್ಕೆ ಉಪಯುಕ್ತವಾದ ಗುಣಗಳನ್ನು ಮೈಗೂಡಿಸಿಕೊಂಡು ಬದುಕುತ್ತಿರುವವರಿಗೆ ಇದೇ ಸಮಾಜ ಶತಮೂರ್ಖ ಎನ್ನುವ ಹಣೆಪಟ್ಟಿ ಕಟ್ಟುತ್ತದೆ. ಬದುಕುವ ಕಲೆ ಗೊತ್ತಿಲ್ಲದ ವರೆಂದು ಹೀಯಾಳಿಸುತ್ತದೆ. ನಿಂದನೆಯ ಮಾತುಗಳಿಗೆ ಹೆದರಿ ಸಮಾಜೋಪಯೋಗಿ ಗುಣಗಳನ್ನು ತ್ಯಜಿಸಿ ಬದುಕುವುದು ತಪ್ಪು ನಡೆಯಾಗುತ್ತದೆ. ಕೆಲವೊಮ್ಮೆ ಮನುಷ್ಯನು ನಿಂದನೆ, ಅವಮಾನಗಳನ್ನು ಮೀರಿ ಅಂತರಂಗದ ಧ್ವನಿಗೆ ಆದ್ಯತೆ ನೀಡಬೇಕು. ಸಂಕಲ್ಪಿಸುವ ಮನಸ್ಸು ದೃಢವಾಗಿದ್ದರೆ ಯಾವ ಅವಮಾನ, ನಿಂದನೆಗಳೂ ನಮ್ಮ ಧೃತಿಗೆಡಿಸಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.