ADVERTISEMENT

ಸಂಗತ: ನೆಮ್ಮದಿಯ ನಾಳೆಗಳ ಹಂಬಲದಲ್ಲಿ...

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 19 ಸೆಪ್ಟೆಂಬರ್ 2022, 19:30 IST
Last Updated 19 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯೌವನವೊಂದು ಸಂದಿಗ್ಧ ಕಾಲ. ಪ್ರೌಢಹಂತ ದಾಟಿಯಾದ ಮೇಲೆ ಬದುಕು ಕಲಿಸುವ ಕುಲುಮೆಯಾಗಿ, ಸ್ಪರ್ಧಾಜಗತ್ತಿನ ಬೆಳಕಿಂಡಿಯಾಗಿ ನಿಲ್ಲಬೇಕಿರುವುದು ಕಾಲೇಜು ಶಿಕ್ಷಣ. ವಿದ್ಯಾರ್ಥಿಯ ಸರ್ವತೋಮುಖ ಪ್ರಗತಿಗೀಗ ವಿಪುಲ ಅವಕಾಶಗಳಿವೆ. ಜ್ಞಾನಾರ್ಜನೆ, ತಾತ್ವಿಕ ವಿಷಯಾಧ್ಯಯನಕ್ಕೆ ಸರ್ಕಾರ–ಸ್ವಯಂಸೇವಾ ಸಂಸ್ಥೆಗಳ ಪ್ರೇರಣೆ- ಪ್ರೋತ್ಸಾಹಗಳಿಗೇನೂ ಕೊರತೆಯಿಲ್ಲ. ಕೊಠಾರಿ ಶಿಕ್ಷಣ ಸುಧಾರಣಾ ಆಯೋಗವು ‘ದೇಶದ ಭವಿಷ್ಯವು ತರಗತಿಕೋಣೆಗಳಲ್ಲಿ ರೂಪುಗೊಳ್ಳುತ್ತದೆ...’ ಎಂದಿದೆ. ಆದರೆ, ಹದಗೊಂಡ ನೆಲದಲ್ಲಿ ಶ್ರಮಬಿತ್ತಿ ಯಶಸ್ಸಿನ ಫಸಲುಣ್ಣಬೇಕಾದ ಕೃಷಿಕನೀಗ ಅಲ್ಲಿ ಕಾಣೆಯಾಗುತ್ತಿದ್ದಾನೆ. ಅವನಲ್ಲಿ ಕಲಿಕೆಗಿಂತ ಅನ್ಯವಿಚಾರಗಳೇ ಮುಂಚೂಣಿಯಲ್ಲಿವೆ ಅನ್ನುವುದು ವಿದ್ಯಾರ್ಥಿಗಳ ಮೇಲಿನ ಆರೋಪ ಮತ್ತು ಸರಿಹೊತ್ತಿನ ಆತಂಕ.

ಯುವಮನಸುಗಳ ಅಸಹಜ ನಡೆಗೆ ಇರಬಹುದಾದ ಕಾರಣಗಳನ್ನು ವಿಭಿನ್ನ ಆಯಾಮಗಳಲ್ಲಿ ಚಿಕಿತ್ಸಕ ದೃಷ್ಟಿಯಲ್ಲಿ ಗ್ರಹಿಸಬೇಕಿದೆ. ಕೊರೊನಾ ಕಾಲದಲ್ಲಂತೂ, ತುರ್ತು ಎಂಬಂತೆ ಕೈಸೇರಿದ ಬೈಕು- ಮೊಬೈಲುಗಳ ಗೀಳು- ಮೋಜು ಹೆಚ್ಚಿ ಅಜಾಗರೂಕವಾಗಿ ಆಹ್ವಾನಿಸಿದ ಅಪಘಾತಗಳ ಚಿತ್ರ, ಸಂಯಮ ಕಳೆದುಕೊಂಡು ಮೊರೆಹೋದ ಆತ್ಮಹತ್ಯೆಗಳಲ್ಲಿ ಎಳೆಯ ಜೀವಗಳು ಅರಳುವ ಮೊದಲೇ ಅಂತ್ಯಗೊಂಡದ್ದು, ಮಹಾನಗರಗಳಿಗೆ ಸೀಮಿತವಾಗಿದ್ದ ಮಾದಕವಸ್ತು ಜಾಲ ಈಗೀಗ ನಾಡಿನೆಲ್ಲೆಡೆ ತನ್ನ ಕಬಂಧ ಬಾಹುವನ್ನು ವಿಸ್ತರಿಸುತ್ತಿರುವುದು ಅಪಾಯದ ಕಣ್ಸನ್ನೆಯೇ ಸರಿ. ಯುವಕರಲ್ಲಿ ಹೆಚ್ಚುತ್ತಿರುವ ಮಾದಕವ್ಯಸನ, ಸಿಗರೇಟ್- ಮದ್ಯ ಸೇವನೆ, ಮೊಬೈಲ್ ಗೇಮ್‍ನಲ್ಲಿಯ ಮೈಮರೆವು ದಿನಬೆಳಗಾದರೆ ಹೆತ್ತವರನ್ನು ಬೆಚ್ಚಿಬೀಳಿಸುತ್ತಿವೆ.

‘ವರ್ತನೆಯಲ್ಲಾಗುವ ಬದಲಾವಣೆಯೇ ಕಲಿಕೆ’ ಎನ್ನುತ್ತದೆ ಮನೋವಿಜ್ಞಾನ. ಆದರೆ ಕಲಿಕೆಯು ಬುದ್ಧಿ- ಭಾವಗಳ ಪರಿಧಿಯನ್ನು ವಿಸ್ತರಿಸುವ, ಜೀವನ ಕೌಶಲಗಳನ್ನು ಹರಿತಗೊಳಿಸುವ, ಅನ್ನದ ಮೂಲ ಹುಡುಕುವ, ಬದುಕಿನ ಮೌಲ್ಯಗಳನ್ನು ಒಳಗೊಳ್ಳುವ ವಿಷಯದಲ್ಲಿ ಸೋಲುತ್ತಿರುವುದು ಸ್ಪಷ್ಟ.

ADVERTISEMENT

ಆದರ್ಶರಹಿತ ಸಮಾಜದಲ್ಲಿ ಹಣ, ಅಂತಸ್ತು, ಅಧಿಕಾರವೆಂಬುದು ಇನ್ನಿಲ್ಲದ ಮಾನ್ಯತೆ ಪಡೆಯುತ್ತಿರುವಾಗ, ಮಕ್ಕಳಿಗೆ ಬೆವರುಬಸಿವ ಅಪ್ಪನ ಬಿಡಿಗಾಸು ಕೇವಲವೆನಿಸಿ, ಸತ್ಯ-ನಿಷ್ಠೆಗಳು ಅಪ್ರಸ್ತುತವೆನಿಸುತ್ತವೆ. ಬೆರಳತುದಿಯಲ್ಲಿ ಬ್ರಹ್ಮಾಂಡವೇ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ತರಗತಿಯ ಪಾಠಗಳು ಸಪ್ಪೆಸಪ್ಪೆ. ಟಿ.ವಿ- ಮೊಬೈಲುಗಳ ಭ್ರಮಾಲೋಕ ವಿಹಾರದಲ್ಲಿ ಕುಟುಂಬದ ಸಂಬಂಧ- ಆಚರಣೆಗಳಲ್ಲೂ ಒಲವಿಲ್ಲ.

ವಿದ್ಯಾರ್ಥಿ ನೆಲೆಯಲ್ಲಿ, ತಿಳಿಗೊಳ ಕದಡುತ್ತಿರುವುದಕ್ಕೆ ಕಾರಣಗಳಿವೆ. ಯುವಮನಸುಗಳ ಎದುರಿಗೆ ಆದರ್ಶಗಳಿಲ್ಲ... ಕೇವಲ ಆದಾಯ ಪ್ರಮಾಣಪತ್ರಕ್ಕೆಂದು ಕಚೇರಿ ಮೆಟ್ಟಿಲೇರಿದ ಮೊದಲ ದಿನವೇ ಅವನ ಅಷ್ಟೂವರ್ಷದ ತರಗತಿಯ ನೀತಿಪಾಠಗಳನ್ನೆಲ್ಲ ಮಣ್ಣುಪಾಲು ಮಾಡಲು ಸಾಕಾಗುತ್ತದೆ. ಮೂಲಭೂತ ಕೋರಿಕೆಗಳಾದ ಆಹಾರ, ಆರೋಗ್ಯ ಮತ್ತು ವಿದ್ಯಾಕ್ಷೇತ್ರಗಳು ಲಾಭಕೋರರ ಕೈವಶವಾಗಿರುವ ಹೊತ್ತಿದು. ಹಲವೆಡೆ ಸರ್ವಸಂಗ ಪರಿತ್ಯಾಗಿಗಳು ಎನಿಸಿಕೊಂಡವರು ವೈಭೋಗಗಳಲ್ಲಿ ಮಿಂದೇಳುತ್ತ ಧಾರ್ಮಿಕತೆಯನ್ನು ಜಾತಿ- ಪಕ್ಷ ರಾಜಕಾರಣಕ್ಕೆ ಒತ್ತೆಯಿರಿಸಿಯಾಗಿದೆ. ಬಲಿಷ್ಠರಾದವರ ಭ್ರಷ್ಟಾಚಾರ, ಅನಾಚಾರಗಳ ಸುದ್ದಿಗಳು ಕುದಿಮನಸುಗಳಲ್ಲಿ ಭ್ರಮನಿರಸನ ತರಿಸುತ್ತವೆ.

ಒಳಗೊಳ್ಳುವಿಕೆಯ ತತ್ವದಡಿ ಹೃದಯ ಬೆಸೆಯಬೇಕಾದ ಹೊತ್ತಲ್ಲಿ ಜಾತಿ-ಧರ್ಮಗಳ ಸೂಕ್ಷ್ಮ ಸಂಗತಿಗಳನ್ನು ಕೆಣಕಿ, ಉದ್ರೇಕಿಸಿ ಬಿಸಿರಕ್ತಗಳ ಮನಸು ಒಡೆದು, ಬೀದಿಯಲ್ಲಿ ಬಡಿದಾಡಲು ಬಿಡುವ ರಾಜಕೀಯ ಹುನ್ನಾರಗಳು ಅಲ್ಲಲ್ಲಿ ಚಾಲ್ತಿಯಲ್ಲಿವೆ. ದೇಶನಾಯಕರು ಕರೆ ಕೊಡುವ ಆರೋಗ್ಯವಂತ ಸಮಸಮಾಜದ ಪರಿಕಲ್ಪನೆಯೇ ತಮಾಷೆ ಎನಿಸುತ್ತದೆ. ತಾರುಣ್ಯವೆಂದರೆ ಮೊದಲೇ ಗೊಂದಲದ ಗೂಡು. ಯುವಕರನ್ನು ಮುತ್ತಿಕೊಳ್ಳುತ್ತಿರುವ ಹಲವು ಬಗೆಯ ಪ್ರಭಾವಳಿಗಳಿಂದ ಬಿಡಿಸಿಕೊಳ್ಳುವ ದಾರಿ ಹುಡುಕಲೇಬೇಕಿದೆ.

ಎಲ್ಲ ಕಾಲಕ್ಕೂ ದೇಶದ ಆಸ್ತಿಯೂ ಶಕ್ತಿಯೂ ಆಗಿರುವ ಯುವಜನತೆ, ಬೆಳಕಿನ ಬೀಜಗಳಾಗಿ ಮೊಳೆಯಬೇಕು. ನಾಳಿನ ಭರವಸೆಗಳಾಗಿ ಬೆಳೆಯಬೇಕು ಎಂಬುದು ಆಶಯ. ಹಾಗಂತ ಯುವಸಮೂಹವನ್ನು ದೂರುತ್ತಾ ಕೂತರೆ ಪ್ರಯೋಜನವಿಲ್ಲ. ಸಮಸ್ಯೆಯ ತಾಯಿಬೇರು ಇರುವುದು ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿ. ಬೆಳೆಯುವ ಭವಿಷ್ಯದ ಕುಡಿಗಳನ್ನು ‘ಹೊನ್ನ ಬಿತ್ತೇವ ಹೊಲಕೆಲ್ಲಾ...’ ಎಂಬಂತೆ ಆಸ್ಥೆಯಿಂದ ಪೊರೆಯಬೇಕು. ಸಮಾಜವೀಗ ಪ್ರಜ್ಞಾವಂತವಾಗಿ ಜಾತಿ, ಹಣ, ಸ್ವಾರ್ಥ, ಭ್ರಷ್ಟಾಚಾರ, ಬಾಹ್ಯ ಸೌಂದರ್ಯಗಳ ಬೆನ್ನುಬೀಳದೆ, ತನ್ನ ಸಂತತಿಯನ್ನು ತಿದ್ದುವ ನೈತಿಕತೆಯನ್ನು ಉಳಿಸಿಕೊಳ್ಳುವುದು ಮುಖ್ಯ.

ಪರೀಕ್ಷೆಯಲ್ಲಿನ ಅಂಕ ಗಳಿಕೆ, ಪ್ರಮಾಣಪತ್ರ, ದೊಡ್ಡ ಕಂಪನಿಗಳ ಕ್ಯಾಂಪಸ್ ಇಂಟರ್‌ವ್ಯೂ, ಲಂಡನ್- ನ್ಯೂಯಾರ್ಕುಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಿಕೆಯಷ್ಟನ್ನೇ ಧ್ಯೇಯ ಮಾಡಿಕೊಡುವ ಅಪಾಯಕಾರಿ ವ್ಯವಸ್ಥೆಯನ್ನು ಆರಾಧಿಸುತ್ತಿದ್ದರೆ ಕಷ್ಟ. ಅಕ್ಷರಗಳ ಅರಿವನ್ನಷ್ಟೇ ಮಕ್ಕಳಿಗಿತ್ತರೆ ಸಾಲದು, ಸಂಸ್ಕಾರದ ತಳಹದಿಯ ಮೇಲೆ ಬದುಕು ಕಟ್ಟಿಕೊಡಬೇಕು. ಎಲ್ಲಕ್ಕಿಂತ ಮೊದಲು ಮನೆಮಂದಿಯ ನಡವಳಿಕೆಗಳೂ ಸರಿದಾರಿಯತ್ತ ಹೊರಳಬೇಕು. ತಮ್ಮದೇ ಆರೋಗ್ಯ, ನೆಮ್ಮದಿ, ಬಾಂಧವ್ಯ ಮರೆತು ಸಂಪತ್ತಿನ ಕ್ರೋಡೀಕರಣಕ್ಕೆ ಹಗಲಿರುಳು ಹೊಯ್ದಾಡುವ ಪೋಷಕವರ್ಗದ ಆತ್ಮಾವಲೋಕನಕ್ಕಿದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.