ಬಹುತ್ವಕ್ಕೆ ಮಾರಕವಾಗುತ್ತಿರುವ ಆಕಾಶವಾಣಿಯ ಕುರಿತ ಡಾ. ಬಸವರಾಜ ಸಾದರ ಅವರ ಲೇಖನ (ಪ್ರ.ವಾ., ಏ.17) ಅರ್ಥಪೂರ್ಣವಾಗಿದೆ. ಆಕಾಶವಾಣಿಯು ‘ಜನತಾವಾಣಿ’ ಆಗಬೇಕೇ ವಿನಾ ಕೇವಲ ಸುಶಿಕ್ಷಿತರು, ನಗರವಾಸಿಗಳಿಗಷ್ಟೇ ಸೀಮಿತವಾಗಬಾರದು. ಇವರಲ್ಲಿ ಹೆಚ್ಚಿನವರು ಆಕಾಶವಾಣಿಯನ್ನು ಮನರಂಜನಾ ಮಾಧ್ಯಮ ವಾಗಿ ಬಳಸಿದರೆ, ನಮ್ಮ ಜನಪದರು, ದುಡಿಯುವ ವರ್ಗದವರು, ಹಳ್ಳಿಗರು ಆಕಾಶವಾಣಿಯನ್ನು ಕೇಳುತ್ತಲೇ ಬೆಳೆದವರು, ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡವರು. ಮನೆಯಲ್ಲಿಯೇ ಆಗಲಿ, ಹೊಲದಲ್ಲಿಯೇ ಆಗಲಿ ರೇಡಿಯೊವನ್ನು ಹಚ್ಚಿಟ್ಟುಕೊಂಡೇ ತಮ್ಮ ಕೆಲಸ ಕಾರ್ಯಗಳನ್ನು ಮಾಡುವವರು.
ಭಕ್ತಿಗೀತೆ, ಸಂಪ್ರದಾಯದ ಹಾಡು, ಪ್ರದೇಶ ಸಮಾಚಾರ, ವಾರ್ತೆಗಳು, ಚಿತ್ರಗೀತೆ, ಕೃಷಿರಂಗ, ಕೃಷಿವಾರ್ತೆ, ಭಾವಸಂಗಮ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ರಾತ್ರಿ ಮಲಗುವ ವೇಳೆಗೆ ನಾಟಕ... ಹೀಗೆ ಆಯಾ ಸಮಯ, ಸಂದರ್ಭಕ್ಕೆ ತಕ್ಕಂಥ ಕಾರ್ಯಕ್ರಮಗಳನ್ನು ಅಂದಿನ ಆಕಾಶವಾಣಿ ಬಿತ್ತರಿಸುತ್ತಿತ್ತು. ಕಾರ್ಯಕ್ರಮಗಳ ಹೆಸರು ಗಳೆಲ್ಲವೂ ಜನರ ಅನುಭವ, ಭಾವನೆಗಳನ್ನು ಬಿಂಬಿಸುವಂತೆ ಇರುತ್ತಿದ್ದವು. ಹೀಗಾಗಿ ಆಕಾಶವಾಣಿಯ ಧ್ಯೇಯವಾಕ್ಯ ‘ಬಹುಜನ ಹಿತಾಯ, ಬಹುಜನ ಸುಖಾಯ’ ಕೂಡ ಅದನ್ನೇ ಬಯಸುತ್ತಿತ್ತು. ಆದರೆ ಇಂದು ಹಲವಾರು ಕಾರ್ಯಕ್ರಮಗಳ ಹೆಸರು, ಸಮಯವನ್ನು ಬದಲಿಸಿರುವುದು ಖಂಡಿತವಾಗಿಯೂ ಜನರ ಚಿತ್ತಭಿತ್ತಿಯಿಂದ ಆಕಾಶವಾಣಿಯನ್ನು ಕಿತ್ತೊಗೆಯುವ ಹುನ್ನಾರವೆಂದರೆ ತಪ್ಪಿಲ್ಲ.
- ಡಾ. ರಾಜಶೇಖರ ಸಿ.ಡಿ.,ಹಾವೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.