ADVERTISEMENT

ಭಾನುವಾರ, 4-11-1962

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 19:30 IST
Last Updated 3 ನವೆಂಬರ್ 2012, 19:30 IST
ಭಾನುವಾರ, 4-11-1962
ಭಾನುವಾರ, 4-11-1962   

ಚಿನ್ನದ ಬಾಂಡುಗಳನ್ನು ನೀಡಲು ಕೇಂದ್ರದ ನಿರ್ಧಾರ
ನವದೆಹಲಿ, ನ. 3 - ದೇಶದ ವಿದೇಶಿ ವಿನಿಮಯ ದಾಸ್ತಾನನ್ನು ಹೆಚ್ಚಿಸುವುದಕ್ಕಾಗಿ ಚಿನ್ನಕ್ಕೆ ಸಾಲ ಪತ್ರಗಳನ್ನು ನೀಡಲು ಸರಕಾರ ನಿರ್ಧರಿಸಿದೆಯೆಂದು ಹಣಕಾಸಿನ ಸಚಿವ ಶ್ರೀ ಮೊರಾರ‌್ಜಿ ದೇಸಾಯಿಯವರು ಇಂದು ಪ್ರಕಟಪಡಿಸಿದರು.
 
ಜನ ಉದಾರವಾಗಿ ಈ ಸಾಲಪತ್ರಗಳನ್ನು ಕೊಳ್ಳಬೇಕೆಂದು ಅವರು ಪ್ರಸಾರ ಭಾಷಣವೊಂದರಲ್ಲಿ ರಾಷ್ಟ್ರಕ್ಕೆ ಕರೆಯಿತ್ತರು. ಈ ಪತ್ರಗಳು 15 ವರ್ಷಗಳ ಅವಧಿಯದಾಗಿದ್ದು ಶೇ 6 ಬಡ್ಡಿಯುಳ್ಳದ್ದಾಗಿರುತ್ತದೆ.

ಅಲ್ಲದೆ ಈ ಸಾಲಪತ್ರಗಳಿಗೆ ಸಂಪತ್ತಿನ ತೆರಿಗೆ ಮತ್ತು ಬಂಡವಾಳ ಲಾಭ ತೆರಿಗೆಗಳಿಂದ ವಿನಾಯಿತಿ ಇರುತ್ತದೆ. ಚಿನ್ನದ ಬಾಂಡುಗಳನ್ನು ಕೊಳ್ಳಲು ಚಿನ್ನ ನೀಡಬಯಸುವವರು ಆ ಚಿನ್ನ ಅವರಲ್ಲಿ ಹೇಗೆ ಬಂದಿತೆಂಬುದನ್ನು ವಿವರಿಸಬೇಕಾಗಿಲ್ಲವೆಂದು ಶ್ರೀ ದೇಸಾಯಿಯವರು ಸ್ಪಷ್ಟಪಡಿಸಿದರು.
 

ನಗರದ ಚೀಣೀ ಕುಟುಂಬಗಳಿಗೆ ಪೊಲೀಸ್ ಸೂಚನೆ
ಬೆಂಗಳೂರು, ನ. 3 - ಚೀಣೀ ಬುಡಕಟ್ಟಿಗೆ ಸೇರಿದವರಾಗಿದ್ದು ನಗರದಲ್ಲಿ ವಾಸಿಸುತ್ತಿರುವ 36 ಚೀಣೀ ಕುಟುಂಬಗಳ ಚಲನ ವಲನದ ಮೇಲೆ ಇಂದು ಪೊಲೀಸರು ವಿದೇಶೀಯರ ಕಾನೂನಿನ ಪ್ರಕಾರ ಎಚ್ಚರಿಕೆಯ ನೋಟೀಸುಗಳನ್ನು ಜಾರಿ ಮಾಡಿದರು.

ವಿದೇಶೀಯರ ಕಾನೂನಿನ 3ನೇ ವಿಧಿಯ ಪ್ರಕಾರ ನೀಡಲಾಗಿರುವ ಈ ಎಚ್ಚರಿಕೆಯ ಸೂಚನೆ ಚೀಣೀಯರು ಪೊಲೀಸರಿಗೆ ಮುನ್ಸೂಚನೆ ನೀಡದೆ 24 ಗಂಟೆಗಳಿಗೆ ಮೀರಿದಂತೆ ತಮ್ಮ ಮನೆ ಬಿಟ್ಟು ಹೋಗುವುದನ್ನು ನಿಶೇಧಿಸುತ್ತದೆ.

ಯೋಧರ ಸಹಾಯ ನಿಧಿ
ಬೆಂಗಳೂರು, ನ. 3 - `ಡೆಕ್ಕನ್ ಹೆರಾಲ್ಡ್ - ಪ್ರಜಾವಾಣಿ ಯೋಧರ ಸಹಾಯ ನಿಧಿ~ಗೆ ನವೆಂಬರ್ 3ರ ವರೆಗೆ 73201 ರೂಪಾಯಿ 33 ನಯೇಪೈಸೆ ಸಂಗ್ರಹವಾಗಿದೆ. ನವೆಂಬರ್ 2ರ ವರೆಗೆ 65928 ರೂಪಾಯಿ 29 ನಯೇಪೈಸೆ ಸಂಗ್ರಹವಾಗಿತ್ತು.

ಸೆಕ್ರೆಟೇರಿಯಟ್ ತ್ಯಜಿಸಲು
ಸುಂದರಯ್ಯ, ಜ್ಯೋತಿ ಬಸು,
ಹರಿಕಿಷನ್ ಸಿಂಗ್ ನಿರ್ಧಾರ?

ನವದೆಹಲಿ, ನ. 3 - ಚೀಣಾ ಆಕ್ರಮಣದ ಬಗ್ಗೆ ಅಖಿಲ ಭಾರತ ಕಮ್ಯುನಿಸ್ಟ್ ರಾಷ್ಟ್ರೀಯ ಸಮಿತಿಯು ನಿರೂಪಿಸಿದ ನೀತಿಯ ಪರಿಣಾಮವಾಗಿ ತಾವು ಕಮ್ಯುನಿಸ್ಟ್ ಪಕ್ಷದ ಸೆಕ್ರೆಟೇರಿಯಟ್‌ನಲ್ಲಿ ಮುಂದುವರಿಯಲು ಸಾಧ್ಯವಿಲ್ಲವೆಂದು ಶ್ರೀ ಜ್ಯೋತಿಬಸು, ಶ್ರೀ ಪಿ. ಸುಂದರಯ್ಯ ಮತ್ತು ಶ್ರೀ ಹರಿಕಿಷನ್ ಸಿಂಗ್‌ರವರು ಸೂಚಿಸಿದ್ದಾರೆಂದು ಗೊತ್ತಾಗಿದೆ.

ಕಮ್ಯುನಿಸ್ಟ್ ಪಕ್ಷದಲ್ಲಿ ಈ ಮೂವರೂ ವಾಮಪಂಥಕ್ಕೆ ಸೇರಿದವರು. ಕಮ್ಯುನಿಸ್ಟ್ ಚೀಣಾವನ್ನು ಖಂಡಿಸಬಾರದೆಂಬುದು ಅವರ ಅಭಿಪ್ರಾಯ. ಈ ಮೂವರೂ ಯಾವ ಕಮ್ಯುನಿಸ್ಟ್ ರಾಷ್ಟ್ರವಾಗಲೀ ಆಕ್ರಮಣ ನಡೆಸುವುದಿಲ್ಲವೆಂಬ ಮಾರ್ಕ್ಸ್‌ವಾದವನ್ನು ಎತ್ತಿ ಹಿಡಿಯುವರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.