ADVERTISEMENT

ಭಾನುವಾರ, 5-8-1962

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

`ಕರ್ನಾಟಕ~ ನಿರ್ಣಯದ ಚರ್ಚೆ ಮುಂದಕ್ಕೆ
ಬೆಂಗಳೂರು, ಆ. 4 - ರಾಜ್ಯದ ಹೆಸರು `ಕರ್ನಾಟಕ~ ವೆಂದಾಗಬೇಕೆಂಬ ಖಾಸಗಿ ನಿರ್ಣಯದ ಮೇಲಿನ ತೀರ್ಮಾನವನ್ನು ಇಂದು ವಿಧಾನ ಸಭೆ ಅನಿರೀಕ್ಷಿತವಾಗಿ ಮುಂದಕ್ಕೆ ಹಾಕಿತು.

5 ಗಂಟೆಗಳ ಕಾಲ ಉದ್ವೇಗದ ಚರ್ಚೆ ನಡೆದ ಸಭೆಯಲ್ಲಿ `ಈ ಪ್ರಶ್ನೆಯ ಮೇಲೆ ಅಭಿಪ್ರಾಯ ವ್ಯಕ್ತಪಡಿಸಲು ಸದಸ್ಯರು ಕುತೂಹಲರಾಗಿರುವುದನ್ನು ಕಂಡ~ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಮುಂದಿನ ಅಧಿವೇಶನದಲ್ಲಿ ಇನ್ನೂ ಒಂದು ದಿನ ನಿರ್ಣಯವನ್ನು ಚರ್ಚಿಸಿ ತೀರ್ಮಾನಕ್ಕೆ ಬರಬೇಕೆಂದು ಕಡೇ ಗಳಿಗೆಯಲ್ಲಿ ಮಾಡಿದ ಸಲಹೆಯನ್ನು ಸಭೆ ಸರ್ವಾನುಮತದಿಂದ ಒಪ್ಪಿ ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹೋಯಿತು.

ನಿರ್ಣಯವು ಬಹುಮತದಿಂದ ಅಂಗೀಕೃತವಾಗುವುದೆಂದು ಖಚಿತವಾಗಿದ್ದ `ಕರ್ನಾಟಕ~ ವಾದಿಗಳಲ್ಲಿ ಈ ಅನಿರೀಕ್ಷಿತವಾದ ಕಡೆಗಳಿಗೆಯ ಬೆಳವಣಿಗೆಯ ಕಾರಣ ನಿರಾಶೆ ಉಂಟಾದುದು ವ್ಯಕ್ತವಾಯಿತು.

ಮೈಸೂರು ಎರಡು ರಾಜ್ಯಗಳಾಗಲಿ: 35 ಶಾಸಕರ ನಿರ್ಣಯ
ಬೆಂಗಳೂರು, ಆ. 4 - ತಲಾ ಸುಮಾರು ಒಂದು ಕೋಟಿ ಜನಸಂಖ್ಯೆಯಿರುವ ಎರಡು ರಾಜ್ಯಗಳು ಸ್ಥಾಪಿತವಾಗುವಂತೆ ಮೈಸೂರು ರಾಜ್ಯವನ್ನು ಪುನರ‌್ರಚಿಸಲು ಕೇಂದ್ರ ಸರ್ಕಾರ ತತ್‌ಕ್ಷಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಪ್ರಾರ್ಥಿಸುವ ನಿರ್ಣಯವೊಂದನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಲು ವಿಧಾನ ಸಭೆಯ 35 ಮಂದಿ ಸದಸ್ಯರು ಕಳುಹಿಸಿಕೊಟ್ಟಿದ್ದಾರೆಂದು ತಿಳಿದು ಬಂದಿದೆ.

ಈ 35 ಮಂದಿ `ಮೈಸೂರು ವಾದಿ~ ಗಳಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ಸೇತರ ಸದಸ್ಯರಿದ್ದಾರೆಂದೂ ತಿಳಿದು ಬಂದಿದೆ.

ಶ್ರೀ ಕರುಣಾನಿಧಿಗೆ 3 ತಿಂಗಳ ಕಠಿಣ ಶಿಕ್ಷೆ
ತಂಜಾವೂರು, ಆ. 4 - ಮದ್ರಾಸ್ ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ಉಪನಾಯಕ ಶ್ರೀ ಎಂ. ಕರುಣಾನಿಧಿ ಮತ್ತಿತರ ಮೂವತ್ತು ಜನರಿಗೆ ಇಲ್ಲಿನ ಸಬ್‌ಡಿವಿಜನಲ್ ಮ್ಯಾಜಿಸ್ಟ್ರೇಟರು ಇಂದು ಮೂರು ತಿಂಗಳ ಕಠಿಣ ಶಿಕ್ಷೆಯನ್ನು ವಿಧಿಸಿದರು. ಬೆಲೆ ಏರಿಕೆ ವಿರುದ್ಧ ಡಿ. ಎಂ. ಕೆ. ಪಕ್ಷವು ಇತ್ತೀಚೆಗೆ ನಡೆಸಿದ ಚಳವಳಿ ಸಂಬಂಧದಲ್ಲಿ ಅವರುಗಳನ್ನು ದಸ್ತಗಿರಿ ಮಾಡಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.