`ಆಕ್ರಮಣ ಇರುವವರೆಗೆ ಸಂಧಾನ ಸಾಧ್ಯವಿಲ್ಲ'
ನವದೆಹಲಿ, ಡಿ. 10 - ಭಾರತ ಚೀಣ ಗಡಿಯ ಎಲ್ಲ ಭಾಗಗಳಲ್ಲಿಯೂ ಕಳೆದ ಸೆಪ್ಟೆಂಬರ್ 8ರಂದು ಇದ್ದ ಸ್ಥಾನಕ್ಕೆ ಚೀಣಿಯರು ವಾಪಸಾಗುವವರೆಗೂ ಚೀಣದೊಡನೆ ಭಾರತವು ಗಡಿ ಸಮಸ್ಯೆ ಕುರಿತು ಸಂಧಾನ ಮಾತುಕತೆ ನಡೆಸುವುದು ಸಾಧ್ಯವಿಲ್ಲವೆಂದು ಪ್ರಧಾನಿ ನೆಹರೂ ಇಂದು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು.
`ಭಾರತದ ಪವಿತ್ರ ಭೂಮಿಯನ್ನು ಚೀಣಿ ಆಕ್ರಮಣಕಾರರಿಂದ ವಿಮುಕ್ತವಾಗಿಸಲು ಕಳೆದ ನವೆಂಬರ್ 14ರಂದು ಪಾರ್ಲಿಮೆಂಟ್ ಕೈಗೊಂಡ ಪ್ರತಿಜ್ಞೆಯನ್ನು ನಾವು ಸಾಧಿಸಿಯೇ ತೀರುತ್ತೇವೆ' ಎಂದು ಅವರು ಘೋಷಿಸಿದಾಗ ಸಭೆ ಹರ್ಷೋದ್ಗಾರ ಮಾಡಿತು.
ಕತ್ತಿ ಹಿಡಿದಿರುವ ತಿರುಪತಿ ತಿಮ್ಮಪ್ಪ
ತಿರುಪತಿ, ಡಿ. 10 - ದುಷ್ಟ ಶಕ್ತಿಗಳ ವಿರುದ್ಧ ಹೋರಾಟದಲ್ಲಿ ಶ್ರೀ ದೇಶದ ಜನತೆಯೊಡನೆ ತಿರುಪತಿ ಶ್ರೀ ವೆಂಕಟರಮಣಸ್ವಾಮಿ ಕೂಡ ಇಂದು ಶಸ್ತ್ರ ಹಿಡಿದು ನಿಂತಿದ್ದಾನೆ. ಅಸಂಖ್ಯಾತ ಜನರ ಆರಾಧ್ಯ ದೈವವಾದ ಬಾಲಾಜಿ ಈಗ ಚಿನ್ನದ ಕೋಶದಿಂದ ಹೊರಕ್ಕೆಳೆದ ಚಿನ್ನದ ಕತ್ತಿಯನ್ನು ಬಲಗೈಯಲ್ಲೂ, ಚಿನ್ನದ ಗುರಾಣಿಯೊಂದನ್ನು ಎಡಗೈಯಲ್ಲೂ ಹಿಡಿದು ನಿಂತಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.