ADVERTISEMENT

ಮಂಗಳವಾರ 19–12–1967

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 19:30 IST
Last Updated 18 ಡಿಸೆಂಬರ್ 2017, 19:30 IST

ನಾಲ್ಕನೆ ಯೋಜನೆಯನ್ನು ಕೈಬಿಡುವ ಉದ್ದೇಶವಿಲ್ಲ: ಪ್ರಧಾನಿ ಸ್ಪಷ್ಟನೆ
ನವದೆಹಲಿ, ಡಿ. 18–
ನಾಲ್ಕನೆ ಯೋಜನೆಯನ್ನು ಕೈಬಿಡುವ ಉದ್ದೇಶವೇ ಇಲ್ಲವೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.

ನಾಲ್ಕನೆ ಯೋಜನೆ ಮುಂದೂಡಿಕೆ ಕುರಿತ ಹೇಳಿಕೆಯ ಮೇಲೆ ಎರಡು ದಿನ ನಡೆದ ಚರ್ಚೆಗೆ ಇಂದು ಉತ್ತರ ನೀಡಿದ ಶ್ರೀಮತಿ ಗಾಂಧಿಯವರು ‘ಯೋಜನೆ ವಿರಾಮದ ಉದ್ದೇಶವಲ್ಲ. ಯೋಜನೆ ವಿರಾಮಕ್ಕಿಂತ ಕ್ಷುಲ್ಲಕವಾದದ್ದು ಮತ್ತೊಂದಿಲ್ಲ’ ಎಂದು ಒತ್ತಿ ಹೇಳಿದರು.

ಯು.ಪಿ. ವಿಧಾನಸಭೆ: ಲೋಹಿಯ ಗುಣಗಾನ
ಲಖನೌ, ಡಿ. 18–
ಇಂದು ಸಮಾವೇಶಗೊಂಡ ಉತ್ತರಪ್ರದೇಶದ ವಿಧಾನಸಭೆ ಚಳಿಗಾಲದ ಅಧಿವೇಶನವು ದಿವಂಗತ ಡಾ. ರಾಮಮನೋಹರ ಲೋಹಿಯ ಅವರನ್ನು ಮುಕ್ತ ಕಂಠದಿಂದ ಪ್ರಶಂಸಿಸಿತು.

ADVERTISEMENT

ಹಕ್ಕುಬಾಧ್ಯತೆ ಪ್ರಶ್ನೆ– ನಾಯರ್‌ ವಿರುದ್ಧ ಲಿಮಯೆ ಸೂಚನೆ: ಲೋಕಸಭೆಯಲ್ಲಿ ಬಿರುಸಿನ ಚರ್ಚೆ, ಗೊಂದಲ
ನವದೆಹಲಿ, ಡಿ. 18–
ಶ್ರೀ ಎನ್‌. ಶ್ರೀಕಂಠನ್‌ ನಾಯರ್‌ (ಆರ್‌.ಎಸ್‌.ಪಿ.) ಅವರ ವಿರುದ್ಧ ಶ್ರೀ ಮಧುಲಿಮಯೆ (ಎಸ್‌.ಎಸ್‌.ಪಿ.) ಅವರು ಮಂಡಿಸಿದ್ದ ಹಕ್ಕುಬಾಧ್ಯತಾ ಸೂಚನೆಯ ಬಗ್ಗೆ ಇಂದು ಲೋಕಸಭೆಯಲ್ಲಿ ಚರ್ಚೆಗಳು ನಡೆದಾಗ ಕೋಪತಾಪಗಳ ಪ್ರದರ್ಶನ ಹಾಗೂ ಬಿಸಿಮಾತುಗಳ ವಿನಿಮಯವಾಯಿತು.

ಇಂಗ್ಲಿಷ್‌ ವಿರೋಧಿ ಮತ ಪ್ರದರ್ಶಕರ ಮೇಲೆ ಗೋಳಿಬಾರ್‌
ಪಟ್ನ, ಡಿ. 18–
ಚಪ್ರದ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ ಕಟ್ಟಡಕ್ಕೆ ಹೋಗಿ, ಇಂಗ್ಲೀಷ್‌ ಮತ್ತು ಹಿಂದಿ ಎರಡರಲ್ಲೂ ಇರುವ ನಾಮಫಲಕವನ್ನು ಕಿತ್ತುಹಾಕಬೇಕೆಂದು ಒತ್ತಾಯ ಮಾಡಿದ ಇಂಗ್ಲೀಷ್‌ ವಿರೋಧಿ ಮತಪ್ರದರ್ಶಕರ ಮೇಲೆ ಸಶಸ್ತ್ರದಳ ಇಂದು ಗೋಳಿಬಾರು ನಡೆಸಿತು. ಇಬ್ಬರು ಗಾಯಗೊಂಡರು.

ದೆಹಲಿಯಿಂದ ಬಂದ ಮೇಲೆ ಗೃಹಸಚಿವರ ರಾಜೀನಾಮೆ ಬಗ್ಗೆ ತೀರ್ಮಾನ: ಮುಖ್ಯಮಂತ್ರಿ
ಬೆಂಗಳೂರು, ಡಿ. 18–
ಗೃಹಸಚಿವರ ರಾಜೀನಾಮೆ ‘ಪ್ರಮುಖ ವಿಷಯವಾದ’ ಕಾರಣ, ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಅವರು ಡಿಸೆಂಬರ್‌ 21 ರಂದು ದೆಹಲಿಯಿಂದ ನಗರಕ್ಕೆ ಹಿಂದಿರುಗಿದ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ರಾಜ್ಯದ 68–69ನೇ ಸಾಲಿನ ಯೋಜನೆ ಕುರಿತು ಸಮಾಲೋಚಿಸಲು ಮಧ್ಯಾಹ್ನ ವಿಮಾನದಲ್ಲಿ ದೆಹಲಿಗೆ ತೆರಳುವ ಮುನ್ನ ಮುಖ್ಯಮಂತ್ರಿಗಳು ಈ ವಿಷಯವನ್ನು ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.