ಮತ್ತಷ್ಟು ತೆರಿಗೆಗೆ ರಾಜ್ಯಗಳ ನಕಾರ
ನವದೆಹಲಿ, ಮೇ 17– ನಾಲ್ಕನೆ ಪಂಚವಾರ್ಷಿಕ ಯೋಜನೆಯಲ್ಲಿ ರಾಷ್ಟ್ರೀಯ ಆದಾಯದ ಏರಿಕೆಯ ಪ್ರಮಾಣವನ್ನು ಶೇಕಡಾ 6ಕ್ಕೆ ಪ್ರತಿಯಾಗಿ 5 ರಷ್ಟನ್ನು ಅಂತಿಮವಾಗಿ ಒಪ್ಪಿಕೊಳ್ಳುವ ಸಂಭವವಿದೆ.
ಎರಡು ದಿನಗಳ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಆರಂಭಾಧಿವೇಶನದಿಂದ ಇದು ಇಂದು ಸುಸ್ಪಷ್ಟವಾಯಿತು.
ನಾಲ್ಕನೆ ಯೋಜನೆಯನ್ನು ಜಾರಿಗೆ ತರುವುದಕ್ಕೆ ತತ್ಸಮಾನವಾದ ಸಂಪನ್ಮೂಲವನ್ನು ಕಲೆ ಹಾಕುವ ಸಾಧ್ಯತೆ ಬಗ್ಗೆ ಮುಖ್ಯಮಂತ್ರಿಗಳು ತೀವ್ರ ಸಂಶಯ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಜೆ.ಎಚ್. ಪಟೇಲ್ ದಂಪತಿ ಬಂಧನ
ಶಿವಮೊಗ್ಗ, ಮೇ 17– ಶಿವಮೊಗ್ಗ ನಗರದಲ್ಲಿ ಎಸ್.ಎಸ್.ಪಿ. ಸತ್ಯಾಗ್ರಹದ ಮೂರನೇ ದಿನವಾದ ಇಂದು ಲೋಕಸಭಾ ಸದಸ್ಯ ಶ್ರೀ ಜೆ.ಎಚ್. ಪಟೇಲ್, ಅವರ ಪತ್ನಿ ಮತ್ತು ಇತರ 20 ಮಂದಿ ಸತ್ಯಾಗ್ರಹಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸತ್ಯಾಗ್ರಹ ನಡೆಸಿ, ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಶ್ರೀ ಜಿ.ವಿ. ವಿಶ್ವನಾಥ್ ಅವರನ್ನು ಸ್ಥಾನ ತ್ಯಜಿಸಲು ಶ್ರೀ ಪಟೇಲ್ ಒತ್ತಾಯಪಡಿಸಿದರು.
ಕಡೆಂಗೋಡ್ಲು ಶಂಕರ ಭಟ್ಟ ಅವರ ನಿಧನ
ಮಂಗಳೂರು, ಮೇ 17– ಕರ್ನಾಟಕದ ಹಿರಿಯ ಪತ್ರಿಕೋದ್ಯಮಿ, ಸಾಹಿತಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕಡೆಂಗೋಡ್ಲು ಶಂಕರ ಭಟ್ಟರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಇಲ್ಲಿಗೆ 40 ಮೈಲಿ ದೂರದ ತಮ್ಮ ಸ್ವಗ್ರಾಮ ಪೆರುವಾಯಿಯಲ್ಲಿ ನಿಧನ ಹೊಂದಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.