ADVERTISEMENT

ಸೋಮವಾರ, 25–8–1969

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 19:50 IST
Last Updated 24 ಆಗಸ್ಟ್ 2019, 19:50 IST
   

ಅಸಮತೆ ನಿವಾರಣೆ, ಸಾಮಾಜಿಕ ಗುರಿ ಈಡೇರಿಕೆಗೆ ಗಿರಿ ಕರೆ

ನವದೆಹಲಿ, ಆ. 24– ರಾಷ್ಟ್ರದಲ್ಲಿ ಇಂದು ಮಾನವ–ಮಾನವನ ನಡುವೆ ತಾನೇ ತಾನಾಗಿ ಅಧಿಕವಾಗುತ್ತಿರುವ ಅಸಮಾನತೆಯ ಅಂತರವನ್ನು ತೊಡದು ಹಾಕಬೇಕಲ್ಲದೆ ಸತತ ಪರಿಶ್ರಮ ಹಾಗೂ ಶಿಸ್ತಿನ ನಡವಳಿಕೆಗಳ ಸಹಾಯದಿಂದ ಇರಿಸಿಕೊಂಡಿರುವ ಸಾಮಾಜಿಕ–ಆರ್ಥಿಕ ಗುರಿಗಳನ್ನೆಲ್ಲಾ ಈಡೇರಿಸಿಕೊಳ್ಳಬೇಕೆಂದು ನೂತನ ರಾಷ್ಟ್ರಪತಿ ವಿ.ವಿ. ಗಿರಿ ಪಾರ್ಲಿಮೆಂಟ್‌ನಲ್ಲಿ ತಿಳಿಸಿದರು.

ಆರ್ಥಿಕ ಆಯೋಗದ ಶಿಫಾರಸಿನಿಂದ ಮೈಸೂರು ಪಾಲಿನಲ್ಲಿ ಖೋತಾ

ADVERTISEMENT

ನವದೆಹಲಿ, ಆ. 24– ಹಿಂದುಳಿದ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗುವಂತೆ ವರಮಾನ ತರುವ ರಾಜ್ಯಗಳ ಪಾಲಿನಲ್ಲಿ ಜನಸಂಖ್ಯೆ ಆಧಾರದ ಮೇಲೆ ಶೇ. 90ರಷ್ಟನ್ನು ಹಂಚಬೇಕೆಂದು ಐದನೇ ಹಣಕಾಸು ಆಯೋಗದ ಶಿಫಾರಸು ಮಾಡಿದೆ. ಮೈಸೂರು ರಾಜ್ಯಕ್ಕೆ 4ನೇ ಆಯೋಗದ ಅವಧಿಯಲ್ಲಿ ದೊರತಿದ್ದಕ್ಕಿಂತ 18 ಕೋಟಿ ರೂ. ಕಡಿಮೆಯಾಗಿ, 197.42 ಕೋಟಿ ರೂ.ಗಳಿಗೆ ಇಳಿಯುತ್ತದೆ.

ಸಿಂಡಿಕೇಟ್–ಇಂದಿರಾ ನಡುವೆಕಾರ್ಯಸಮಿತಿಯಲ್ಲಿ ಅತಿ ಸೂಕ್ಷ್ಮ ಬಲಾಬಲ

ನವದೆಹಲಿ, ಆ. 24– ಸಿಂಡಿಕೇಟ್ ಮತ್ತು ಪ್ರಧಾನಿ ನಡುವೆ ರಾಜಿಗೆ ಗೃಹ ಸಚಿವ ಶ್ರೀ ಚವಾಣ್ ಮತ್ತು ರಾಜಸ್ತಾನದ ಮುಖ್ಯಮಂತ್ರಿ ಶ್ರೀ ಮೋಹನ್‌ಲಾಲ್ ಸುಖಾಡಿಯಾ ಅವರು ಇಂದು ತಮ್ಮ ಪ್ರಯತ್ನ ಮುಂದುವರೆಸಿದರಾದರೂ ಅವು ಯಶಸ್ವಿಯಾಗುವ ಸಂಭವಗಳು ಅಷ್ಟೇನೂ ಆಶಾದಾಯಕವಾಗಿಲ್ಲ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ನಾಳೆ ಸಭೆ ಸೇರುತ್ತದೆ.

ತನ್ನ ಅಭಿಪ್ರಾಯದ ಪರ ಕಾರ್ಯ ಸಮಿತಿಯಲ್ಲಿ ಬಹುಮಂದಿ ಸದಸ್ಯರ ಬೆಂಬಲ ಸಂಘಟಿಸಿಕೊಳ್ಳಲು ಸಿಂಡಿಕೇಟ್‌ಗೆ ಸಾಧ್ಯವಾದೀತೇ ಎಂಬುದು ಇಂದು ಸಂಜೆಯವರೆಗೆ ಖಚಿತಪಟ್ಟಿರಲಿಲ್ಲ. ಒಂದು ವೇಳೆ ಶ್ರೀಮತಿ ಗಾಂಧಿ ವಿರುದ್ಧ ಬಹುಮತ ವ್ಯಕ್ತಪಟ್ಟರೂ 21 ಜನ ಸದಸ್ಯರ ಸಮಿತಿಯಲ್ಲಿ ಅದಕ್ಕೆ ಅಗತ್ಯವಾದುದಕ್ಕಿಂತ ಒಬ್ಬಿಬ್ಬರು ಸದಸ್ಯರ ಮತಗಳು ಮಾತ್ರ ಹೆಚ್ಚಾಗಿ ಪ್ರಾಪ್ತವಾಗಬಹುದು. ಆದ್ದರಿಂದ ಸಿಂಡಿಕೇಟ್ ವಿಜಯ ಕೇವಲ ಪೊಳ್ಳಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.