ADVERTISEMENT

ಸೋಮವಾರ, 6–5–1968

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 5 ಮೇ 2018, 18:37 IST
Last Updated 5 ಮೇ 2018, 18:37 IST

ಚೀನದಿಂದ ಬಂಗಾಳಕೊಲ್ಲಿ ಕಡೆ ರಾಕೆಟ್ ಪ್ರಯೋಗ: ಎಂ.ಪಿ.ಗಳ ಆತಂಕ

ನವದೆಹಲಿ, ಮೇ 5– ಚೀನವು ಸಿಂಕಿಯಾಂಗ್‌ನಿಂದ ಬಂಗಾಳಕೊಲ್ಲಿಯತ್ತ ರಾಕೆಟ್‌ಗಳನ್ನು ಹಾರಿಸಿದೆಯೆಂದೂ ಆ ರಾಕೆಟ್‌ಗಳ ಲೋಹದ ಚೂರುಗಳು ನೇಪಾಳದ ಪ್ರದೇಶದಲ್ಲಿ ಬಿದ್ದಿವೆಯೆಂದೂ ತಿಳಿಸುವ ವರದಿಗಳಿಂದ ಪಾರ್ಲಿಮೆಂಟಿನ ಸದಸ್ಯರಿಗೆ ತೀವ್ರ ಆತಂಕವುಂಟಾಗಿದೆ.

ಈ ವಿಷಯದ ಬಗ್ಗೆ ಸರ್ಕಾರಕ್ಕೆ ಏನಾದರೂ ಸುದ್ದಿ ಬಂದಿದೆಯೇ ಎನ್ನುವುದನ್ನು ಕಂಡುಕೊಳ್ಳಲು ಸದಸ್ಯರು ನಾಳೆ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವ ಸಂಭವವಿದೆ.

ADVERTISEMENT

**

ಲೋಕವೈದ್ಯ’ ಬುದ್ಧನ ಜಯಂತಿ: ಸಕಲವಾರ ಗ್ರಾಮದಲ್ಲಿ ಆಸ್ಪತ್ರೆ ಆರಂಭ

ಬೆಂಗಳೂರು, ಮೇ 5– ಲೋಕದ ‘ರೋಗ ರುಜಿನಗಳನ್ನು ಕಂಡು, ನೊಂದು ಅವನ್ನು ನೀಗಲು ಸರ್ವತ್ಯಾಗ ಮಾಡಿದ ಭಗವಾನ್ ಬುದ್ಧನ 2512ನೇ ಜನ್ಮದಿನ ಆಚರಣೆ ‘ಚಿಕಿತ್ಸಾಲಯ’ ಉದ್ಘಾಟನೆಯಿಂದ ಇಂದು ಆರಂಭವಾಯಿತು.

ಮಹಾಬೋಧಿ ಸಂಸ್ಥೆಯ ಸೇವಾಕ್ಷೇತ್ರಗಳಲ್ಲಿ ಒಂದಾದ, ನಗರದಿಂದ ಸುಮಾರು 13 ಮೈಲಿ ದೂರದಲ್ಲಿರುವ ಸಕಲವಾರದಲ್ಲಿ ಗ್ರಾಮಾಂತರ ಆಸ್ಪತ್ರೆ ಕಟ್ಟಡವನ್ನು ರಾಜ್ಯಪಾಲ ಶ್ರೀ ಜಿ.ಎಸ್. ಪಾಠಕ್‌ರವರು ಉದ್ಘಾಟಿಸುವ ಮೂಲಕ ‘ಮಹಾಬೋಧಿ ಸಪ್ತಾಹ’ವನ್ನು ಉದ್ಘಾಟಿಸಿದರು.

**

ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು...

ಕೊಟ್ಟಾಯಂ, ಮೇ 5– ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರ ಯಶಸ್ಸಿಗೆ ಇಬ್ಬರು ಮಹಿಳೆಯರೇ ಕಾರಣ.

‘ನನ್ನ ಇಂದಿನ ವ್ಯಕ್ತಿತ್ವಕ್ಕೆ ನನ್ನ ತಾಯಿಯ ಉಪದೇಶ ಮತ್ತು ನನ್ನ ಪತ್ನಿಯ ಹೃತ್ಪೂರ್ವಕ ಸಹಕಾರಗಳೇ ಕಾರಣ’ ಎನ್ನುತ್ತಾರೆ ಅವರು.

‘ಸದ್ಯಕ್ಕೆ ನಾನು ನಾಚಿಕೆ ಸ್ವಭಾವದ ವ್ಯಕ್ತಿ’ ಎಂದು ಕರೆದುಕೊಂಡ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ಕೇರಳ ವಿದ್ಯಾವಂತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ, ಮಹಿಳಾ ಸಮ್ಮೇಳನದಲ್ಲಿ ಭಾಷಣ ಮಾಡಲು ‘ನನಗಿರುವ ಏಕೈಕ ಅರ್ಹತೆ ಎಂದರೆ ನನಗೆ ಪುತ್ರರಿಗಿಂತ ಪುತ್ರಿಯರೇ ಹೆಚ್ಚಾಗಿರುವುದು’ ಎಂದರು.

**

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ 10 ನಾಮಪತ್ರ

ಬೆಂಗಳೂರು, ಮೇ 5– ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಒಟ್ಟು 10 ಮಂದಿಯ ಹೆಸರುಗಳು ಸೂಚಿಸಲ್ಪಟ್ಟಿವೆ. ಬೆಂಗಳೂರು ನಗರದಿಂದ ಪರಿಷತ್ತಿನ ಕಾರ್ಯಕಾರಿ ಸಮಿತಿಯ 3 ಸ್ಥಾನಗಳಿಗೆ ನಡೆಯುವ ಚುನಾವ ಣೆಗೆ ಒಟ್ಟು 18 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.