ಇಂದು ವಿಶೇಷ ಅಧಿವೇಶನ– ದಳ ಹಾಜರಿ ಅನಿಶ್ಚಿತ
ಬೆಂಗಳೂರು, ಸೆ. 18– ವಿರೋಧ ಪಕ್ಷಗಳ ಅಸಹಕಾರ, ಖಂಡನೆ, ಕಟು ಟೀಕೆ, ಬಹಿಷ್ಕಾರ ಬೆದರಿಕೆಗಳ ನಡುವೆ ವಿಧಾನ ಮಂಡಲದ ಎರಡು ದಿನಗಳ ವಿಶೇಷ ಅಧಿವೇಶನ ನಾಳೆ ಆರಂಭವಾಗಲಿದ್ದು, ಈಗಾಗಲೇ ಮಂಡಿಸಿರುವ ಶೇ 80ರ ಪ್ರಮಾಣದ ಉದ್ದೇಶಿತ ಮೀಸಲಾತಿ ಮಸೂದೆಗೆ ಅಂಗೀಕಾರ ಪಡೆಯುವುದು ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರಕ್ಕೆ ಪ್ರತಿಷ್ಠೆ ಪ್ರಶ್ನೆಯಾಗಿದೆ.
ಈ ಮಧ್ಯೆ, ಪ್ರಮುಖ ವಿರೋಧ ಪಕ್ಷವಾದ ಜನತಾ ದಳದವರು ಅಧಿವೇಶನ ದಲ್ಲಿ ಭಾಗವಹಿಸುವುದರ ಬಗ್ಗೆ ಇನ್ನೂ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿಲ್ಲ. ಬಿಜೆಪಿ ಬಹಿಷ್ಕರಿಸುವ ಸಾಧ್ಯತೆಗಳಿವೆ. ಕರ್ನಾಟಕ ರೈತ ಸಂಘದ ಮುಖಂಡ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ಸದನದಲ್ಲಿ ಪ್ರತಿಭಟಿಸುವ ನಿಲುವನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ.
ಉಳಿದ ಪಕ್ಷಗಳು ಯಾವ ನಿಲುವನ್ನು ತಳೆಯುತ್ತವೆ ಎಂಬುದು ಅಸ್ಪಷ್ಟ.
ಗಂಗೂಬಾಯಿಗೆ ಶಂಕರ್ದೇವ್ ಪ್ರಶಸ್ತಿ
ಗುವಾಹಟಿ, ಸೆ. 18 (ಯುಎನ್ಐ)– ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರು ಪ್ರತಿಷ್ಠಿತ ‘ಶಂಕರ್ ದೇವ್ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಪ್ರಸಾದ್ ಬರುವ ಅವರೂ ಈ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಒಂದು ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ಚಿನ್ನದ ಪದಕ ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.