ADVERTISEMENT

ಸೋಮವಾರ, 2–1–1995

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 20:08 IST
Last Updated 1 ಜನವರಿ 2020, 20:08 IST

ವಿಶ್ವ ವಾಣಿಜ್ಯ ಸಂಘಟನೆ ಆರಂಭ
ನವದೆಹಲಿ, ಜ. 1 (ಪಿಟಿಐ)–
ಜಾಗತಿಕವಾಗಿ ಮುಕ್ತ ವ್ಯಾಪಾರ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ಮಹತ್ವಾಕಾಂಕ್ಷೆಯೊಡನೆ ‘ವಿಶ್ವ ವಾಣಿಜ್ಯ ಸಂಘಟನೆ’ (ಡಬ್ಲ್ಯುಟಿಒ) ನೂತನ ವರ್ಷದ ದಿನವಾದ ಇಂದು ಜಿನೀವಾದಲ್ಲಿ ಕಾರ್ಯಾರಂಭ ಮಾಡಿತು.

ಗ್ಯಾಟ್‌ನ (ಸುಂಕ ಮತ್ತು ವ್ಯಾಪಾರ ಕುರಿತ ಸಾಮಾನ್ಯ ಒಪ್ಪಂದ) ಸ್ಥಾನದಲ್ಲಿ ಜಾಗತಿಕ ವಾಣಿಜ್ಯ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಳ್ಳಲಿರುವ ಈ ಹೊಸ ಸಂಘಟನೆಗೆ ಭಾರತ ಸೇರಿದಂತೆ 85 ಸಂಸ್ಥಾಪಕ ದೇಶಗಳ ಬೆಂಬಲ ಲಭಿಸಿದೆ.

ರೈಲು ಅಪಘಾತ: ಸತ್ತವರ ಪೈಕಿ ಕಾರ್ಮಿಕ ನಾಯಕ ಸುಂದರೇಶ್
ಬೆಂಗಳೂರು, ಜ. 1–
ಯಲಹಂಕ ಬಳಿ ಶನಿವಾರ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮಡಿದ ಎಂಟು ಮಂದಿಯಲ್ಲಿ ರಾಜ್ಯ ಸಿಪಿಐ ಘಟಕದ ಪ್ರಮುಖ ನಾಯಕರಾದ ಬಿ.ಕೆ. ಸುಂದರೇಶ್ (38) ಅವರೂ ಸೇರಿದ್ದಾರೆ. ಗಾಯಗೊಂಡಿರುವವರು ಗುಣಮುಖರಾಗುತ್ತಿದ್ದಾರೆ.

ADVERTISEMENT

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ ಒಕ್ಕೂಟದ ಕಾರ್ಯದರ್ಶಿಯೂ ಆಗಿದ್ದ ಸುಂದರೇಶ್, ಮುಂಬೈನಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಈ ನತದೃಷ್ಟ ರೈಲಿನಲ್ಲಿ ಬೆಂಗಳೂರಿಗೆ ಹಿಂತಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಪ್ರಾಣ ತೆತ್ತರು.

ಆಂಧ್ರ: ರೂ. 2ಕ್ಕೆ ಕೆ.ಜಿ. ಅಕ್ಕಿ ವಿತರಿಸುವ ಯೋಜನೆ ಉದ್ಘಾಟನೆ
ಹೈದರಾಬಾದ್‌, ಜ. 1 (ಪಿಟಿಐ)–
ಇಲ್ಲಿನ ಬೃಹತ್ ಕೊಳೆಗೇರಿ ಪ್ರದೇಶವಾದ ಅಡ್ಡಗುಟ್ಟದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು ಎರಡು ರೂಪಾಯಿಗೆ ಕೆ.ಜಿ. ಅಕ್ಕಿ ಒದಗಿಸುವ ತಮ್ಮ ಯೋಜನೆಯನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.