ಕೇಸರಿಗೆ ಹೈಕೋರ್ಟ್ ನೋಟಿಸ್ ಜಾರಿ
ನವದೆಹಲಿ, ಏ. 25 (ಪಿಟಿಐ)– ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದಾಗ ವಿದೇಶಿ ವಂತಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ವಿದೇಶಿ ವಂತಿಗೆಯಾಗಿ ಜರ್ಮನಿಯಿಂದ ಮೂರು ಕೋಟಿ ರೂಪಾಯಿ ಸ್ವೀಕರಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಪಕ್ಷದ ಈಗಿನ ಅಧ್ಯಕ್ಷ ಸೀತಾರಾಂ ಕೇಸರಿ ಅವರಿಗೆ ದೆಹಲಿ ಹೈಕೋರ್ಟ್ ಇಂದು ಷೋಕಾಸು ನೋಟಿಸು ಜಾರಿ ಮಾಡಿದೆ.
‘ವಚನದೀಪ್ತಿ’ ಮುಟ್ಟುಗೋಲು
ಬೆಂಗಳೂರು, ಏ. 25– ಮಾತೆ ಮಹಾದೇವಿ ಅವರು ಸಂಪಾದಿಸಿರುವ ವಿವಾದಾತ್ಮಕ ‘ಬಸವ ವಚನ ದೀಪ್ತಿ’ ಕೃತಿಯ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರ ಇಂದು ಆದೇಶ ಹೊರಡಿಸಿದೆ.
ಈ ಕೃತಿಯಲ್ಲಿ ಬಸವಣ್ಣನವರ ವಚನಗಳ ಅಂಕಿತವಾದ ‘ಕೂಡಲ ಸಂಗಮದೇವ’ಕ್ಕೆ ಬದಲಾಗಿ ‘ಲಿಂಗದೇವ’ ಎಂಬ ಕಲ್ಪಿತ ಅಂಕಿತ ವನ್ನು ಹಾಕಿರುವುದು ಐಪಿಸಿ ಸೆಕ್ಷನ್ 153 ಎ ಪ್ರಕಾರ ವೀರಶೈವರ ಹಾಗೂ ಬಸವಾನು ಯಾಯಿಗಳ ಧಾರ್ಮಿಕ ಭಾವನೆಗಳನ್ನು ದುರುದ್ದೇಶದಿಂದ ಅವಮಾನಿಸಿದಂತಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೆ ವೀರಶೈವರು ಹಾಗೂ ಬಸವಾನು ಯಾಯಿಗಳಲ್ಲಿ ದ್ವೇಷವನ್ನು ಬೆಳೆಸಲು ಎಡೆ ಮಾಡಿರುವುದರಿಂದಾಗಿ ಉಂಟಾಗಿರುವ ಉದ್ರಿಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಕೃತಿಯ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.