ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
ನವದೆಹಲಿ ಮಾರ್ಚಿ. 28 (ಯುಎನ್ಐ)– ಬಿಹಾರದಲ್ಲಿ ಇಂದು ರಾತ್ರಿಯಿಂದ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲಾಗಿದೆ. ಅಲ್ಲಿನ ಕೆಲವು ಕ್ಷೇತ್ರಗಳ ವಿಧಾನಸಭೆ ಚುನಾವಣೆಯನ್ನು ಪದೇ ಪದೇ ಮುಂದೂಡಿದ್ದರಿಂದ ಉಂಟಾಗಲಿದ್ದ ಸಂವೈಧಾನಿಕ ಬಿಕ್ಕಟ್ಟನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಇಂದು ಎರಡು ಬಾರಿ ಸೇರಿದ ಕೇಂದ್ರ ಸಚಿವ ಸಂಪುಟ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಅವರು ಬಿಹಾರವನ್ನು ಕೇಂದ್ರದ ಆಡಳಿತಕ್ಕೆ ಒಳಪಡಿಸುವ ಆಜ್ಞೆಯನ್ನು ಜಾರಿ ಮಾಡಿದರು. ಮಾರ್ಚಿ 31ರೊಳಗೆ ರಾಜ್ಯದ ಆರ್ಥಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಲೇಖಾನುದಾನ ಪಡೆಯಲು ಸಂಸತ್ತಿಗೆ ಅನುವಾಗುವಂತೆ ಮಾಡಲು ರಾಷ್ಟ್ರಪತಿ ಆಡಳಿತ ಜಾರಿ ಅನಿವಾರ್ಯವಾಗಿತ್ತು. ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತಿರುವುದು ಇದು ಆರನೇ ಬಾರಿ.
ಖಾಸಗಿ ಬಸ್ ಮುಷ್ಕರ: ಪ್ರಯಾಣಿಕರಿಗೆ ತೊಂದರೆ
ಬೆಂಗಳೂರು, ಮಾರ್ಚಿ 28– ಪ್ರಸಕ್ತ ಬಜೆಟ್ನಲ್ಲಿ ತ್ರೈಮಾಸಿಕ ತೆರಿಗೆ ಹಾಗೂ ಬಿಡಿ ಭಾಗಗಳ ತೆರಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರತಿಭಟಿಸಿ ಖಾಸಗಿ ಬಸ್ ಮಾಲೀಕರು ಇಂದಿನಿಂದ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಹಲವಾರು ಜಿಲ್ಲೆಗಳಲ್ಲಿ ಪ್ರಯಾಣಿಕರಿಗೆ ತೊಂದರೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.