ವ್ಯಾಪಕ ಹಿಂಸಾಚಾರ ಕಂಡ ಬಿಹಾರ ಬಂದ್: ಗಾಳಿಯಲ್ಲಿ ಗುಂಡು
ಪಟ್ನಾ, ಮೇ 3 (ಪಿಟಿಐ, ಯುಎನ್ಐ)– ಮೇವು ಹಗರಣದಲ್ಲಿ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ವಿಚಾರಣೆಗೆ ಗುರಿಪಡಿಸುವ ಸಿಬಿಐ ನಿರ್ಧಾರದ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ– ಸಮತಾ ಪಕ್ಷ ಕರೆ ನೀಡಿದ್ದ ಬಂದ್ ದಿನವಾದ ಇಂದು ಕೆಲವೆಡೆ ಹಿಂಸಾಚಾರ, ಗುಂಪು ಘರ್ಷಣೆ, ಲಾಠಿ ಪ್ರಹಾರ ನಡೆದಿದೆ.
ರಾಜ್ಯದಾದ್ಯಂತ ನಡೆದ ವ್ಯಾಪಕ ಹಿಂಸಾಚಾರದಲ್ಲಿ ಕನಿಷ್ಠ 155 ಮಂದಿ ಗಾಯಗೊಂಡಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುಶೀಲ್ ಕುಮಾರ್ ಮೋದಿ, ಬಿಜೆಪಿ ನಾಯಕ ಯಶವಂತ್ ಸಿನ್ಹಾ, ಸಮತಾ ಪಕ್ಷದ ನೇತಾರ ನಿತೀಶ್ ಕುಮಾರ್ ಸೇರಿದಂತೆ ಒಟ್ಟು 1200 ಬಂಧಿಸಲಾಗಿದೆ ಎಂದು ಅಧಿಕೃತ
ಮೂಲಗಳು ತಿಳಿಸಿವೆ.
ಗಾಳಿಯಲ್ಲಿ ಗುಂಡು: ಖಗರಿಯದಲ್ಲಿ ದೊಂಬಿಯಲ್ಲಿ ತೊಡಗಿದ್ದ ಬಂದ್ ಬೆಂಬಲಿಗರ ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಎಂದು ರಾಜ್ಯ ಗೃಹಖಾತೆಯ ಕಾರ್ಯದರ್ಶಿ ಡಿ.ಪಿ.ಮಹೇಶ್ವರಿ ಅವರು ತಿಳಿಸಿದ್ದಾರೆ.
ಭಿನ್ನಮತೀಯರಿಗೆ ಪಟೇಲ್ ತರಾಟೆ
ನವದೆಹಲಿ, ಮೇ 3– ‘ಕೆಲವು ಶಾಸಕರು ಅನವಶ್ಯಕವಾಗಿ ಒಂದು ಕಡೆ ಸೇರಿ ತಿನ್ನುವುದು ಮಾತನಾಡುವುದನ್ನು ಬಿಟ್ಟರೆ ಅವರಿಗೆ ಬೇರೇನೂ ಕೆಲಸವಿಲ್ಲ’.
ಕರ್ನಾಟಕ ಜನತಾದಳದ ಭಿನ್ನಮತೀಯ ಶಾಸಕರು ಶುಕ್ರವಾರ ಬೆಂಗಳೂರಿನಲ್ಲಿ ನಡೆಸಿದ ಸಭೆಯ ಬಗೆಗೆ ಇಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಉತ್ತರಿಸಿದ ಬಗೆ ಇದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.