ಶಾಸಕರ ಹಕ್ಕುಬಾಧ್ಯತೆ– ಸ್ಪಷ್ಟನಿಲುವಿಗೆ ಒತ್ತಾಯಿಸಿ ಧರಣಿ
ಬೆಂಗಳೂರು, ಏ. 8– ಶಾಸಕರುಗಳ ಹಕ್ಕುಬಾಧ್ಯತೆ ಹಾಗೂ ಸ್ಥಾನಮಾನಗಳ ಬಗೆಗೆ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯಂತೆ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ದಿಢೀರ್ ಧರಣಿ ಹೂಡಿದುದರಿಂದ ಗೊಂದಲ ಉಂಟಾಗಿ ಅನಿವಾರ್ಯವಾಗಿ ಇಡೀ ದಿನದ ಕಲಾಪ ರದ್ದುಪಡಿಸಿ ಸದನವನ್ನು ಮುಂದೂಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಉತ್ತರ ಆರಂಭಿಸುವ ಹಂತದಲ್ಲಿದ್ದರು. ಆಗ ಶಾಸಕರ ಹಕ್ಕುಗಳ ಬಗೆಗೆ ನಿರ್ಧಾರ ಪ್ರಕಟಿಸಿ ನಂತರ ಉತ್ತರಿಸುವಂತೆ ಬಂದ ಒತ್ತಾಯ ನಿರಾಕರಿಸಿದಾಗ ಬಿಜೆಪಿ, ಕಾಂಗ್ರೆಸ್, ಕನ್ನಡ ಚಳವಳಿ, ಸಿಪಿಎಂ, ಇಂಡಿಯನ್ ನ್ಯಾಷನಲ್ ಮುಸ್ಲಿಂ ಲೀಗ್ ಮತ್ತು ಬಿಎಸ್ಪಿ ಸದಸ್ಯರು ಧರಣಿ ಆರಂಭಿಸಿದರು.
ಮಣ ಭಾರದ ಬಂದೂಕು...ಇನ್ನೆಲ್ಲಿ ಶಾಂತಿಪಾಲನೆ?
ಬೆಂಗಳೂರು, ಏ. 8– ಹೈದರಾಲಿ– ಟಿಪ್ಪು ಕಾಲದ ಮಣಭಾರದ ಬಂದೂಕು, ಗುಂಡು ಹಾರಿಸಿದರೆ ಮೂರು ಅಡಿ ಹಾರೋಲ್ಲ... ಜತೆಗೆ ಬಿದಿರಿನ ಬೆತ್ತ... ಹೀಗಿದ್ದರೆ ಇನ್ನೆಲ್ಲಿ ಬಂತು ಶಾಂತಿಪಾಲನೆ!
ರಾಜ್ಯದ ಪೊಲೀಸ್ ವ್ಯವಸ್ಥೆಯ ಚಿತ್ರ ಬಿಡಿಸಿಟ್ಟು ಅದರ ಸ್ಥಿತಿಗತಿಯ ಬಗ್ಗೆ ತಮ್ಮ ವ್ಯಂಗ್ಯ– ಹಾಸ್ಯ ಬೆರೆತ ಮಾತುಗಳೊಂದಿಗೆ ಸರ್ಕಾರಕ್ಕೆ ಚುಚ್ಚಿದವರು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು.
ಅವರ ಮಾತುಗಳಿಗೆ ಸದನ ಗೊಳ್ಳೆಂದು ನಕ್ಕಷ್ಟೇ ಅವರು ಪ್ರಸ್ತಾಪಿಸಿದ ವಿಚಾರಗಳ ಬಗ್ಗೆ ಗಂಭೀರ ಚಿಂತನೆ ನಡೆಸಲು ಸರ್ಕಾರಕ್ಕೆ ಒತ್ತಾಯಿಸಿದ್ದು ವಿಶೇಷವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.