ADVERTISEMENT

ಮಂಗಳವಾರ, 9–5–1995

​ಪ್ರಜಾವಾಣಿ ವಾರ್ತೆ
Published 8 ಮೇ 2020, 20:13 IST
Last Updated 8 ಮೇ 2020, 20:13 IST

ರಾಜ್ಯ ಹೆದ್ದಾರಿ ಪರಿವರ್ತನೆ ಕೇಂದ್ರಕ್ಕೆ ಶಿಫಾರಸು
ಬೆಂಗಳೂರು, ಮೇ 8– ಮೂರು ರಾಜ್ಯ ಹೆದ್ದಾರಿಗಳನ್ನು ತ್ವರಿತವಾಗಿ ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರವೂ ಈ ಬಗ್ಗೆ ಆಸಕ್ತಿ ತೋರಿಸಿದೆ ಎಂದು ಲೋಕೋಪಯೋಗಿ ಸಚಿವ ಶಿವಾನಂದ ಕೌಜಲಗಿ ಅವರು ಇಂದು ಇಲ್ಲಿ ನುಡಿದರು.

ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕೆಂಬ ಹದಿನೇಳು ಪ್ರಸ್ತಾವಗಳು ಕೇಂದ್ರದ ಮುಂದಿವೆ. ಇವುಗಳಲ್ಲಿ ಆದ್ಯತೆಯ ಮೂರು ರಸ್ತೆಗಳನ್ನು ಸೂಚಿಸಬೇಕೆಂಬ ಕೋರಿಕೆ ಮೇರೆಗೆ ಗುಂತಕಲ್‌– ಬಳ್ಳಾರಿ, ಬೆಳಗಾವಿ– ವಿಜಾಪುರ, ದೇವನಹಳ್ಳಿ– ಹೊಸಕೋಟೆ ನಡುವಿನ ರಸ್ತೆಗಳನ್ನು ಶಿಫಾರಸು ಮಾಡಲಾಗಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ತಿಳಿಸಿದರು.

1981ರಿಂದ ರಾಜ್ಯದ ಒಂದು ಕಿಲೊಮೀಟರ್‌ ರಸ್ತೆಯೂ ರಾಷ್ಟ್ರೀಯ ಹೆದ್ದಾರಿಯಾಗಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕೆ ತೀರಾ ಅನ್ಯಾಯ ಆಗಿದೆ. ರಾಜ್ಯಕ್ಕೆ ನ್ಯಾಯ ದೊರಕಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈಗ ಸೂಚಿಸಿರುವ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತದೆ.

ADVERTISEMENT

ಅನಿಲ ಸೋರಿಕೆ: ಇಬ್ಬರ ಸಾವು
ರಾಯಚೂರು, ಮೇ 8– ಕೊಪ್ಪಳ ಸಮೀಪದಲ್ಲಿರುವ ಕಿರ್ಲೋಸ್ಕರ್‌ ಫೆರೋಸ್‌ ಕಂಪನಿಯಲ್ಲಿ ನಿನ್ನೆ ರಾತ್ರಿ ಅನಿಲ ಸೋರಿ ಮಲ್ಲಯ್ಯ ಹಾಗೂ ಸಂತೋಷ್‌ ಕುಮಾರ್ ಎಂಬ ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟು ಇತರ 12 ಜನರು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡವರನ್ನು ಹೊಸಪೇಟೆ ಆಸ್ಪತ್ರೆಗೆ ಸೇರಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.