ಬೆಲೆ ಏರಿಕೆ: ರಾಷ್ಟ್ರ ವ್ಯಾಪ್ತಿ ಪ್ರತಿಭಟನೆಗೆ ಪ್ರತಿಪಕ್ಷಗಳ ನಿರ್ಧಾರ
ನವದೆಹಲಿ, ಫೆ. 2 (ಪಿಟಿಐ)– ಬಜೆಟ್ ಮಂಡನೆಗೆ ಮುನ್ನವೇ ಕೇಂದ್ರ ಸರ್ಕಾರ ಆರಂಭಿಸಿರುವ ಬೆಲೆ ಏರಿಕೆಯ ಸರಪಣಿಗೆ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳಿಂದ ಉಗ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಪಿಎಂ ನೇತೃತ್ವದ ನಾಲ್ಕು ಎಡ ಪಕ್ಷಗಳು ಮುಂದಿನ ವಾರವಿಡೀ ಬೆಲೆ ಏರಿಕೆ ವಿರೋಧಿ ಸಪ್ತಾಹ ಆಚರಿಸುವುದಾಗಿ ಘೋಷಿಸಿವೆ. ಬಿಜೆಪಿಯ ಕೇಂದ್ರ ಪದಾಧಿಕಾರಿಗಳ ಸಭೆ ನಾಳೆ ಇಲ್ಲಿ ಸೇರಲಿದ್ದು ಪ್ರತಿಭಟನೆಯ ತಂತ್ರವನ್ನು ರೂಪಿಸಲಿದೆ. ಜನತಾದಳ ಕೂಡ ಈ ಸಂಬಂಧದಲ್ಲಿ ರಾಷ್ಟ್ರ ವ್ಯಾಪಿ ಚಳವಳಿ ಸಂಘಟಿಸುವುದಾಗಿ ತಿಳಿಸಿದೆ.
ಕಂಪನಿ ಕಾಯಿದೆಗೆ ಮಹತ್ವದ ತಿದ್ದುಪಡಿ
ನವದೆಹಲಿ, ಫೆ. 2 (ಪಿಟಿಐ)– ಆಡಳಿತಗಾರರ ಹುದ್ದೆಗಳಿಗೆ ನೇಮಕ ಮತ್ತು ವೇತನ ನಿಗದಿಪಡಿಸಲು ಕಂಪನಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದೂ ಸೇರಿ ಕಂಪನಿ ಕಾಯಿದೆಗೆ ಕೆಲವು ಮಹತ್ವದ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಇಂದು ಪ್ರಕಟಿಸಿತು.
ಕಾಯಿದೆಯ ಮೂರನೇ ಷೆಡ್ಯೂಲಿನಲ್ಲಿ ಸೇರುವ ಈ ಹೊಸ ತಿದ್ದುಪಡಿ ಫೆಬ್ರುವರಿ ಒಂದರಿಂದಲೇ ಜಾರಿಗೆ ಬಂದಿವೆ.
ಬೂಟಾ ಪ್ರಾಯಶ್ಚಿತ್ತ
ನವದೆಹಲಿ, ಫೆ. 2 (ಪಿಟಿಐ)– ಮಾಜಿ ಗೃಹ ಸಚಿವ ಬೂಟಾ ಸಿಂಗ್ ತಮಗೆ ಆಕಾಲ್ ತಖ್ತ್ ವಿಧಿಸಿರುವ ಪ್ರಾಯಶ್ಚಿತ್ತದ ಉತ್ತರಾರ್ಧವನ್ನು ಇಂದು ದೆಹಲಿಯ ಬಾಂಗ್ಲಾ ಸಾಹಿಬ್ ಗುರುದ್ವಾರದಲ್ಲಿ ಆರಂಭಿಸಿದರು.
‘ನಾನೊಬ್ಬ ಪಾಪಿ’ ಎಂದು ಬರೆದಿದ್ದ ಹಲಗೆಯನ್ನು ಕುತ್ತಿಗೆಗೆ ತೂಗುಹಾಕಿಕೊಂಡ ಅವರು ಗುರುದ್ವಾರದ ಪರಿಕ್ರಮಕ್ಕೆ ಪ್ರದಕ್ಷಿಣೆ ಹಾಕಿ ಹೊರ ಬಾಗಿಲಲ್ಲಿ ಕುಳಿತು ಭಕ್ತರ ಪಾದರಕ್ಷೆಗಳ ಮೇಲಿನ ದೂಳೊರೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.