ADVERTISEMENT

ಮಂಗಳವಾರ, 11–10–1994

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 20:15 IST
Last Updated 10 ಅಕ್ಟೋಬರ್ 2019, 20:15 IST

ಎರಡು ಕಡೆ 36 ತಾಸು ಕರ್ಫ್ಯೂ: ಅಲ್ಲಲ್ಲಿ ಹಿಂಸೆ– ಇನ್ನೂ ಇಬ್ಬರು ಇರಿತಕ್ಕೆ ಬಲಿ
ಬೆಂಗಳೂರು, ಅ. 10–
ಉರ್ದು ವಾರ್ತೆ ವಿರೋಧಿಸಿ ಆರಂಭವಾದ ಹಿಂಸಾಚಾರ ನಾಲ್ಕನೇ ದಿನವಾದ ಇಂದೂ ಕೆಲವು ಪ್ರದೇಶಗಳಲ್ಲಿ ಮುಂದುವರಿದಿದ್ದು ಪರಿಸ್ಥಿತಿ ಉದ್ವಿಗ್ನವಾಗಿತ್ತು. ಮತ್ತೆ ಮರುಕಳಿಸಿದ ಬೆಂಕಿ ಹಚ್ಚುವಿಕೆ ಹಾಗೂ ಇರಿತದ ಪ್ರಕರಣಗಳಲ್ಲಿ ಇಬ್ಬರು ಅಸುನೀಗಿದ್ದಾರೆ. ಇದರೊಂದಿಗೆ ಸತ್ತವರ ಸಂಖ್ಯೆ 25ಕ್ಕೆ ಏರಿದೆ.

ಬ್ಯಾಟರಾಯನಪುರದ ಹೊಸಗುಡ್ಡದ ಹಳ್ಳಿ ಮತ್ತು ಹಳೇಗುಡ್ಡದಹಳ್ಳಿಯಲ್ಲಿ 36 ಗಂಟೆಗಳ ಕರ್ಫ್ಯೂ ಹಾಕಲಾಗಿದೆ. ಗಲಭೆಪೀಡಿತ ಕೆಲ ಸ್ಥಳಗಳಲ್ಲಿ ಜನಜೀವನ ಕ್ರಮೇಣ ಮಾಮೂಲು ಸ್ಥಿತಿಗೆ ಮರಳುತ್ತಿದೆ.

ಬೆಳಿಗ್ಗೆಯಿಂದ ನಗರದ ಹಲವು ಭಾಗಗಳಲ್ಲಿ ಹಬ್ಬಿದ ವದಂತಿಯಿಂದಾಗಿ ಜನರು ದಿಕ್ಕಾಪಾಲಾಗಿ ಓಡಿದರು. ಮಾರುಕಟ್ಟೆ ಬಳಿ ವದಂತಿ ಹಬ್ಬಿಸುತ್ತಿದ್ದ ಮೂವರನ್ನು ಬಂಧಿಸಲಾಯಿತು. ನಾಲ್ಕು ದಿನಗಳಿಂದ ಸುಮಾರು 300 ಜನರನ್ನು ಬಂಧಿಸಲಾಗಿದೆ.

ADVERTISEMENT

ಉರ್ದು ವಾರ್ತೆ ಪ್ರಸಾರ ಅನಗತ್ಯ: ಅನಂತಮೂರ್ತಿ
ಬೆಳಗಾವಿ, ಅ. 10–
ಬೆಂಗಳೂರು ದೂರದರ್ಶನದಿಂದ ಉರ್ದು ವಾರ್ತೆ ಪ್ರಸಾರ ಮಾಡುವ ಕ್ರಮ ಅನಗತ್ಯವಾಗಿತ್ತು ಎಂದು ಖ್ಯಾತ ಲೇಖಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಯು.ಆರ್. ಅನಂತಮೂರ್ತಿ ಇಂದು ಇಲ್ಲಿ ಅಭಿಪ್ರಾಯಪಟ್ಟರು.

ಕನ್ನಡ ಕಾರ್ಯಕ್ರಮಗಳಿಗೆ ಮೀಸಲಾದ ಅವಧಿಯಲ್ಲಿ ಉರ್ದು ವಾರ್ತೆ ಪ್ರಸಾರ ಮಾಡುತ್ತಿರುವುದು ಎಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ವೋಟಿನ ರಾಜಕಾರಣದ ವಿರುದ್ಧ ಸಾಂಸ್ಕೃತಿಕ ಪ್ರತಿರೋಧ ನಡೆಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.