ವೆಚ್ಚದ ಮಿತಿ ದಾಟಿದರೆ ಚುನಾವಣೆ ಮುಂದೂಡಿಕೆ
ಬೆಂಗಳೂರು, ಅ. 20– ಪ್ರತಿ ಅಭ್ಯರ್ಥಿ ದಿನವೂ ಚುನಾವಣಾ ಪ್ರಚಾರಕ್ಕೆ ತಾನು ಖರ್ಚು ಮಾಡುವ ಹಣದ ಸ್ಪಷ್ಟ ಲೆಕ್ಕ ಇಡಬೇಕು. ಅದಕ್ಕೆ ತಪ್ಪಿದರೆ ಅಥವಾ ನಿಗದಿತ ಮೊತ್ತ ಮೀರಿ ವೆಚ್ಚ ಮಾಡಿದರೆ ಚುನಾವಣೆ ಮುಂದೂಡಿಕೆ ಸೇರಿದಂತೆ ಕಠಿಣ ಕ್ರಮ ನಿಶ್ಚಿತ ಎಂದು ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಇಂದು ಇಲ್ಲಿ ಎಚ್ಚರಿಕೆ ನೀಡಿದರು.
ಡಿಸೆಂಬರ್ ಅಂತ್ಯದವರೆಗೆ ಉರ್ದು ವಾರ್ತೆ ಪ್ರಸಾರ ಇಲ್ಲ
ಬೆಂಗಳೂರು, ಅ. 20– ನಗರದ ದೂರದರ್ಶನ ಕೇಂದ್ರದಿಂದ 1994ನೇ ಡಿಸೆಂಬರ್ ಅಂತ್ಯದವರೆಗೆ ಉರ್ದು ವಾರ್ತೆ ಪ್ರಸಾರ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ವಕೀಲರು ಇಂದು ಹೈಕೋರ್ಟಿನಲ್ಲಿ ಹೇಳಿಕೆ ನೀಡಿ ತಿಳಿಸಿದರು.
ಉರ್ದು ವಾರ್ತೆ ಪ್ರಸಾರವನ್ನು ಅ. 9ರಿಂದ ನಿಲ್ಲಿಸಲಾಗಿದೆ.
ನಾಯಿಗೆ ಇಟ್ಟ ಗುರಿ: ಬಾಲಕ ಬಲಿ
ಧಾರವಾಡ, ಅ. 20– ಬೀಡಾಡಿ ನಾಯಿಗಳನ್ನು ಕೊಲ್ಲಲು ಮೀಸಲು ಪಡೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ರೊಬ್ಬರು ಹೊಡೆದ ಗುಂಡು ಗುರಿ ತಪ್ಪಿ ಹೆಡ್ಕಾನ್ಸ್ಟೆಬಲ್ ಒಬ್ಬರ ಹನ್ನೆರಡು ವರ್ಷದ ಮಗನ ಎದೆಗೆ ತಗುಲಿ ಆತ ಮೃತಪಟ್ಟ ದಾರುಣ ಘಟನೆ ಇಲ್ಲಿನ ಜಿಲ್ಲಾ ಪೊಲೀಸ್ ಕೇಂದ್ರ ಸ್ಥಾನದಲ್ಲಿ ಇಂದು ಮುಂಜಾನೆ ನಡೆದಿದೆ.
ಇತ್ತೀಚೆಗೆ ಆ ಪ್ರದೇಶದಲ್ಲಿ ಹೆಚ್ಚಾಗಿರುವ ಬೀಡಾಡಿ ನಾಯಿಗಳನ್ನು ಕೊಲ್ಲಲು ಮೀಸಲು ಪಡೆಯ ಶೇಕಪ್ಪ ಹಲಸೂರ ಅವರು ಗುಂಡು ಹಾರಿಸಿದಾಗ, ನಾರಾಯಣಸಾ ಬದ್ದಿ ಎಂಬ ಬಾಲಕನ ಎದೆಗೆ ತಗುಲಿ ಕುಸಿದುಬಿದ್ದ. ತಕ್ಷಣ ಇಲ್ಲಿನ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರೂ ನಡು ಹಾದಿಯಲ್ಲಿಯೇ ಬಾಲಕ ಕೊನೆಯುಸಿರೆಳೆದ. ಮೃತ ಬಾಲಕನ ತಂದೆ ಪರಶುರಾಮ ಬದ್ದಿ ಹೆಡ್ಕಾನ್ಸ್ಟೆಬಲ್ ಆಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.