ಗ್ಯಾಟ್ ಹಾನಿ ತಡೆಯಲು ಭಾರತ ಯಶಸ್ವಿ: ಪ್ರಧಾನಿ
ನವದೆಹಲಿ, ಡಿ.18– ಬಹುಪಕ್ಷೀಯ ವಾಣಿಜ್ಯ ಭಾರತಕ್ಕೆ ಅನಿವಾರ್ಯ ಗ್ಯಾಟ್ ಒಪ್ಪಂದವನ್ನು ಒಪ್ಪಿಕೊಳ್ಳುವ ಮೂಲಕ ತನಗೆ ಸಾಧ್ಯವಿದ್ದಷ್ಟೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ಇಲ್ಲಿ ಹೇಳಿದರು.
ಅಭ್ಯರ್ಥಿ ಮನೆ ವಿಳಾಸ ಪಡೆಯಲು ನಿರ್ಧಾರ
ನವದೆಹಲಿ, ಡಿ.18– ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅವರ ರಾಜ್ಯಗಳಿಂದ ಮಾತ್ರ ಸ್ಪರ್ಧಿಸುವಂತೆ ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ.
ಭಾರತೀಯ ಪ್ರೆಸ್ಕ್ಲಬ್ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಡಿ.ಎನ್. ಶೇಷನ್ ಅವರು, ಇನ್ನು ಮುಂದೆ ಅಭ್ಯರ್ಥಿಗಳು ತಮ್ಮ ಮನೆಯ ವಿಳಾಸವನ್ನು ಸರಿಯಾಗಿ ನೀಡತಕ್ಕದ್ದು ಹೊರತು ‘ಕೇರಾಫ್ ಮುಖ್ಯಮಂತ್ರಿ’ ವಿಳಾಸವಲ್ಲ ಎಂದರು.
ಗ್ಯಾಟ್ ಒಪ್ಪಂದ ವಿರುದ್ಧ ರಿಟ್
ಬೆಂಗಳೂರು, ಡಿ.18– ‘ಗ್ಯಾಟ್’ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರದ ಸಂವಿಧಾನಕ್ಕೆ ಅಪಚಾರ ಎಸಗಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್ ಮುಂದಿಡುವಂತೆ ರಾಷ್ಟ್ರಪತಿ ಅವರಿಗೆ ಸಲಹೆ ಮಾಡಬೇಕೆಂದು ಕೋರಿ ರಾಜ್ಯ ರೈತ ಸಂಘವು ಸೋಮವಾರ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಿದೆ ಎಂದು ಅದರ ಅಧ್ಯಕ್ಷ ಪ್ರೊ. ಎಂ.ಡಿ. ನಂಜುಂಡಸ್ವಾಮಿ ತಿಳಿಸಿದರು.
ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಗುಜ್ರಾಲ್ ಭರವಸೆ
ಹಾಸನ, ಡಿ.18– ತೋಟದ ಬೆಳೆಗಾರರ ಸಮಸ್ಯೆಯ ಅಧ್ಯಯನಕ್ಕಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ನೇಮಿಸಿರುವ ಸಂಸದೀಯ ಉಪಸಮಿತಿಯು ರೈತ ಸಮುದಾಯದ ಬಗ್ಗೆ ಪೂರ್ಣ ಸಹಾನುಭೂತಿ ತೋರಲಿದೆ ಎಂದು ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಐ.ಕೆ. ಗುಜ್ರಾಲ್ ಇಂದು ಇಲ್ಲಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.